ಉಡುಪಿ: ಸ್ಥಳೀಯರಿಂದ ಟೋಲ್ ವಸೂಲಿ ಮಾಡುವುದರ ವಿರುದ್ಧ ಹಾಗೂ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ನಾಳೆ ಡಿ.7 ರಂದು ಕರೆ ನೀಡಲಾದ ಕೋಟ ಬಂದ್ಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಜನಸಾಮಾನ್ಯರಿಗೆ ಹೊರೆಯಾಗಿರುವ ರಾಷ್ಟ್ರೀಯ ಹೆದ್ದಾರಿ 66 ರ ಟೋಲ್ ಸುಂಕ ವಸೂಲಿ ಮತ್ತು ಹೆದ್ದಾರಿ ಅಪೂರ್ಣ ಕಾಮಗಾರಿ ವಿರುದ್ದದ ಹೋರಾಟ ಇದೀಗಾ ಬಂದ್ ಆಗಿ ಮಾರ್ಪಟ್ಟಿದೆ. ಜನರ ಆಕ್ರೋಷದ ಕಟ್ಟೆ ಒಡೆದಿದ್ದು ಜನರಿಗೆ ಜನಪ್ರತಿನಿಧಿಗಳು ಸ್ಪಂದಿಸಿ ಬಂದಿನಲ್ಲಿ ಭಾಗವಹಿಸಲಿದ್ದಾರೆ. ಸುಮಾರು 20 ಕಿ.ಮೀ.ವರೆಗೆ ಟೋಲ್ ಸ್ವೀಕರಿಸದಂತೆ ಆಗ್ರಹಿಸಿ ