ಕರಾವಳಿ

ಕುಂದಾಪುರದ ಬಸ್ರೂರಿನಲ್ಲಿ ಸೌಹಾರ್ಧ ಕ್ರಿಸ್ಮಸ್ ಆಚರಣೆ

Pinterest LinkedIn Tumblr

ಕುಂದಾಪುರ: ಏಸು ಶಾಂತಿ ಪ್ರೀತಿ ಕ್ಷಮೆಯ ಪ್ರತಿರೂಪ, ತಾನು ಮರಣ ಹೊಂದುವಾಗಲೂ, ಕ್ಷಮೆ ನೀಡಿದಾತ. ನಾನು ಕ್ಷಮಿಸಿದಂತೆ ನೀವು ಇತರರನ್ನು ಕ್ಷಮಿಸಿ, ನಾನು ಪ್ರೀತಿಸಿದಂತೆ, ನೀವು ಇತರರನ್ನು ಪ್ರೀತಿಸಿ ಎಂದು ತನ್ನ ಶಿಷ್ಯರಿಗೆ ಸಂದೇಶ ನೀಡಿದ್ದು ಅದರಂತೆ ನಾವೂ ಪಾಲಿಸಬೇಕು’ ಎಂದು ಬಸ್ರೂರು ಚರ್ಚಿನ ಧರ್ಮಗುರು ವಂ|ಚಾರ್ಲ್ಸ್ ನೊರೊನ್ಹಾ ಹೇಳಿದರು.

ಅವರು ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಹಾಗೂ ಶೆವೊಟ್ ಪ್ರತಿಷ್ಟಾನ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಲ್ಯಾಟಿನ್ ಕೆಥೊಲಿಕ್, ಸೀರೊ ಮಲಬಾರ್ ಕೆಥೊಲಿಕ್, ಸಿ.ಎಸ್.ಐ. ಧರ್ಮಸಭೆ, ಅರ್ಥೊಡ್ಯಾಕ್ಸ್ ಸೀರಿಯನ್ ಹಾಗೂ ಸಮಾಜದ ಇತರ ಬಾಂಧವರೊಂದಿಗೆ ಬಸ್ರೂರು ಸಂತ ಫಿಲಿಪ್ ನೇರಿ ಚರ್ಚ್ ಸಭಾ ಭವನದಲ್ಲಿ ಏರ್ಪಡಿಸಿದ “ಕ್ರಿಸ್ಮಸ್ ಸೌಹಾರ್ದ” ಕಾರ್ಯಕ್ರಮವನ್ನು ಗೀಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಸಂದೇಶ ನೀಡಿದರು. ’ನಿಮ್ಮನ್ನು ಶಪಿಸಿದವರನ್ನು ಪ್ರೀತಿಸಿ, ಯೇಸುವಿನ ಅನುಯಾಯಿಗಳಾದ ಪ್ರತಿಯೊಬ್ಬರು ಯೇಸುವಿನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ’ ಎಂದು ಅವರು ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಸಂದೇಶ ನೀಡಿದ ಉಡುಪಿ ಸಿ ಎಸ್ ಐ ಸಭೆಯ ಮಾಜಿ ವಲಯಾಧ್ಯಕ್ಷರಾದ ವಂ| ಸ್ಟೀವನ್ ಸರ್ವೋತ್ತಮ, ಯೇಸು ಈ ಭೂಲೋಕದಲ್ಲಿ ಬಡವರಲ್ಲಿ ಬಡವನಾಗಿ ಹುಟ್ಟಿದ ಆದರೆ ಆತ ಶಾಂತಿಯ ಅರಸನಾಗಿ ಇಡೀ ವಿಶ್ವವನ್ನೆ ಗೆದ್ದ, ನಮ್ಮನ್ನೆ ಸನ್ಮಾರ್ಗದಲ್ಲಿ ಬದಲಿಸಿಕೊಂಡು ನಮ್ಮನ್ನೆ ಯೇಸುವಿಗೆ ಯೇಸುವಿನ ಜನ್ಮ ದಿನದ ಕಾಣಿಕೆಯಾಗಿ ನೀಡುವ’ ಎಂದು ಸಂದೇಶ ನೀಡಿದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಜಯಪ್ರಕಾಶ್ ಶೆಟ್ಟಿ ’ನಾನು ಬೇರೆಯಲ್ಲ,ನೀನು ಬೇರೆಯಲ್ಲ ಎಂಬ ಭಾವನೆಯೊಂದಿಗೆ, ನಾವೆಲ್ಲಾ ಸೌಹಾರ್ದತೆಯಿಂದ ಬದುಕಬೇಕೆಂದು’ ಹೇಳಿದರು. ಇನ್ನೊರ್ವ ಅತಿಥಿಯಾದ ಬಸ್ರೂರು ಸರಕಾರಿ ಉರ್ದು ಶಾಲೆಯ ಅಧ್ಯಕ್ಷ ಅಬ್ದುಲ್ ಅಜೀಜ್ ’ನಾವೆಲ್ಲಾ ಯೇಸುವಿನ ಹುಟ್ಟು ಸಂದರ್ಭದಲ್ಲಿ ಅವರಿಗೆ ಕಾಣಿಕೆಯಾಗಿ ನಮ್ಮ ಮನೆ ವಠಾದಲ್ಲಿ ಒಂದೊಂದು ಗೀಡವನ್ನು ನಡುವ’ ಎಂದು ಬಿನ್ನಹ ಮಾಡಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಕುಂದಾಪುರ ವಲಯ ಅಧ್ಯಕ್ಷೆ ಮೇಬಲ್ ಡಿಸೋಜಾ ವಹಿಸಿ ’ದೀಪ ಎಲ್ಲರಿಗೂ ಸಮಾನವಾದ ಬೆಳಕನ್ನು ನೀಡುತ್ತದೊ,ಹಾಗೆ ನಾವು ಎಲ್ಲಾ ಸಮಾಜದವರಿಗೆ ಒಳಿತನ್ನು ಮಾಡಿ ಜೀವಿಸೊಣ’ ಎಂದು ಸಂದೇಶ ನೀಡಿದರು.

