ಕರಾವಳಿ

ಕರಾವಳಿ ಕರ್ನಾಟಕದ ಮುದ್ರಾಡಿಯ ನಾಟ್ಕದೂರಿನ ರಂಗಕರ್ಮಿ ಕಲಾತಪಸ್ವಿ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್

Pinterest LinkedIn Tumblr

ಕರ್ನಾಟಕದ ಕಡಲ ತೀರದ ನಾಡಾದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ‘ಮುದ್ರಾಡಿ’ ಗ್ರಾಮ ರಂಗಾಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಚ್ಚೆ ಪೈರು, ಹೊಲ ಗದ್ದೆಗಳು, ಗಗನವನ್ನು ಚುಂಬಿಸುತ್ತಿರುವ ತೆಂಗು ಕಂಗು ವೃಕ್ಷರಾಶಿ, ಕಲುಷಿತ ವಾತಾವರಣದ ನಗರ ಮಾಲಿನ್ಯದ ಸೊಂಕೇ ತಗಲದಿರುವ ಸುಂದರ ಸೊಬಗಿನ ಸೃಷ್ಠಿಯ ನಾಡು ‘ನಾಟ್ಕದೂರು’ “ಮುದ್ರಾಡಿ ಗ್ರಾಮದಲ್ಲಿದೆ ‘ನಮ ತುಳುವೆರ್’ ಕಲಾ ಸಂಘಟನೆ.

“ನಮ ತುಳುವೆರ್” ಸಂಘಟನೆಯ ಸ್ಥಾಪಕರು ಅಧ್ಯಕ್ಷರು, ರಂಗನಟರು, ನಿರ್ದೇಶಕರು, ನಾಟಕ ರಚನೆಕಾರರು, ‘ನಾಟ್ಕದೂರು’ “ಮುದ್ರಾಡಿ ಗ್ರಾಮವನ್ನು” ವಿಶ್ವ ಭೂಪಟದಲ್ಲಿ ಮೂಡಿಸಿ ವಿಶ್ವದಾದ್ಯಂತ ರಂಗಭೂಮಿ ಆಸಕ್ತರು ನೋಡುವಂತಹ ಸಾಧನೆ ಮಾಡಿರುವ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್ ರವರ ಹೆಜ್ಜೆ ಗುರುತನ್ನು ದಾಖಲಿಸುವ ವಿಶೇಷ ಲೇಖನ…

34ನೇ ವರ್ಷಚಾರಣೆಯ ಸಂಭ್ರಮದಲ್ಲಿರುವ “ನಮ ತುಳುವೆರ್ ಕಲಾ ಸಂಘಟನೆ (ರಿ.)- ಮುದ್ರಾಡಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ದೇವಸ್ಥಾನದ ಆಶ್ರಯದಲ್ಲಿ 1985 ರಲ್ಲಿ ನವರಾತ್ರಿಯ ಶುಭ ದಿನದಂದು ಆದಿಶಕ್ತಿ ದೇವಿಯ ಆರಾಧಕರಾಗಿ ಜನಮಾನಸದಲ್ಲಿ ಪೂಜ್ಯ ಸ್ಥಾನವನ್ನು ಪಡೆದಿರುವ ಧರ್ಮಯೋಗಿ ಪೂಜ್ಯ ಮೋಹನ ಸ್ವಾಮಿಜಿಯವರ ಆಶಿರ್ವಾದದೊಂದಿಗೆ ಪ್ರಾರಂಭಗೊಂಡಿರುವ ಕಲಾರಂಗ ಸಂಸ್ಥೆ ” ನಮ ತುಳುವೆರ್ ಕಲಾ ಸಂಘಟನೆ” ಕನ್ನಡ, ಹಳೆಗನ್ನಡ, ತುಳು ನಾಟಕಗಳನ್ನು ಗ್ರಾಮೀಣ ಮಟ್ಟದಿಂದ ರಾಜ್ಯ ಮಟ್ಟ, ರಾಷ್ಟ್ರ ಮಟ್ಟದವರೆಗೆ ನೂರಾರು ಪ್ರದರ್ಶನ, ಸ್ಪರ್ಧೆಗಳ ಮೂಲಕ ಪ್ರಸಿದ್ಧಿಯನ್ನು ಪಡೆದು ರಾಷ್ಟ್ರ ಮಟ್ಟದ ಪ್ರಶಸ್ತಿಗಳ ಸರಮಾಲೆಯನ್ನು ಧರಿಸಿಕೊಂಡಿರುವ ಕಲಾ ಸಂಸ್ಥೆ. ಹಳ್ಳಿಗಳಲ್ಲಿ ರಂಗ ಭೂಮಿ ಬೇರು ಬಿಟ್ಟಾಗ ಹೊಸ ನೈಜ್ಯ ಶಕ್ತಿಯನ್ನು ನೀಡುತ್ತದೆ. ಇದು ಗ್ರಾಮವನ್ನು ಸಬಲಿಕರಣ ಮಾಡುವ ಒಂದು ಕ್ರಮ ಎಂಬುದನ್ನು ಮನಗಂಡಿರುವ ಈ ಕಲಾ ಸಂಸ್ಥೆ ದಿನೇ ದಿನೇ ತನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ಎತ್ತರೆತ್ತರಕ್ಕೆ ಬೆಳೆದು ನಿಂತಿದೆ.

