ಕರಾವಳಿ

ಚಂದನ ವಾಹಿನಿಯಲ್ಲಿ ತುಳು ಧಾರಾವಾಹಿ – ‘ಮಂದಾರ ರಾಮಾಯಣ’ ಕಾವ್ಯರೂಪಕ

Pinterest LinkedIn Tumblr

ಮಂಗಳೂರು: ತುಳು ವಿದ್ವಾಂಸ ದಿ.ಮಂದಾರ ಕೇಶವ ಭಟ್ಟರ ‘ಮಂದಾರ ರಾಮಾಯಣ’ ತುಳು ಮಹಾಕಾವ್ಯವು ಧಾರಾವಾಹಿ ರೂಪದಲ್ಲಿ ಪ್ರತಿ ತಿಂಗಳ ಮೊದಲ ಶನಿವಾರ ಬೆಳಿಗ್ಗೆ ಗಂ.11.30 ಕ್ಕೆ ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಈ ಕಾವ್ಯರೂಪಕವನ್ನು ದ.ಕ.ಜಿಲ್ಲೆಯ ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವು ಪ್ರಸ್ತುತಪಡಿಸುತ್ತಿದೆ.ಹೊಸ ಪರಿಕಲ್ಪನೆಯೊಂದಿಗೆ ಮೂಡಿಬರುವ ‘ಮಂದಾರ ರಾಮಾಯಣ’ ತುಳು ಕಾವ್ಯರೂಪಕದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕೃತಿ ಪರಿಚಯದೊಂದಿಗೆ ವ್ಯಾಖ್ಯಾನ ನೀಡುವರು. ಖ್ಯಾತ ಗಾಯಕ ಮತ್ತು ಹರಿದಾಸ ತೋನ್ಸೆ ಪುಷ್ಕಳಕುಮಾರ್ ಕಾವ್ಯವಾಚನ ಮಾಡುವರು. ಅಲ್ಲದೆ ವಿಶೇಷವಾಗಿ ಶ್ರೀಧರ ರೈ ಕಾಸರಗೋಡು ಅವರ ಮೃದಂಗ ಹಾಗೂ ಬೆಂಗಳೂರಿನ ರಾಜೀವ ಲೋಚನ ಎಂ.ಎಸ್. ಅವರ ಪಿಟೀಲು ವಾದನದ ಹಿಮ್ಮೇಳವೂ ಇದೆ.

ಕೊಣಾಜೆ ನೃತ್ಯ ಲಹರಿ ನಾಟ್ಯಾಲಯದ ವಿದುಷಿ ರೇಷ್ಮಾ ನಿರ್ಮಲ್ ಭಟ್ ಅವರ ನೃತ್ಯ ನಿರ್ದೇಶನದಲ್ಲಿ ರೂಪಕಕ್ಕೆ ದೃಶ್ಯ ಸಂಯೋಜನೆ ಮಾಡಲಾಗಿದೆ. ರೇಶ್ಮಾ ನಿರ್ಮಲ್,ದೀಪಿಕಾ ಭಟ್, ಶ್ರೀರಕ್ಷಾ, ರೇಷ್ಮಾ, ಭಾಗ್ಯ,ರಶ್ಮಿ, ಸೌಮ್ಯ, ಯಶಸ್ ಭಟ್ ಮತ್ತು ಶ್ರೇಯಾ ರಾಮಾಯಣದ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದೂರದರ್ಶನದ ಎಂ.ಆರ್.ಸುಜಾತ ಅವರ ತಾಂತ್ರಿಕ ನಿರ್ದೇಶನದಲ್ಲಿ ತುಳು ವಿಭಾಗದ ಲಕ್ಷ್ಮೀ ಕಾರಂತ್ ಎಂ.ಎಸ್. ಈ ಕಾರ್ಯಕ್ರಮವನ್ನು ನಿರ್ಮಿಸಿ ಪ್ರಸಾರಕ್ಕೆ ಅಣಿಗೊಳಿಸಿದ್ದಾರೆ.

ಈಗಾಗಲೇ ಮಂದಾರ ರಾಮಾಯಣದ ಆರಂಭದಲ್ಲಿ ಬರುವ ಪುಂಚದ ಬಾಲೆ, ಬಂಗಾರ್ದ ತೊಟ್ಟಿಲ್, ಅಜ್ಜೇರೆ ಸಾಲೆ, ಮದಿಮೆದ ದೊಂಪ, ಸೇಲೆದ ಸೋಲು – ಈ ಐದು ಅಧ್ಯಾಯಗಳನ್ನು 13 ಕಂತುಗಳಲ್ಲಿ ಚಿತ್ರೀಕರಿಸಿಕೊಳ್ಳಲಾಗಿದ್ದು, 2019 ಜನವರಿ 5 ರಿಂದ ಚಂದನ ವಾಹಿನಿಯಲ್ಲಿ ಈ ಸರಣಿಯ ಪ್ರಸಾರ ಆರಂಭವಾಗಿದೆ.

Comments are closed.