ಕರಾವಳಿ

ಕೊರೋನಾ ವರದಿಗೂ ಮೊದಲೇ ಕ್ವಾರೆಂಟೈನ್’ನಿಂದ ಮನೆಗೆ: ಹೆಚ್ಚಿದ ಪಾಸಿಟಿವ್ ಕೇಸುಗಳು..!

Pinterest LinkedIn Tumblr

ಕುಂದಾಪುರ: ಸರ್ಕಾರದ ಹೊಸ ನಿಯಮಾವಳಿಗಳಂತೆ ಕನಿಷ್ಠ ಕ್ವಾರಂಟೈನ್‌ ವರದಿಯನ್ನು ಮುಗಿಸಿ ಪರೀಕ್ಷಾ ವರದಿ ಬರುವುದಕ್ಕಿಂತ ಮೊದಲೆ ಮನೆ ಸೇರಿಕೊಳ್ಳುತ್ತಿರುವವರಿಂದ ಬರುತ್ತಿರುವ ಕೊವಿಡ್‌ ಪಾಸಿಟಿವ್‌ ಪ್ರಕರಣಗಳಿಂದಾಗಿ ಕುಂದಾಪುರ ಹಾಗೂ ಬೈಂದೂರಿನ ಹಲವು ಪ್ರದೇಶಗಳನ್ನು ಕಂಟೈನ್‌ಮೆಂಟ್‌ ಪ್ರದೇಶಗಳಾಗಿ ನಿರ್ಬಂಧಗೊಳಿಸಲಾಗುತ್ತಿದೆ.

ಮೇ.30 ರಂದು ಬಂದಿದ್ದ ಸೋಂಕು ದೃಡೀಕೃತ 9 ಪ್ರಕರಣಗಳಿಂದಾಗಿ ಕುಂದಾಪುರ ತಾಲ್ಲೂಕಿನ ಗುಜ್ಜಾಡಿ, ಬಸ್ರೂರು, ನೆಂಪು, ಕೋಡಿ, ವಡೇರಹೋಬಳಿ, ಹಳ್ನಾಡು ಹಾಗೂ ಬೈಂದೂರು ತಾಲ್ಲೂಕಿನ ಉಳ್ಳೂರು–11 ಹಾಗೂ ಬಡಾಕೆರೆ ಗ್ರಾಮಗಳ ಕೆಲವು ಪ್ರದೇಶಗಳನ್ನು ಕಂಟೈನ್‌ಮೆಂಟ್‌ ಹಾಗೂ ಬಫರ್‌ ಪ್ರದೇಶಗಳಾಗಿ ಗುರುತಿಸಿ ಪೊಲೀಸ್‌ ಬ್ಯಾಂಡ್‌ ಕಟ್ಟಿ ಅಲ್ಲಿನ ನಿರ್ದಿಷ್ಟ ಚಟುವಟಿಕೆಗಳನ್ನು ನಿರ್ಬಂಧಗೊಳಿಸಲಾಗಿತ್ತು.

ಮೇ.31 ರಂದು ಬೈಂದೂರು ತಾಲ್ಲೂಕಿನ ಕಾಲ್ತೂಡು ಗ್ರಾಮದ ಕಬ್ಸೆಯಲ್ಲಿ ಒಂದು ಪ್ರಕರಣ ಮಾತ್ರ ದಾಖಲಾಗಿತ್ತು. ಇದೀಗ ಸೋಮವಾರ ಬಂದಿರುವ ಪರೀಕ್ಷಾ ವರದಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಒಟ್ಟು 15 ಪ್ರಕರಣಗಳಲ್ಲಿ ಕೊವಿಡ್‌ ಸೋಂಕು ದೃಢವಾಗಿದೆ. ಇಂದಿನ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಬೈಂದೂರು ಭಾಗದಲ್ಲಿ ವರದಿಯಾಗಿದೆ.

ಹರ್ಕೂರು, ನಾಡಾ, ದೊಂಬೆ ಶಿರೂರು, ಯಡ್ತರೇ, ಬೈಂದೂರು ಹಾಗೂ ಕೆರ್ಗಾಲ್‌ ಗ್ರಾಮಗಳಲ್ಲಿನ ಒಟ್ಟು 6 ಕಡೆಗಳಲ್ಲಿ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ನಿರ್ದಿಷ್ಟ ಚಟುವಟಕೆಗಳನ್ನು ನಿರ್ಬಂಧಿಸಲಾಗಿದೆ. ಕೊವಿಡ್‌ ಸೋಂಕು ದೃಢಿಕೃತರಾದವರನ್ನು ಅಲ್ಲಿಂದ ಚಿಕಿತ್ಸೆಗಾಗಿ ಕೊವಿಡ್‌ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಅವರ ಸಂಪರ್ಕಿತರನ್ನು ಗಂಟಲು ದೃವಗಳನ್ನು ತೆಗೆದು ಪರೀಕ್ಷಾ ವರದಿಗಾಗಿ ಕಳುಹಿಸಲಾಗುತ್ತಿದೆ. ಸೋಂಕು ಪತ್ತೆಯಾದವರ ಮನೆ ಇರುವ ಪ್ರದೇಶದ 100 ಮೀಟರ್‌ ಸುತ್ತಳತೆಯಲ್ಲಿ ಪೊಲೀಸ್‌ ಬ್ಯಾಂಡ್‌ಗಳನ್ನು ಕಟ್ಟಿ ಸಾರ್ವಜನಿಕ ಪ್ರವೇಶ, ತಿರುಗಾಟ ಹಾಗೂ ಇತರ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಕಂದಾಯ, ಪೊಲೀಸ್‌ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

Comments are closed.