ನಮಗಾಗಿ ನಮ್ಮವರು ಚಿಂತಿಸುವುದು ಸ್ವಾಭಾವಿಕ, ಸಮಾಜಕ್ಕೆ ಸಂದೇಶಗಳನ್ನು ನಾಟಕಗಳ ಮೂಲಕ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನವನ್ನು ಮೂವತ್ತನಾಲ್ಕು ವರ್ಷಗಳಿಂದ ಸುಮಾರು ತೊಂಬತ್ತಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿ, ಸಾವಿರದ ಐನೂರಕಿಂತಲೂ ಹೆಚ್ಚು ನಾಟಕಗಳ ಮೂಲಕ ಜನ ಜಾಗೃತಿಯನ್ನು ಮೂಡಿಸಿ ಹಳ್ಳಿಯಲ್ಲಿ ಮಿಂಚಿದ ಕಲಾತಂಡ. ಗಿನ್ನೆಸ್ ಬುಕ್ಕಿನಲ್ಲಿ ದಾಖಲೆ ಪಡೆಯುವ ದಿನ ತುಂಬಾ ದೂರವಿಲ್ಲ.

ಧರ್ಮಯೋಗಿ ಪೂಜ್ಯ ಮೋಹನ ಸ್ವಾಮಿಜಿ ಮತ್ತು ಧರ್ಮ ಪತ್ನಿ ಶ್ರೀಮತಿ ಕಮಲಾ ಮೋಹನ್, ಮಕ್ಕಳಾದ ಸುಕುಮಾರ್ ಮೋಹನ್, ಮಗಳು ಸುಗಂಧಿ ಉಮೇಶ್, ಮೂರನೆಯ ಮಗ ಸುಧೀಂದ್ರ ಮೋಹನ್, ಕೊನೆಯ ಮಗ ಸುರೇಂಧ್ರ ಮೊಹನ್. ಮಗಳ ಕೈಹಿಡಿದ ಅಳಿಯ ಉಮೇಶ್ ಕಲ್ಮಾಡಿ ಕಲಾ ದೇವಿಯ ಆರಾಧನೆಗೆ ಸಮರ್ಪಿಸಿ ಕೊಂಡು ಕಲಾ ಸೇವೆಯನ್ನು ಮಾಡುತಿದ್ದಾರೆ.

ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷರಾಗಿ ಜವಬ್ಧಾರಿಯನ್ನು ಹೊತ್ತಿರುವ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್ ರವರು ರಂಗಭೂಮಿ ಒಂದು ಪ್ರಬಲ ಮಾಧ್ಯಮವನ್ನಾಗಿಸಿ, ವ್ಯಕ್ತಿಯ ಭಾವ ಸಂವೇದನೆಯನ್ನು ಉದ್ದೀಪಿಸಿ, ಚಿಂತನ ಶೀಲತೆಯನ್ನು ವೃದ್ಧಿಸುವ ಗುಣವನ್ನು ಅರಿತಿದ್ದಾರೆ. ಕುಗ್ರಾಮದಲ್ಲಿ ಕಲಾತಂಡ ಕಟ್ಟಿ ಬೆಳೆಸಿ ಕೆಚ್ಚೆದೆಯೊಂದಿಗೆ ಗ್ರಾಮೀಣ ಪ್ರದೇಶದಲ್ಲೇ ರಂಗ ಪ್ರಯೋಗಗಳನ್ನು ಮಾಡುತ್ತಾ, ರಾಜ್ಯ ಅಕಾಡೆಮಿಗಳಿಗೆ ಸರಿ ಸಾಟಿಯಾಗಿ, ಮುದ್ರಾಡಿಯ ನಮ ತುಳುವೆರು ಕಲಾ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ.

ಸೃಜನ ಶೀಲಾ ವ್ಯಕ್ತಿಯಾಗಿರುವ ಸುಕುಮಾರ್ ಮೋಹನ್ ನಾಟಕ ರಂಗ ಕ್ಷೇತ್ರದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿ ಸುಕುಮಾರ್ ಮೋಹನ್ ರವರು 2010-2011 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ “ನಮ ತುಳುವೆರ್ ಸಂಘಟನೆಗೆ ಇನ್ನಷ್ಟು ಬಲ ತುಂಬಿಸಿದ್ದಾರೆ. ನಮ ತುಳುವೆರು ಕಲಾ ಸಂಘಟನೆಯ ಹೆಜ್ಜೆ ಗುರುತು…

