ಕರಾವಳಿ

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭಕ್ಕೆ 30 ಕೋಟಿ ಬಿಡುಗಡೆಗೆ ಪ್ರಯತ್ನ: ಸಚಿವೆ ಡಾ. ಜಯಮಾಲಾ

Pinterest LinkedIn Tumblr

ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನ: ಪ್ರಾರಂಭಿಸಲು , ಕಾರ್ಖಾನೆಯ ಆಡಳಿತ ಮಂಡಳಿ ಕೋರಿರುವ ರೂ.30 ಕೋಟಿಗಳ ಬಿಡುಗಡೆ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ರೈತ ಮುಖಂಡರ ಜೊತೆಯಲ್ಲಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಃಶ್ಚೇತನ ಕುರಿತು ನುರಿತ ತಾಂತ್ರಿಕ ತಜ್ಞರನ್ನು ಒಳಗೊಂಡ ಮೆ|| ಮಿಟ್ಕಾನ್ ಕನ್ಸಲ್ಟೆನ್ಸಿ ಮತ್ತು ಇಂಜಿನಿಯರಿಂಗ್ ಸರ್ವಿಸಸ್ ಪುಣೆ ಇವರಿಂದ ವಿಸ್ತøತ ಯೋಜನಾ ವರದಿ ತಯಾರಿಸಿದ್ದು, ಅದರಂತೆ ಕಾರ್ಖಾನೆಯ ಪುರ್ನಶ್ಚೇತನಕ್ಕೆ ಸರ್ಕಾರದಿಂದ 30 ಕೋಟಿ ಆರ್ಥಿಕ ನೆರವು ನೀಡಿದರೆ ಕಾರ್ಖಾನೆಯನ್ನು ಪುನರಾಂಭಿಸಬಹುದು, ಈಗಾಗಲೇ ವಾರಾಹಿಯಿಂದ ನೀರು ಹರಿಯುತ್ತಿದ್ದು ರೈತರು ಕಬ್ಬು ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ ಅಲ್ಲದೆ ಕರಾವಳಿ ಭಾಗದ ಹವಾಮಾನ ವೈಪರೀತ್ಯದಿಂದ ಭತ್ತದ ಬೆಳೆಗಿಂತ ಕಬ್ಬು ಬೆಳೆ ಇಲ್ಲಿನ ರೈತರಿಗೆ ಲಾಭದಾಯವಾಗಿದ್ದು, ಸರ್ಕಾರ 30 ಕೋಟಿ ಮಂಜೂರು ಮಾಡಿದರೆ ಜಿಲ್ಲೆಯ ಸಹಕಾರಿ ಸಂಘಗಳಿಂದ 20 ಕೋಟಿ ಮೊತ್ತದ ಶೇರು ಸಂಗ್ರಹಿಸುವುದಾಗಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಯಶೀಲ ಶೆಟ್ಟಿ ಹೇಳಿದರು.

ಕಾರ್ಖಾನೆಯ ಪುನ:ಶ್ಚೇತನಕ್ಕೆ ಅಗತ್ಯವಿರುವ 30 ಕೋಟಿ ರೂ ಗಳನ್ನು ನೀಡುವ ಕುರಿತಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮತ್ತು ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ರೈತ ಮುಖಂಡರನ್ನು ಒಳಗೊಂಡ ನಿಯೋಗ ಸಕ್ಕರೆ ಸಚಿವರ ಬಳಿ ತೆರಳಿ ಮನವಿ ಸಲ್ಲಿಸೋಣ, ಹಣ ಬಿಡುಗಡೆ ಬಗ್ಗೆ ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿದ ಡಾ. ಜಯಮಾಲಾ, ಇದೇ 30 ರಂದು ಬೆಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದ್ದು ಅಂದೇ ರಾಜ್ಯದ ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿ , ಫೆಬ್ರವರಿ 8 ರಂದು ನಡೆಯುವ ಬಜೆಟ್ ನಲ್ಲಿ ಕಾರ್ಖಾನೆಗೆ ಹಣ ಮೀಸಲಿಡುವ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.
ಅಲ್ಲದೇ ಸಕ್ಕರೆ ಕಾರ್ಖಾನೆಯನ್ನು ಪುನ: ಆರಂಭಿಸುವ ಕುರಿತಂತೆ ಸಾಧಕ ಭಾದಕಗಳ ಬಗ್ಗೆ ರಾಜ್ಯದ ಇತರೆ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಜಿಲ್ಲೆಗೆ ಕರೆಸಿ , ಕಾರ್ಖಾನೆಯನ್ನು ಪರಿಶೀಲಿಸಿ ಅವರ ಅಭಿಪ್ರಾಯವನ್ನೂ ಸಹ ಪಡೆಯೋಣ ಹಾಗೂ ರಾಜ್ಯದ ಇತರೆ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸೋಣ, ಕಾರ್ಖಾನೆಯಲ್ಲಿ ಕಬ್ಬು ಮಾತ್ರವಲ್ಲದೇ ಹೊಸ ತಂತ್ರಜ್ಞಾನದೊಂದಿಗೆ ಇತರೇ ಉಪ ಉತ್ಪನ್ನಗಳಾದ ಇಥೆನಾಲ್, ಮದ್ಯ ತಯಾರಿಕೆ, ಡ್ರೈ ಐಸ್ ಮುಂತಾದವುಗಳನ್ನೂ ಸಹ ತಯಾರಿದರೆ ಕಾರ್ಖಾನೆಯನ್ನು ಲಾಭದಾಯಕವಾಗಿ ನಡೆಸಲು ಸಾಧ್ಯ ಎಂದು ಸಚಿವರು ಹೇಳಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ಸಕ್ಕರೆ ಕಾರ್ಖಾನೆಯ ಉಳಿವಿಗೆ ಈ ಹಿಂದಿನಿಂದಲೂ ಸಆದ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದು, ಗ್ಲೋಬಲ್ ಟೆಂಡರ್ ಸಹ ಕರೆಯಲಾಗಿತ್ತು, ಖಾಸಗಿ ಸಂಸ್ಥೆಯೊಂದು ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಮುಂದೆ ಬಂದಿದ್ದರೂ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ, ಪ್ರಸ್ತುತ ಆಡಳಿತ ಮಂಡಳಿಯ ಕೋರಿರುವ ಮೊತ್ತದ ಬಿಡುಗಡೆಗೆ ಸರ್ಕಾರದ ಮಟ್ಟದಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ , ಜಿಲ್ಲಾ ಸಹಕರಿ ಸಂಘಗಳ ಉಪ ನಿಬಂಧಕ ಪ್ರವೀಣ್ ನಾಯಕ್, ಹಾಗೂ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Comments are closed.