ಮಂಗಳೂರು : ಜಯದುರ್ಗಾ ಪ್ರೊಡೆಕ್ಷನ್ನಲ್ಲಿ ಮೂಡಿ ಬಂದ ಬೆಲ್ಚಪ್ಪ ತುಳು ಚಿತ್ರ ಬೆಳ್ಳಿ ತೆರೆಗೆ ಬರಲು ಸಜ್ಜಾಗಿದೆ. ಆಗಸ್ಟ್ 9ರಂದು (ಶುಕ್ರವಾರ) ಉಡುಪಿ ಹಾಗೂ ಮಂಗಳೂರಿನ ಚಿತ್ರಮಂದಿರದಲ್ಲಿ ತೆರೆಕಾಣಲಿದೆ ಎಂದು ಸಿನಿಮಾದ ನಿರ್ದೇಶಕ ನಟ ರಜನೀಶ್ ದೇವಾಡಿಗ ತಿಳಿಸಿದರು
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಕಲ್ಪನಾ ಚಿತ್ರಮಂದಿರ, ಕಾರ್ಕಳದ ಪ್ಲಾನೆಟ್ ಹಾಗೂ ಮಲ್ಟಿಪ್ಲೆಕ್ಸ್ ಮಂದಿರಗಳಾದ ಮಣಿಪಾಲದ ಐನಾಕ್ಸ್ ಹಾಗೂ ಭಾರತ್ ಸಿನಿಮಾಸ್, ಮಂಗಳೂರಿನ ಜ್ಯೋತಿ, ಮೂಡುಬಿದಿರೆಯ ಅಮರಶ್ರೀ ಹಾಗೂ ಸಿನಿಪೊಲೀಸ್, ಪಿವಿಆರ್ ಮತ್ತು ಭಾರತ್ ಸಿನಿಮಾಸ್ನಲ್ಲಿ ಬೆಲ್ಚಪ್ಪ ತೆರೆಕಾಣಲಿದೆ ಎಂದರು.
ಬೆಲ್ಚಪ್ಪ ಚಿತ್ರಕ್ಕೆ ಕಥೆ ಚಿತ್ರಕಥೆ-ಸಂಭಾಷಣೆ-ನಿರ್ದೇಶನವನ್ನು ರಜನೀಶ್ ದೇವಾಡಿಗ ಮಾಡಿದ್ದು, ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ.
ತುಳುನಾಡಿನ ಮಾಣಿಕ್ಯ, ಹಾಸ್ಯ ಚಕ್ರವರ್ತಿ ಅರವಿಂದ ಬೋಳಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಚಿತ್ರದ ಕೇಂದ್ರಬಿಂದುವಾಗಿದ್ದಾರೆ. ಇನ್ನು ನಾಯಕಿಯಾಗಿ ಯಶಸ್ವಿ ದೇವಾಡಿಗ, ಸುಕನ್ಯ ಮುಖ್ಯ ಪಾತ್ರದಲ್ಲಿದ್ದಾರೆ.
ಹಾಸ್ಯಕಲಾವಿದರಾದ ಉಮೇಶ್ ಮಿಜಾರು, ದೀಪಕ್ ರೈ ಪಾಣಾಜೆ, ಪ್ರವೀಣ್ ಮರ್ಕಮೆ, ಯಜ್ಞೇಶ್, ಹಾಸ್ಯಕ್ಕೆ ಜೀವ ತುಂಬಿದ್ದಾರೆ. ಆಶಾ ಮಾರ್ನಾಡು, ಸುಭಾಶ್ ಶೆಟ್ಟಿ, ಸುಬ್ಬು ಮೂಡುಬಿದರೆ, ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಸಂಗೀತ ನಿರ್ದೇಶನವನ್ನು ವಿಕ್ರಂ ಸೆಲ್ವ ಮಾಡಿದ್ದಾರೆ. ಇನ್ನು ಸಾಹಿತ್ಯ ಹಾಗೂ ರಾಗ ಸಂಯೋಜ ನೆಯನ್ನು ಭರತ್ ಕುಮಾರ್ ಇಂದ್ರಾಳಿ ಮಾಡಿದ್ದು ತುಳು ಚಿತ್ರರಂಗದಲ್ಲೇ ಮೊದಲ ಬಾರಿಗೆ ಎಂ.ಕೆ.ವಿ.ಆರ್ ಸ್ಟೆಡೆ ಸೈಕಲ್, ಸ್ಟೆಡಿ ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಲಾಗಿದೆ.