ಸುಕುಮಾರ್ ಮೋಹನ್ ಮುದ್ರಾಡಿ ಆದಿಶಕ್ತಿ ದೇವಾಸ್ಥಾನದ ಆಶ್ರಯದಲ್ಲಿ ‘ನಮ ತುಳುವೆರ್ ಕಲಾ ಸಂಘಟನೆ’ ಪ್ರಾರಂಭವಾದಾಗ ದೈವ ಚಿತ್ತ, ಛಲ, ಗುರಿ, ತಾಳ್ಮೆ, ಹಟ. ಪರಿಶ್ರಮವನ್ನೇ ಮೂಲ ಬಂಡವಾಳವನ್ನಾಗಿರಿಸಿ ಕೊಂಡು ನಾಟಕ ತಂಡವನ್ನು ಕಟ್ಟಿದವರು. ನಾಟಕವನ್ನು ರಂಗ ವೇದಿಕೆಯ ಮೇಲೆ ತರುವಲ್ಲಿ ಹಗಲು ಕನಸು ಕಂಡು, ರಾತಿಯಲ್ಲಾ ಕನವರಿಸಿದರು., ಟೊಂಕ ಕಟ್ಟಿ ನಿಂತರು, ವಿಚಾರ ವಿನಿಮಯ ಮಾಡಿಕೊಂಡರು. ನಾಟಕ ರಚನೆಯಾಯಿತು. ನಟನಾ ವರ್ಗ, ತಾಂತ್ರಿಕ ವರ್ಗ ನಾಟಕವನ್ನು ಪಂಚಮವೇದ, ತಪಸ್ಸು ಎಂದೇ ಭಾವಿಸಿದರು. ಕಲಾವಿದನು ತನ್ನನ್ನು ತೊಡಗಿಸಿ ಕೊಂಡರೆ ಕಲಾದೇವಿಯು ಸಿದ್ದಿಸುವುದು ಖಂಡಿತ ಎನ್ನುವುದನ್ನು ಮನಗಂಡರು. ಹಳ್ಳಿಯೊಂದರಲ್ಲಿ ಕಲಾತಂಡ ಜಾಗೃತವಾಯಿತು. ಎಲ್ಲಾ ವರ್ಗದವರನ್ನು ಬರುವಂತೆ ಪ್ರೇರಣೆ ನೀಡಿ ನಾಟಕದ ಮಹತ್ವ ಮನದಟ್ಟು ಮಾಡಿ ಅಪಾರ ಪರಿಶ್ರಮ ಪಟ್ಟರು. ಬಾಯಿಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಹಳ್ಳಿ, ಹಳ್ಳಿಯುದ್ದಕ್ಕೂ, ಮುದ್ರಾಡಿಯ ನಾಟಕ ತಂಡ, ಕಥೆ ಅಲೆ ಅಲೆಯಾಗಿ ಹರಡಿ ಇಂದು ಭದ್ರ ಬುನಾಧಿಯನ್ನು ಪಡೆದಿದೆ.

ಸುಕುಮಾರ್ ಮೋಹನ್ ರವರ ಅಧುನಿಕ ರಂಗ ಪ್ರಯೋಗಗಳ ಚೈತ್ರಯಾತ್ರೆ….

ಸುಕುಮಾರ್ ಮೋಹನ್ ರವರು ನಮ ತುಳುವೆರ್ ಕಲಾ ಸಂಘಟನೆ ಪ್ರಾರಂಭದ ವರ್ಷಗಳಲ್ಲಿ ಸಾಂಪ್ರದಾಯ ರಂಗ ಪ್ರಯೋಗಗಳನ್ನು ಮಾಡಿಕೊಂಡು, ನಂತರದ ವರ್ಷಗಳಲ್ಲಿ ಅಧುನಿಕ ರಂಗ ಪ್ರಯೋಗಗಳ ಚೈತ್ರ ಯಾತ್ರೆಯನ್ನು ರಾಜ್ಯದ್ಯಾದಂತ ಮಾಡಿ ನಾಟಕಾಸಕ್ತರನ್ನು ಮುಟ್ಟಿ ಜನಮನ ಗೆದ್ದಿದ್ದಾರೆ. ಪ್ರಯೋಗಗಳಲ್ಲಿ ಹೆಚ್ಚಿನವು ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನವರಂಗೋತ್ಸವ…

1990 ರಿಂದ 10 ವರ್ಷಗಳ ಕಾಲ ರಾಜ್ಯಮಟ್ಟದ ನಾಟಕ ಸ್ಪರ್ಧೆ, 2000 ದಲ್ಲಿ 9 ದಿನಗಳ ನಾಟಕ ನವರಂಗೋತ್ಸವ, 2007 ರಲ್ಲಿ 20 ದಿನಗಳ ನಾಟಕೋತ್ಸವ, 25 ನೇ ವರ್ಷಾಚರಣೆಯಲ್ಲಿ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ 25 ಊರುಗಳಲ್ಲಿ 25 ನಾಟಕೋತ್ಸವ ನಡೆಸಿದ ಸಾಧನೆ. ಮುದ್ರಾಡಿಯಲ್ಲಿ ನಡೆದ ನವರಂಗೋತ್ಸವದಲ್ಲಿ ಅಮೆರಿಕಾದ ಫ್ಲೋರಿಡಾ ನಿವಾಸಿ ಗೇಲ್ ವಿಶೇಷ ಅತಿಥಿಯಾಗಿ ಭಾಗವಹಿಸಿ ಶ್ಲಾಘಿಸಿದ್ದು ನಮ ತುಳುವೆರು ಸಂಘಟನೆಗೆ ವಿದೇಶಿಯರಿಂದ ಸುಕುಮಾರ್ ಮೋಹನ್ ತಂಡದವರಿಗೆ ಸಂದ ಗೌರವವಾಗಿದೆ.

