ಕರಾವಳಿ

ಒಳಚರಂಡಿ ಕಾಮಗಾರಿಗಳನ್ನು ಶೀಘ್ರವೇ ಪ್ರಾರಂಭಿಸುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಶಾಸಕ ಕಾಮತ್ ಸೂಚನೆ

Pinterest LinkedIn Tumblr

ಹೊಯ್ಗೆಬಜಾರ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರಿಂದ ಶಿಲಾನ್ಯಾಸ

ಮಂಗಳೂರು : ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನ ಎಬಿಡಿ ಪ್ರದೇಶದ ವಲಯ 4 ಭಾಗ ಒಂದರಲ್ಲಿ ನಡೆಯಲಿರುವ ಒಳಚರಂಡಿ (ಡ್ರೈನೇಜ್) ಕಾಮಗಾರಿಗಳು ಶೀಘ್ರವೇ ಪ್ರಾರಂಭಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳೂರಿನ ಪ್ರಮುಖ ರಸ್ತೆ ಹೊಯಿಗೆ ಬಜಾರಿನ ರೈಲ್ವೆ ಕ್ರಾಸಿಂಗ್ ನಿಂದ ಬೋಳಾರ ಲೆವೆಲ್ ತನಕ ಸುಮಾರು 95 ಲಕ್ಷ ವೆಚ್ಚದಲ್ಲಿ 1.1 ಕಿಮೀ ವ್ಯಾಪ್ತಿಯಲ್ಲಿ ನಡೆಯಲಿರುವ ಸುಸಜ್ಜಿತ ಒಳಚರಂಡಿ ಕಾಮಗಾರಿ ಶೀಘ್ರವೇ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಅದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಡಿಯಲ್ಲಿ (NCRMP), ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು 2.70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹೊಯ್ಗೆ ಬಜಾರ್ ರೈಲ್ವೇ ಕ್ರಾಸಿಂಗ್ ನಿಂದ ಬೋಳಾರ ಲೆವೆಲ್ ಸಂಪರ್ಕಿಸುವ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕಾಮತ್ ಅವರು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಮಂಗಳೂರಿನ ಎಬಿಡಿ ಪ್ರದೇಶದ ವಲಯ 4 ಭಾಗ ಒಂದರಲ್ಲಿ ಸುಮಾರು 95 ಲಕ್ಷ ವೆಚ್ಚದಲ್ಲಿ 1.1 ಕಿಮೀ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ.

ಇನ್ನು ಪ್ರಾಕೃತಿಕ ವಿಕೋಪದ ಸಂಧರ್ಭ ಎದುರಾದರೆ ಅದರಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅನುಷ್ಠಾನಕ್ಕೆ ತಂದಿರುವ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯ(NCRMP) ಅನುದಾನದ ಅಡಿಯಲ್ಲಿ,ಲೋಕೋಪಯೋಗಿ ಇಲಾಖೆಯಿಂದ 2.70 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಯಿಗೆ ಬಜಾರ್ ವಾರ್ಡಿನ ಮಾರಿಗುಡಿ ಮಾರ್ಗವಾಗಿ ಬೋಳಾರವನ್ನು ಸಂಪರ್ಕಿಸುವ ರಸ್ತೆಯ ಕಾಂಕ್ರೀಟಿಕರಣದ ಕಾಮಗಾರಿಯೂ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಅನುದಾನ ತರುವಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಶ್ರಮಿಸಿದ್ದಾರೆ. ಅವರಿಗೆ ಇಲ್ಲಿನ ಸಮಸ್ತ ನಾಗರಿಕರ ಪರವಾಗಿ ಧನ್ಯವಾದ ಎಂದು ಶಾಸಕ ಕಾಮತ್ ತಿಳಿಸಿದರು.ಒಳ ಚರಂಡಿ ಮತ್ತು ರಸ್ತೆ ಕಾಮಗಾರಿಗಳು ನಡೆಯುವಾಗ ಸಾರ್ವಜನಿಕರಿಗೆ ಅಡಚಣೆಯಾಗಬಹುದು.ದಯವಿಟ್ಟು ಅಭಿವೃದ್ಧಿಯ ದೃಷ್ಠಿಯಿಂದ ಸಾರ್ವಜನಿಕರು ಸಹಕಾರಿಸಬೇಕು ಎಂದು ಶಾಸಕರು ಕೇಳಿ ಕೊಂಡಿದ್ದಾರೆ.

ಶಾಸಕರೊಂದಿಗೆ ಬಿಜೆಪಿ ಹಿರಿಯ ಮುಖಂಡ ನಿತಿನ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್,ಮನಪಾ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ,ಮಂಗಳೂರು ನಗರ ದಕ್ಷಿಣ ಮಂಡಲ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಚಂದ್ರ ಶೆಟ್ಟಿ, ಮಂಡಲ‌ ಕಾರ್ಯದರ್ಶಿ ದೀಪಕ್ ಪೈ,ಜಿಲ್ಲಾ ಕಾರ್ಯಕಾರಿಣಿ ಸದಸ್ಯ ನಾರಾಯಣ ಗಟ್ಟಿ,ಸ್ಲಂ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮುರಳೀಧರ್ ಬೊಳಾರ,ಮನಪಾ ಸದಸ್ಯರಾದ ದಿವಾಕರ್ ಪಾಂಡೇಶ್ವರ, ಪಶ್ಚಿಮ ಶಕ್ತಿ ಕೇಂದ್ರ ಅಧ್ಯಕ್ಷ ಅನಿಲ್ ಕುಮಾರ್,ಹೈೂಗೆ ಬಜಾರ್ ವಾರ್ಡ್ ಅಧ್ಯಕ್ಷ ಸುನಿಲ್ ಮೆಂಡನ್,ಪೋರ್ಟ್ ವಾರ್ಡ್ ಯೋಗೀಶ್ ಕಾಂಚನ್,ಕಾರ್ಯಾಲಯ ಕಾರ್ಯದರ್ಶಿ ಉಮನಾಥ್ ಶೆಟ್ಟಿಗಾರ್,ಮಹಿಳಾ ಪ್ರಮುಖ್ ವನಮಾಲ ಎಸ್ ಸುವರ್ಣ, ಪಶ್ಚಿಮ ಶಕ್ತಿ ಕೇಂದ್ರ ಮಹಿಳಾ ಪ್ರಮುಖ್ ರೇವತಿ ಶ್ಯಾಮ್ ಸುಂದರ್ ಶೆಟ್ಟಿ,ಬೋಳಾರ ವಾರ್ಡ್ ಸಂಚಾಲಕ ಪ್ರಸಾದ್ ಬೋಳಾರ,ಬೂತ್ ಪ್ರಮುಖ್ ವಿನೋದ್ ಮೆಂಡನ್, ಪಿಡ್ಲುಡಿ ಮತ್ತು ಸ್ಮಾರ್ಟ್ ಸಿಟಿ ಇಂಜಿನಿಯರ್ಸ್ ಮತ್ತು ಅಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Comments are closed.