ಕೆಥೊಲಿಕ್ ಸಭಾ ಕುಂದಾಪುರ ಘಟಕದವರು ಪ್ರಾರ್ಥನೆ ಗೀತೆ ಹಾಡಿದರು, ಬಸ್ರೂರು ಸಂತ ಫಿಲಿಫ್ ನೇರಿ ಚರ್ಚ್ ಸಿ.ಎಸ್. ಐ. ಕೃಪಾ ಚರ್ಚ್ ಕುಂದಾಪುರ ಇವರಿಂದ ಹಾಡು,ನ್ರತ್ಯ ಕಿರು ನಾಟಕವನ್ನು ಪ್ರದರ್ಶಿಸಿದರು. ಶೆವೊಟ್ ಪ್ರತಿಶ್ಟಾನದಿಂದ ಆಯ್ದ ಕೆಲವರಿಗೆ ಮನೆ ಕಟ್ಟಲು ಸಹಾಯ ಧನವನ್ನು ಶೆವೊಟ್ ಪ್ರತಿಷ್ಟಾನ ಅಧ್ಯಕ್ಷ ವಿನೋದ್ ಕ್ರಾಸ್ಟೊ ವಿತರಿಸಿದರು.

ವೇದಿಕೆಯಲ್ಲಿ ಸಿ.ಎಸ್. ಐ. ಕೃಪಾ ಚರ್ಚ್ ಕುಂದಾಪುರ ಇದರ ಉಸ್ತುವಾರಿಗಳಾದ ಜೊಯೆಲ್ ಸುಹಾಸ್, ಸಹ ಸಂಚಾಲಕ ಜೀವನ್ ಸಾಲಿನ್ಸ್, ಹೆರಿಕ್ ಗೊನ್ಸಾಲ್ವಿಸ್ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕರಾದ ಪ್ರೀತಮ್ ಡಿಸೋಜಾ ಸ್ವಾಗತಿಸಿದರು. ಕೆಥೊಲಿಕ್ ಸಭಾ ಕುಂದಾಪುರ ವಲಯ ಕಾರ್ಯದರ್ಶಿ ಮೆಲ್ವಿನ್ ಫುರ್ಟಾಡೊ ವಂದಿಸಿದರು. ಶೈಲಾ ಡಿ‌ಆಲ್ಮೇಡಾ ನಿರೂಪಿಸಿದರು.

Comments are closed.