ರಾಷ್ಟ್ರ ಪ್ರಶಸ್ತಿ ಪಡೆದ 487 ಪ್ರಯೋಗಗಳನ್ನು ದಾಟಿದ “ಪಿಲಿಪತ್ತಿ ಗಡಸ್”

ಬಹುಭಾಷಾ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಉತ್ತಮ ಪ್ರಯೋಗ, ಉತ್ತಮ ನಟ, ನಟಿ, ಸಂಗೀತ, ನಿರ್ದೇಶನ, ರಂಗ ವಿನ್ಯಾಸ, ಬೆಳಕು ಎಲ್ಲಾ ವಿಭಾಗದಲ್ಲಿ ಪ್ರಥಮ ಸಾಲಿನಲ್ಲಿ ಆಯ್ಕೆಯಾಗಿ ರಾಷ್ಟ್ರ ಪ್ರಶಸ್ತಿ ಪಡೆದ “ಪಿಲಿ ಪತ್ತಿ ಗಡಸ್” ಶ್ರೀ ಡಿ. ಕೆ. ಚೌಟ ರ ರಚನೆಯಲ್ಲಿ, ಜೀವನ್ ರಾಂ ಸುಳ್ಯ ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮನೋಜ್ಞ ನಾಟಕ. ಪ್ರೇಕ್ಷಕರ ಉಸಿರು ಬಿಗಿಹಿಡಿದು ಸಂದೇಶದೊಂದಿಗೆ ಅಂತ್ಯಕಾಣುವ ತುಳು ನಾಟಕ ಪ್ರತಿ ಪ್ರದರ್ಶನದಲ್ಲಿಯೂ ಯಶಸ್ಸು ಕಾಣುತ್ತಿರುವ ಮುದ್ರಾಡಿ ನಮ ತುಳುವೆರ್ ಸಂಘಟನೆಯ “ನಾಟ್ಕ” ತಂಡದ ಪರಿಪಕ್ವವಾದ ಅಭಿನಯದಲ್ಲಿ ಮೂಡಿ ಬರುತ್ತಿರುವ ಪ್ರಯೋಗವಾಗಿದೆ. “ನಮ ತುಳುವೆರ್ ಕಲಾ ಸಂಘಟನೆ” ಪಿಲಿಪತ್ತಿ ಗಡಸ್ ನಾಟಕ ಕರ್ತೃ ಡಿ. ಕೆ. ಚೌಟರಿಗೆ ತೌಳನ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಸುಕುಮಾರ್ ಮೋಹನ್ ರವರು ಮಧ್ಯಪಾನ ವಿರುದ್ಧ ಜಾಗೃತಿ – ಬೀದಿ ನಾಟಕಗಳ ಮೂಲಕ ನಮ ತುಳುವೆರ್ ಕಲಾ ಸಂಘಟನೆ ಎಂಟು ಮಂದಿ ಕಲಾವಿದರ ತಂಡದೊಂಡಿಗೆ 150 ಕಡೆಗಳಲ್ಲಿ “ಮಧ್ಯಾಸುರ ವಧೆ” ಮಧ್ಯಪಾನದ ವಿರುದ್ಧ ಜಾಗೃತಿ ಬೀದಿ ನಾಟಕಗಳ ಮೂಲಕ ನಡೆಸಿದೆ. ನೈರ್ಮಲ್ಯದ ಜಾಗೃತಿಯಾಗಿ ” ಕಸಾಸುರ ವಧೆ” ಬಾಲಕಾರ್ಮಿಕ, ಇತ್ಯಾದಿ ನಾಟಕಗಳ ಮೂಲಕ ಸಾಮಾಜಿಕ ಬದುಕಿನಲ್ಲಿ ಜಾಗೃತಿ ಮೂಡಿಸುತ್ತಿರುವುದು ಹೆಗ್ಗಳಿಕೆಯಾಗಿದೆ ಮಕ್ಕಳಿಗಾಗಿ ‘ಚಿಣ್ಣರ ರಂಗ”ಬಾಲ್ಯ ಅತಿ ಅಮೂಲ್ಯ’ ಸಾರುವ ಮಕ್ಕಳ ಮಾಯಲೋಕ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಮಕ್ಕಳು ನೀಡಿದರೆ, ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಕ್ಕಳ ನಾಟಕ ಹಬ್ಬ, ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ 350 ಅಡಿ ಉದ್ದದ ಬಿಳಿ ಬಟ್ಟೆಯ ಮೇಲೆ ಚಿಣ್ಣರು ಚಿತ್ರ ರಚಿಸಿ, ಚಿಣ್ಣರ ಬಿತ್ತಿಪತ್ರ ಕಾರ್ಯಗಾರದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. 250 ವಿದ್ಯಾರ್ಥಿಗಳು ಮಲ್ಪೆಯ ಕಡಲ ತೀರದಲ್ಲಿ ಮರಳ ಶಿಲ್ಪ ರಚಿಸಿ ತಮ್ಮ ಹಸ್ತ ಕೌಶಲ್ಯವನ್ನು ತೋರಿಸಿಕೊಟ್ಟಿದ್ದಾರೆ. 2009 ರಿಂದ ಯುವ ಪ್ರತಿಭೆಗಳನ್ನು ಗುರುತ್ತಿಸುವ ಸಲುವಾಗಿ ಬಿ.ವಿ.ಕಾರಂತ ಯುವ ಪ್ರಶಸ್ತಿ ಪ್ರಾರಂಭಿಸಿ ರಾಜು ಮಣಿಪಾಲ್ ರವರಿಗೆ ನೀಡಿ ಗೌರವಿಸಿದೆ.

