ಕುಂದಾಪುರ: ಸ್ನಾನಕ್ಕೆಂದು ದೇವಸ್ಥಾನದ ಕೆರೆಗೆ ತೆರಳಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕೆರೆಯ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟ ಘಟನೆ ಸೋಮವಾರದಂದು ತಾಲೂಕಿನ ಕೋಟೇಶ್ವರ ಕೋಟಿ ತೀರ್ಥ ಕೆರೆಯಲ್ಲಿ ನಡೆದಿದೆ.
ಕುಂಭಾಸಿ ಮನೆ ನಿವಾಸಿ ನಾಗೇಶ ಪುತ್ರನ್ (40) ಮೃತಪಟ್ಟ ದುರ್ದೈವಿ.
ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ನಾಗೇಶ್ ಪುತ್ರನ್ ಸೋಮವಾರ ಬೆಳಿಗ್ಗೆ ಕೋಟಿತೀರ್ಥ ಪುಷ್ಕರಣಿಯಲ್ಲಿ ಸ್ನಾನಕ್ಕೆಂದು ತೆರಳಿದ್ದು ಕೆರೆಯ ಪೂರ್ವಬದಿಯ ಮೆಟ್ಟಿಲಿನಲ್ಲಿ ಇಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದಿದ್ದರು. ಇವರು ಮುಳುಗುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕದಳ ಭೇಟಿ ನೀಡಿ ಹುಡುಕಾಟ ನಡೆಸಿದ್ದರು. ಸ್ಥಳೀಯ ಯುವಕ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳ ಒಂದು ತಾಸಿನ ಕಾರ್ಯಾಚರಣೆ ಬಳಿಕ ನಾಗೇಶ್ ಮೃತದೇಹ ಸಿಕ್ಕಿದೆ. ಮೃತ ನಾಗೇಶ್ ತಾಯಿ, ಪತ್ನಿ ಹಾಗೂ ಸೋದರ-ಸೋದರಿಯನ್ನು ಅಗಲಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.