ಛಾಯಾಗ್ರಹಣವನ್ನು ಬಾಲಿವುಡ್ ಖ್ಯಾತಿಯ ಲಕ್ಷ್ಮೀಶ್ ಶೆಟ್ಟಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಾಹಸದಲ್ಲಿ ಕೌರವ ವೆಂಕಟೇಶ್, ಸಂಕಲನದಲ್ಲಿ ಶ್ರೀಧರ್, ಸಹ ನಿರ್ದೇಶನದಲ್ಲಿ ಸುಬ್ಬು ಮೂಡಬಿದರೆ, ಸಂತೋಷ್ ಶೆಟ್ಟಿ ಮಿಜಾರ್, ರಾಕೇಶ್ ದೇವಾಡಿಗ, ದಿನೇಶ್ ಹಿರಿಯಡ್ಕ, ಸಂಜು ಮಿಜಾರ್ ಮತ್ತಿತರರು ದುಡಿದಿದ್ದಾರೆ ಎಂದರು.
ಈಗಾಗಲೇ ಟ್ರೈಲರ್ ಬಿಡುಗಡೆಯನ್ನ ಚಿತ್ರ ತಂಡ ಮಾಡಿದ್ದು ತುಳುನಾಡಿನಾದ್ಯಂತ ಸಂಚಲನ ಮೂಡಿಸಿದೆ. ಕರಾವಳಿಯಲ್ಲಿ ಬೆಲ್ಚಪ್ಪಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಚಿತ್ರದ ಶೂಟಿಂಗ್ನಿಂದ ಹಿಡಿದು ಪ್ರಮೋಷನ್ ತನಕ ಡಿಫರೆಂಟ್ ಆಗಿ ಬೆಲ್ಚಪ್ಪ ಮುಂದಡಿ ಇಟ್ಟಿದ್ದಾನೆ.
ಕೋಸ್ಟಲ್ವುಡ್ನಲ್ಲೇ 14 ದಿನದಲ್ಲಿ ಹಾಡು ಸಹಿತ ಚಿತ್ರೀಕರಣ ಮುಗಿಸಿದ ದಾಖಲೆಯನ್ನೇ ಬೆಲ್ಚಪ್ಪ ಚಿತ್ರ ತಂಡ ಮಾಡಿದೆ. ಚಿತ್ರದ ಟ್ರೇಲರ್ನ್ನು ಕೋಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಆನೆ ಲಕ್ಷ್ಮೀಯ ಆಶೀರ್ವಾದದಿಂದ ನಡೆದಿದ್ದು ಟ್ರೈಲರ್ನ್ನು ಯುಟ್ಯೂಬ್ನಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಬೆಲ್ಚಪ್ಪ ಚಿತ್ರ ಉಡುಪಿಯ ಆಸುಪಾಸಿನಲ್ಲಿಯೇ ಚಿತ್ರೀಕರಣ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಜೇಶ್ ಸ್ಕೈಲಾರ್ಕ್, ಸುಕನ್ಯಾ, ಸುಬ್ಬು ಮೂಡಬಿದ್ರೆ, ಸಂತೋಷ್ ಶೆಟ್ಟಿ ಮಿಜಾರ್, ಸಂಜು ಮಿಜಾರ್, ಭರತ್ ಕುಮಾರ್, ದಿನೇಶ್ ಹಿರಿಯಡ್ಕ ಉಪಸ್ಥಿತರಿದ್ದರು.
Comments are closed.