ಸುಕುಮಾರ್ ಮೋಹನ್ ರವರು ಪ್ರಾರಂಭಿಸಿರುವ “ಕರ್ನಾಟ ನಾಡ ಪೋಷಕ ಪ್ರಶಸ್ತಿ” ನಮ ತುಳುವೆರ್ ಕಲಾ ಸಂಘಟನೆ ಕಳೆದ 30 ವರ್ಷಗಳಿಂದ ನಾಡು ನುಡಿ, ಸೇವೆ ಸಲ್ಲಿಸಿದ ಗಣ್ಯರಿಗೆ “ಕರ್ನಾಟ ನಾಡ ಪೋಷಕ ಪ್ರಶಸ್ತಿ” ನೀಡಿ ಗೌರವಿಸಿದೆ. ಪ್ರಶಸ್ತಿ ನೀಡಿ ಗೌರವಿಸಿದ ಮಹನಿಯರು ಡಾ. ಶಾಂತರಾಂ, ಶ್ರೀ ಪ್ರಮೋದ್ ಮಧ್ವರಾಜ್, ಡಾ. ಮೋಹನ್ ಆಳ್ವ, ಶ್ರೀ ದಿವಾಕರ ಎನ್. ಶೆಟ್ಟಿ, ಶ್ರೀ ಆಸ್ಕರ್ ಫೆರ್ನಾಂಡಿಸ್ ಹಾಗೂ ಹಲವಾರು ಕಲಾಪೋಷಕರಿಗೆ ನೀಡಿ ಗೌರವಿಸಿದ್ದಾರೆ.

ನಾಟಕೋತ್ಸವದಲ್ಲಿ ಹಲವಾರು ಅಭಿಮಾನಿಗಳು ಧಾನಿಗಳು ಸಹಾಯ ಹಸ್ತ ನೀಡಿದ್ದು, ಧರ್ಮಸ್ಥಳದ ಧರ್ಮಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮೆ, ರಾಷ್ಟ್ರೀಯ ಸಾಂಸ್ಕೃತಿಕ ಮಂತ್ರಾಲಯ-ದೆಹಲಿ ಇವರುಗಳನ್ನು ಸುಕುಮಾರ್ ಮೋಹನ್ ಹಾಗೂ ನಮ ತುಳುವೆರ್ ಕಲಾ ಸಂಘಟನೆಯ ಸರ್ವ ಸದಸ್ಯರು ಸದಾ ಸ್ಮರಿಸಿಕೊಳ್ಳುತ್ತಾರೆ. ಕಲಾ ಸೇವೆಯಲ್ಲಿ ಧನ್ಯತೆಯನ್ನು ಪಡೆದ “ನಾಟ್ಕ” ತಂಡ ನಮ ತುಳುವೆರ್ ಕಲಾ ತಂಡದಲ್ಲಿ ಹವ್ಯಾಸಿ ಕಲಾವಿದರು ಸೇರಿ ನಲ್ವತೈದು ಮಂದಿ ಇದ್ದಾರೆ. ತಾಂತ್ರಿಕ ವರ್ಗದಲ್ಲಿ ಹನ್ನೆರಡು ಮಂದಿ ಇದ್ದು ತಂಡವು “ನಾಟ್ಕ” ಎಂಬ ಹೆಸರಿನಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಕಛೇರಿಗೆ ‘ನಾಟಕ ಚಾವಡಿ’ ವರ್ಣಲಂಕಾರ ಕೊಠಡಿಗೆ ‘ಮೇಕಪ್ ನಾಣಿ -ರಂಗ ಮನೆ’ ಎಂದು ಕರೆಯಲ್ಪಡುತ್ತದೆ.

ಅಭಿನಯಿಸಿದ ಪ್ರಸಿದ್ದ ನಾಟಕಗಳು

ಸಿರಿ ಸಂಪಿಗೆ, ಸಾಹೇಬರು ಬರುತ್ತಾರೆ, ಪಿಲಿಪತ್ತಿಗಡಸ್, ದರ್ಮೆತಿ ಮಾಯೇ, ದೊಂಬರ ಚೆನ್ನಿ, ಕಾಳಪುರದ ಕಿಲೆಸಿ, ಪಂಪನಿಗೆ ಬಿದ್ದ ಕನಸು, ಹುಲಿಯ ನೆರಳು, ಆಸುದ್ಧ, ಒಂದು ಚೂರಿಯ ಕಥೆ, ಮೀಡಿಯ, ದಂಗೆಯ ಮುಂಚಿನ ದಿನಗಳು, ನಲ್ಪದ ನಲಿಕೆ, ನಾ ತುಕರಾಮ್ ಅಲ್ಲಾ, ವಾಲಿ, ಹೂ, ನಾ ಬದುಕಲಿಕ್ಕೆ ಒಲ್ಲೆಪೆÇೀ, ಮೂರು ಹೆಜ್ಜೆ ಮೂರು ಲೋಕ, ನಾಯಿ ಕತೆ, ಹಳಿಯ ಮೇಲಿನ ಸದ್ದು, ಪಟ್ಟೆ ತತ್ತಂಡ, ಮಂಡೋದರಿ ರಾವಣಾಯಣ, ಕತ್ತಲೆಗ ಪತ್ ತರೆ, ದಶಾನನ ಸ್ವಪ್ನಸಿದ್ಧಿ ಇನ್ನು ಹಲವು.

