ಕರಾವಳಿ

ಕೇಂದ್ರ ಸರಕಾರದಿಂದ ಕಾರ್ಮಿಕ ವಿರೋಧಿ ನೀತಿ – ವಿಪರೀತ ಬೆಲೆಯೇರಿಕೆಯಿಂದಾಗಿ ದೇಶದ ಜನತೆ ತತ್ತರ : ರಾಕೇಶ್ ಮಲ್ಲಿ ಆರೋಪ

Pinterest LinkedIn Tumblr

ಮಂಗಳೂರು, ಡಿಸೆಂಬರ್. 20 : ವಿಪರೀತ ಬೆಲೆಯೇರಿಕೆಯಿಂದಾಗಿ ದೇಶದ ಜನತೆ ತತ್ತರಿಸುತ್ತಿದ್ದಾರೆ‌.ಕೇಂದ್ರ ಸರಕಾರದ 7ನೇ ವೇತನ ಆಯೋಗವು ಕನಿಷ್ಠ ಕೂಲಿ ರೂ 18,000 ನೀಡಬೇಕೆಂದು ಶಿಫಾರಸು ಮಾಡಿದ್ದರೂ ಕಳೆದ 2 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಲಾಭದಾಯಕ ವಾದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಒಳ್ಳೆಯ ದಿನಗಳು ಬರಲಿದೆ ಎಂಬ ಭ್ರಮೆಯನ್ನು ಸ್ರಷ್ಠಿಸಿದ ಕೇಂದ್ರ ಸರಕಾರವು ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವ ಮೂಲಕ ಮಾಲಕ ವರ್ಗದ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ.ಹೀಗಾಗಿ ಸರಕಾರವು ದೇಶದ ದುಡಿಯುವ ವರ್ಗದ ಮೇಲೆ ಗಂಭೀರವಾದ ಪ್ರಹಾರವನ್ನು ನಡೆಸುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಯಾದ INTUC ನ ರಾಜ್ಯಾಧ್ಯಕ್ಷರಾದ ರಾಕೇಶ್ ಮಲ್ಲಿ ಯವರು ಹೇಳಿದರು.

2019ರ ಜನವರಿ 8,9 ರಂದು ಜರುಗಲಿರುವ ಅಖಿಲ ಭಾರತ ಮಹಾಮುಷ್ಕರವನ್ನು ಯಶಸ್ವಿಗೊಳಿಸುವ ಸಲುವಾಗಿ ಅಯೋಜಿಸಲಾದ 3 ದಿನಗಳ ಕಾಲ ದ.ಕ.ಜಿಲ್ಲೆಯಾದ್ಯಂತ ಸಂಚರಿಸಲಿರುವ ವಾಹನ ಪ್ರಚಾರ ಜಾಥಾವನ್ನು ಉದ್ಘಾಟಿಸುತ್ತಾ ಅವರು,ಈ ಮಾತುಗಳನ್ನು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ CITU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡುತ್ತಾ, *ಲಾಭದಾಯಕ ವಾದ ಜಿಲ್ಲೆಯ ವಿಜಯ ಬ್ಯಾಂಕ್ ನ್ನು ನಷ್ಟಗೊಳಪಟ್ಟ ಬ್ಯಾಂಕ್ ನೊಂದಿಗೆ ವಿಲೀನಗೊಳಿಸುವ ಮೂಲಕ ವಿಜಯ ಬ್ಯಾಂಕನ್ನೇ ಹೇಳ ಹೆಸರಿಲ್ಲದಂತೆ ಮಾಡಲು ಹೊರಟಿದೆ. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೂಡ ಖಾಸಗೀಕರಣ ಮಾಡಲು ಹೊರಟ ಕೇಂದ್ರ ಸರಕಾರದ ನೀತಿಯಿಂದಾಗಿ ಜಿಲ್ಲೆಗೆ ಭಾರೀ ಪೆಟ್ಟು ಬೀಳಲಿದೆ. ಯುವಜನರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಬೀಡಿ ಉದ್ಯಮ ಭಾರೀ ಸಂಕಷ್ಟದಲ್ಲಿದೆ. ಆದ್ದರಿಂದ ಕಾರ್ಮಿಕ ವರ್ಗ ಕರೆ ನೀಡಿದ ಮಹಾ ಮುಷ್ಕರವನ್ನು ಜಿಲ್ಲೆಯಾದ್ಯಂತ ಯಶಸ್ವಿಗೊಳಿಸಲು ಜಿಲ್ಲೆಯ ಜನತೆ ಮುಂದಾಗಬೇಕೆಂದು* ಕರೆ ನೀಡಿದರು.

AITUC ಜಿಲ್ಲಾ ಮುಖಂಡರಾದ ಎಚ್ ವಿ ರಾವ್ ರವರು ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಸವಿವರವಾಗಿ ಹೇಳುತ್ತಾ ಕಾರ್ಮಿಕ ವರ್ಗ ಒಂದಾಗಿ ಹೋರಾಡಬೇಕೆಂದು ಹೇಳಿದರು.

ಈ ಸಂಧರ್ಭದಲ್ಲಿ INTUC ಜಿಲ್ಲಾ ನಾಯಕರಾದ ಮನೋಹರ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ವಾಲ್ಟರ್ ಪಿಂಟೋ,ಉಮೇಶ್ ದೇವಾಡಿಗ,ಉಮೇಶ್ ಕೋಟ್ಯಾನ್,AITUC ಮುಖಂಡರಾದ ಸೀತಾರಾಮ ಬೇರಿಂಜ,ಕರುಣಾಕರ್,ಶೇಖರ್,ಸುರೇಶ್ ಕುಮಾರ್, ವಿ.ಕುಕ್ಯಾನ್,CITU ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಯು.ಬಿ.ಲೋಕಯ್ಯ,ಯೋಗೀಶ್ ಜಪ್ಪಿನಮೊಗರು, ಜಯಂತಿ ಶೆಟ್ಟಿ,ಭಾರತಿ ಬೋಳಾರ,ರಾಮಣ್ಣ ವಿಟ್ಲ, HMS ಜಿಲ್ಲಾ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Comments are closed.