ಕರಾವಳಿ

ಗ್ರಾಮ ಪಂಚಾಯತ್‍ಗಳು, ಸ್ವಾವಲಂಬಿ ಮತ್ತು ಸದೃಢವಾಗಬೇಕು- ಕೆ. ರಘುಪತಿ ಭಟ್

Pinterest LinkedIn Tumblr

ಉಡುಪಿ: ಗ್ರಾಮ ಪಂಚಾಯತ್‍ಗಳು ಸ್ವಾವಲಂಬಿ ಮತ್ತು ಸದೃಢವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 14 ನೇ ಹಣಕಾಸು ನಿಧಿಯಡಿ ನೇರವಾಗಿ ಪಂಚಾಯತ್‍ಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದ್ದು, ಪಂಚಾಯತ್‍ಗಳು ಇದರ ಸಮಗ್ರ ಪ್ರಯೋಜನ ಪಡೆಯಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಅವರು ಸೋಮವಾರ, ರೂ. 36.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಲ್ಯಾಣಪುರ ಗ್ರಾಮ ಪಂಚಾಯತ್ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯತ್‍ಗಳು ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಸಮಗ್ರವಾಗಿ ಬಳಸಿಕೊಳ್ಳುವಂತೆ ತಿಳಿಸಿದ ಶಾಸಕ ರಘುಪತಿ ಭಟ್, ಪಂಚಾಯತ್‍ಗೆ ದೊರೆತ ಮರಳು ರಾಯಧನ ಮತ್ತು ಪಂಚಾಯತ್‍ನ ಆದಾಯದಿಂದ ಸ್ವಂತ ಕಟ್ಟಡ ನಿರ್ಮಿಸಿಕೊಂಡಿರುವ ಕಲ್ಯಾಣಪುರ ಗ್ರಾಮ ಪಂಚಾಯತ್ ಇತರೆ ಪಂಚಾಯತ್‍ಗಳಿಗೆ ಮಾದರಿಯಾಗಿದೆ, ಈ ಪಂಚಾಯತ್‍ನ ಮೇಲ್ಛಾವಣಿಯಲ್ಲಿ ಸಭಾಂಗಣ ನಿರ್ಮಿಸಲು ಶಾಸಕರ ನಿಧಿಯಿಂದ ಅಗತ್ಯ ಅನುದಾನ ನೀಡಲಾಗುವುದು ಎಂದರು.

ಗ್ರಾಮ ಪಂಚಾಯತ್‍ಗಳು ಎದುರಿಸುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತಂತೆ, ಪ್ರಸ್ತುತ ಉಡುಪಿಯ ಕರ್ವಾಲು ನಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯವನ್ನು ಅತ್ಯಂತ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತಂತೆ ವಿಸ್ತ್ರತ ಯೋಜನಾ ವರದಿ ತಯಾರಿಸಿ ಅದನ್ನು ಅನುಷ್ಠಾನಗೊಳಿಸಲು ಟೆಂಡರ್ ಕರೆದಿದ್ದು, ಇದಕ್ಕಾಗಿ ಎರಡು ಕಂಪೆನಿಗಳು ಆಸಕ್ತಿ ವಹಿಸಿದ್ದು, ಕರ್ವಾಲಿನ ತ್ಯಾಜ್ಯ ವಿಲೇವಾರಿಯಾದ ನಂತರ, ಉಡುಪಿ ಕ್ಷೇತ್ರದ ಗ್ರಾಮ ಪಂಚಾಯತ್‍ಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಪ್ರತಿ ಟನ್‍ಗೆ ದರ ನಿಗಧಿ ಮಾಡಿ, ಕರ್ವಾಲಿನಲ್ಲಿಯೇ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಚಿಂತನೆ ಇದೆ, ಪಂಚಾಯತ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಾರಾಹಿಯ ನೀರನ್ನು ಭರತ್ಕಲ್‍ನಲ್ಲಿ ಶುದ್ಧೀಕರಿಸಿ, ಉಡುಪಿಗೆ ತರುವ ಯೋಜನೆ ಇದ್ದು, ಉಡುಪಿಗೆ ಬರುವ ಮಾರ್ಗದಲ್ಲಿರುವ ಉಡುಪಿ ಕ್ಷೇತ್ರದ 19 ಗ್ರಾಮ ಪಂಚಾಯತ್‍ಗಳಿಗೆ ನೀರು ನೀಡಲಾಗುವುದು ಎಂದು ಹೇಳಿದರು.

ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ಎಸ್.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ತೋನ್ಸೆ, ತಾ.ಪಂ. ಸದಸ್ಯ ಧನಂಜಯ ಕುಂದರ್, ದಿನಕರ ಹೇರೂರು, ಸುಲೋಚನಾ, ಕೆಮ್ಮಣ್ಣು ಗ್ರಾ.ಪಂ. ಅಧ್ಯಕ್ಷೆ ಫೌಜಿಯಾ ಸಾದಿಕ್, ಕಲ್ಯಾಣಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಲ್ಲಿ, ಉಡುಪಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್, ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ಕಲ್ಯಾಣಪುರ ಗ್ರಾಮ ಪಂಚಾಯತ್‍ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃಧ್ದಿ ಅಧಿಕಾರಿ ಸುರೇಶ್ ಸ್ವಾಗತಿಸಿದರು, ಸತೀಶ್ ಚಿತ್ರಪಾಡಿ ನಿರೂಪಿಸಿದರು.

Comments are closed.