ನಿರ್ದೇಶಕರೊಂದಿಗೆ :-

ಕೃಷ್ಣಮೂರ್ತಿಕವತ್ತಾರ್, ಬಾಸುಮ ಕೊಡಗು, ಜಿ. ಸೀತಾರಾಮ್ ಶೆಟ್ಟಿಕುರಾಡಿ, ಜೀವನರಾಮ್ ಸುಳ್ಯ, ಪ್ರಮೋದ ಶಿಗ್ಗಾಂ, ಉದ್ಯಾವರ್ ನಾಗೇಶ್, ಗೋಪಾಲ್ ಕೃಷ್ಣ ನಾಯರಿ, ಸಿ.ಬಸವಲಿಂಗಯ್ಯ, ಶೀನಾ ನಾಡೊಳಿ, ಗುರುರಾಜ್ ಮಾರ್ಪಳ್ಳಿ, ಪ್ರಸನ್ನ ಹೆಗ್ಗೊಡ್, ಶ್ರೀಪಾದ ಭಟ್, ಏಣಗಿ ಬಾಳಪ್ಪ, ರಾಜಾ ರಾಮ್ , ಯಶವಂತ ಎನ್.ಎಸ್.ಡಿ

ನಾಟಕ ಕ್ಷೇತ್ರದಲ್ಲಿನ ಸಾದನೆ:

⦁ ಬಾಲ್ಯದಿಂದಲೇ ನಾಟಕ ಕ್ಷೇತ್ರದಲ್ಲಿ ಆಸಕ್ತಿ, ವಿದ್ಯಾರ್ಥಿಯಾಗಿದಾಗಲೇ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು.

⦁ 1997 ರಿಂದ ನಿರಂತರವಾಗಿ 25 ವರ್ಷಗಳ ಕಾಲ ಸಂಘಟನೆ ಅಧ್ಯಕ್ಷರಾಗಿ ಕೆಲಸ.

 

⦁ 1997 ರಿಂದ ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷರಾಗಿ ಸೇವೆ, ಪ್ರತಿ ವರ್ಷ 9 ದಿನಗಳ ನಾಟಕೋತ್ಸವ, ನವರಂಗೋತ್ಸವ ಕಾರ್ಯಕ್ರಮ , ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ.

⦁ 2000ನೇ ಇಸವಿಯಿಂದ ರಾಜ್ಯಾದ್ಯಂತ ಜನಜಾಗೃತಿಗಾಗಿ ಬೀದಿ ನಾಟಕ ಏಡ್ಸ್‍ಎಚ್ಚರಿಕೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಬಗ್ಗೆ, ಸ್ತ್ರೀಶಕ್ತಿ ಬಲವರ್ದನೆ, ವಿದ್ಯುತ್ ದುರುಪಯೋಗ, ಸ್ವಚ್ಛತೆಯ ಅರಿವು.

⦁ 2001 ರಿಂದ ಪ್ರತಿ ವರ್ಷ 5 ದಿನದ ಮಕ್ಕಳ ನಾಟಕೋತ್ಸವ, ಯಕ್ಷೋತ್ಸವ.

⦁ 2007ಕ್ಕೆ ಸಂಘಟನೆಯ ವಿಂಶತಿ ಉತ್ಸವಕ್ಕೆ ರಾಜ್ಯದ ಬೇರೆ ಬೇರೆ ಕಡೆಗಳಿಂದ 20 ತಂಡಗಳನ್ನು ಕರೆಸಿ 20 ದಿನದ ನಾಟಕೋತ್ಸವಾ, ರಾಜ್ಯದಲ್ಲೆ ಪ್ರಥಮ ಬಾರಿಗೆ ಗ್ರಾಮಿಣ ಪ್ರದೇಶದಲ್ಲಿ.

⦁ 2010-11 ವರ್ಷ ಪೂರ್ತಿ 25 ವರ್ಷಾಚರಣೆಯ ಪರವಾಗಿ ಕಾರ್ಯಕ್ರಮಗಳು, ಪ್ರತಿ ತಿಂಗಳು “ತಿಂಗಳ ತಿರುಳು” ತಿಂಗಳ ನಾಟಕ.

⦁ 2010-2011 ಸಾಲಿನಲ್ಲಿ ನಾಟಕ ಅಕಾಡೆಮಿಯಾ ಸದಸ್ಯನಾಗಿ 3ವರ್ಷ ಕಾರ್ಯನಿರ್ವಾಹಣೆ.

⦁ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಾಟಕೋತ್ಸವ.

⦁ 2011 ರಿಂದ ಉಡುಪಿ, ಮಂಗಳೂರು ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ 9 ದಿನಗಳ ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವ ನಾಟಕೋತ್ಸವ.

⦁ 2011 ರಿಂದ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ “ನಾಟ್ಕ ಸಂಮಾನ” 25,000 ರೂ. ನಗದು.

⦁ ಪ್ರತಿ ವರ್ಷ ಜನಪದ ಉತ್ಸವ ಜರಗುವುದು, ಎಲ್ಲಾ ಪ್ರಕಾರದ ಜನಪದ ಕಲೆಯನ್ನು ಪ್ರದರ್ಶಿಸಲಾಗುವುದು.

⦁ ವರ್ಷ ಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟನೆಯಲ್ಲಿ ನಡೆಯುತ್ತದೆ.

⦁ ವರ್ಷಕ್ಕೆ ಎರಡು ನಾಟಕಗಳ ತಯಾರಿ ನಡೆಸುವುದು, ರಾಜ್ಯದ ಪ್ರಸಿದ್ದ ತಂಡಗಳಿಗೆ ಮತ್ತು ನಿರ್ದೇಶಕರಿಗೆ ಗ್ರಾಮೀಣ ಪ್ರದೇಶದಲ್ಲಿನ ರಂಗ ಚಳುವಳಿ ತೋರಿಸುವ ಕೆಲಸ.

⦁ ಸಂಘಟನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.

ಸುಕುಮಾರ್ ಮೋಹನ್ ರವರ ಸಾಧನೆಗೆ ಸಂದ ಗೌರವ

ರಂಗಾಸಕ್ತರ ಮನಗೆದ್ದಿರುವ ಸುಕುಮಾರ್ ಮೋಹನ್ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳ ಸರಮಾಲೆಯನ್ನೇ ಧರಿಸಿದ್ದಾರೆ. ಹುಟ್ಟೂರಿನ ‘ನಟ ವಿಭೂಷಣ’ ಪ್ರಶಸ್ತಿ ಪಡೆದಿದ್ದು,

* 2005 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ”ಸಿ.ಜಿ.ಕೆ” ಪ್ರಶಸ್ತಿ.
* 2008 ರಂಗಚೇತನ ಬೆಂಗಳೂರು ಇವರಿಂದ”ಸಿ.ಜಿ.ಕೆ” ಪ್ರಶಸಿ.
* 2009 ಗೆಳೆಯರ ಬಳಗ ಮುದ್ರಾಡಿ “ಕಲಾ ಭೂಷಣ” ಪ್ರಶಸ್ತಿ.
* 2011 ಅರಬ್ ಸಂಯುಕ್ತ ಸಂಸ್ಥೆ ದುಬೈ “ತೌಳವ ಕಲಾ ತಿಲಕ” ಪ್ರಶಸ್ತಿ.
* 2011 ಕರ್ನಾಟಕ ನಾಟಕ ಅಕಾಡೆಮಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಅಂಗವಾಗಿ ಸನ್ಮಾನ.
* 2012 ವೀರಕೇಸರಿ ಕಲಾ ವೃಂದ ಮುಂಬೈ ಸನ್ಮಾನ ಮತ್ತು ಹಲವು ಪ್ರಶಸ್ತಿ ಲಭಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ಈ ನಾಟಕತಂಡವನ್ನುಕಟ್ಟಿ ನಿರಂತರ ರಂಗಭೂಮಿ ಚಟುವಟಿಕೆಗಳನ್ನು ಮಾಡುತ್ತ ಬಂದಿದ್ದರಿಂದ ಈ ಪ್ರದೇಶಕ್ಕೆ ಗ್ರಾಮ ಪಂಚಾಯಿತಿಯಿಂದ “ನಾಟ್ಕದೂರು” ಎಂಬ ಹೆಸರು.

ಪ್ರಶಸ್ತಿಗಳು : ಉತ್ತಮ ನಿರ್ದೇಶನ ಪ್ರಥಮ * ಮೀಡಿಯಾ * ನಾ ಬದುಕಲಿಕೊಲ್ಲೇಪ * ಅಶುದ್ಧ * ನಲ್ಪದ ನಲಿಕೆ * ನಾಯಿ ಕಥೆ * ಪಟ್ಟೆತ್ತಂಡ. * ಹಳಿಯ ಮೇಲಿನ ಸದ್ದು * ಕತ್ತಲೆಗ ಪತ್ ತರೆ .

ಉತ್ತಮ ನಟ ಪ್ರಶಸ್ತಿ :-

* ಪಿಲಿಪತ್ತಿಗಡಸ್ (23 ಬಾರಿ) * ಅಶುದ್ಧ್ (7 ಬಾರಿ) * ಮೀಡಿಯಾ (3 ಬಾರಿ) * ಕಾಲಪುರದ ಕಿಲೆಸಿ (2 ಬಾರಿ)
* ದಂಗೆಯ ಮುಂಚಿನ ದಿನಗಳು ( 3 ಬಾರಿ) * ದೊಂಬರೆಚೆನ್ನಿ (2 ಬಾರಿ) * ಒಂದು ಚೂರಿಯ ಕಥೆ (2 ಬಾರಿ) * ನಾಯಿ ಕಥೆ (2 ಬಾರಿ) * ವಾಲಿ (5 ಸಲ ಮತ್ತು ಹಲವು) * ಪಟ್ಟೆ ತತ್ತಂಡ.(2 ಸಲ) * ದಶಾನನ ಸ್ವಪ್ನಸಿದ್ಧಿ
* ಹಳಿಯ ಮೇಲಿನ ಸದ್ದು (2 ಸಲ )

ನಿರ್ದೇಶಿಸಿದ ನಾಟಕಗಳು :

* ಮೀಡಿಯಾ * ಆಸುದ್ದೊ * ನಾ ಬದುಕಲಿಕೊಲ್ಲೇಪ * ನಲ್ಪದ ನಲಿಕೆ * ಅಲಿಬಾಬ ಮತ್ತು 40 ಕಳ್ಳರು * ಶಿವಭೂತಿ
* ಪಾಠ ನಾಟಕ * ನಾಯಿ ಕತೆ * ಸ್ವಚ್ಛತೆಯಅರಿವು (ಬೀದಿ ನಾಟಕ) * ಸ್ತ್ರೀಶಕ್ತಿ ಬಲವರ್ದನೆ (ಬೀದಿ ನಾಟಕ) * ಏಡ್ಸ್‍ಎಚ್ಚರಿಕೆ (ಬೀದಿ ನಾಟಕ) * ಹಳಿಯ ಮೇಲಿನ ಸದ್ದು * ಪಟ್ಟೆ ತತ್ತಂಡ. * ಕತ್ತಲೆಗ ಪತ್ ತರೆ

ದುಬೈಯಲ್ಲಿ ನಡೆದ ನಾಟಕ ಪ್ರದರ್ಶನ :-

ಗಿರೀಶ್‍ಕಾರ್ನಾಡರ – ಹೂ (ಏಕವ್ಯಕ್ತಿ)5 ಪ್ರದರ್ಶನ * ಬರ್ತಡೆಗಿಫ್ಟ್ – 5 ಪ್ರದರ್ಶನ * ಪಾತ್ರದಾರಿಣಿ -5 ಪ್ರದರ್ಶನ
ಕೋರ್ಟ್ ಮಾರ್ಶಲ್ – 5 ಪ್ರದರ್ಶನ.

ಮಹದ್ವಾಂಕಾಂಕ್ಷೆಯ ಸಾಂಸ್ಕೃತಿಕ ತರಬೇತಿ ಕೇಂದ್ರ ಮತ್ತು ಕಲಾಭವನ

ಮುದ್ರಾಡಿಯ ಮಹದ್ವಾಂಕಾಂಕ್ಷೆಯ ಬೃಹತ್ ಸಾಂಸ್ಕೃತಿಕ ತರಬೇತಿ ಕೇಂದ್ರ ಮತ್ತು ಕಲಾಭವನ ನಿರ್ಮಾಣವಾಗುತ್ತಿದೆ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಜಾನಪದ ವಸ್ತು ಸಂಗ್ರಹಾಲಯ, ಲಲಿತಕಲಾ ತರಭೇತಿಯಲ್ಲಿ, ತಬಲಾ, ಯಕ್ಷಗಾನ, ಸಂಗೀತ ಮತ್ತು ಒಂದು ವರ್ಷದ ನಾಟಕ ತರಭೇತಿ ಕೋರ್ಸನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನೆರೆವೆರಿಸಲು “ಸಾಂಸ್ಕೃತಿಕ ತರಬೇತಿ ಕೇಂದ್ರ ಮತ್ತು ಕಲಾ ಭವನ” ನಿರ್ಮಾಣವಾಗುತ್ತಿದೆ ಇದಕ್ಕೆ ಸುಮಾರು 2.5 ಕೋಟಿ ರೂ ಖರ್ಚು ತಗುಲಲಿದೆ. ಬೇರೆ ಬೇರೆ ಕಲಾಭಿಮಾನಿಗಳ ಹತ್ತಿರ ಸಂಗ್ರಹಿಸಿ ಸುಮಾರು 20 ಲಕ್ಷದ ಕೆಲಸ ಮುಗಿಸಿದ್ದಾರೆ.

ಮಾ|ಹಿರಣಯ್ಯನವರು ನಾಟ್ಕದೂರಿಗೆ ಬಂದು ಕರ್ನಾಟಕದ ಕಲಾವಿದರಿಗೆ ತವರುಮನೆ ಇರಲಿಲ್ಲ, ಈ ನಾಟ್ಕದೂರು ಕಲಾವಿದರ ತವರುಮನೆ ಎಂದಿದ್ದಾರೆ. ನಮ್ಮ ಉಡೂಪಿ ಜಿಲ್ಲೆಯಲ್ಲಿ ಸುಸಜ್ಜಿತ ರಂಗ ಮಂದಿರ ಇಲ್ಲ ಅದ್ದರಿಂದ ನಾಟ್ಕದೂರಿನಲ್ಲಿ ಒಂದು ಸುಸಜ್ಜಿತ ರಂಗ ಮಂದಿರವನ್ನು ಕಟ್ಟಿ ಕರ್ನಾಟಕದ ಎಲ್ಲಾ ಕಲಾ ತಂಡಗಳನ್ನು ಕರೆಸಿ ಕಾರ್ಯಕ್ರಮವನ್ನು ನೀಡಬೇಕೆಂಬುದು ಇವರ ಯೋಜನೆಯಾಗಿದೆ

ಉಡುಪಿಯಲ್ಲೆ ದೊಡ್ಡದಾದ ಬಯಲು ರಂಗಮಂದಿರದ ಕಟ್ಟಡ ಕೆಲಸ ಪೂರ್ಣಗೊಂಡು ನವೆಂಬರ್ ತಿಂಗಳಿನಲ್ಲಿ ಉದ್ಘಾಟನೆಯಾಗಲಿದೆ.

ತಮ್ಮ ಬದುಕನ್ನು ರಂಗಭೂಮಿಯಲ್ಲೇ ತೊಡಗಿಸಿಕೊಂಡು ರಂಗ ಕಲೆಯನ್ನು ತನ್ನ ಉಸಿರಾಗಿರಿಸಿಕೊಂಡು ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟು ಗ್ರಾಮೀಣ ಪ್ರದೇಶದಲ್ಲೇ ಅಧುನಿಕ ತಂತ್ರಜ್ಞಾನವನ್ನು ಬಳಸಿ ರಂಗ ಕಲೆಗೆ ಹೊಸ ಆಯಾಮ ನೀಡಿ ಮುನ್ನಡೆಯುತ್ತಿರುವ ಸುಕುಮಾರ್ ಮೋಹನ್ ರವರ ಕಲಾಸೇವೆ ನಿತ್ಯ ನಿರಂತರವಾಗಿ ಮುನ್ನಡೆಯಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.

                  ಬಿ. ಕೆ. ಗಣೇಶ್ ರೈ
ಪೂರ್ವ ಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ
ಅರಬ್ ಸಂಯುಕ್ತ ಸಂಸ್ಥಾನ

Comments are closed.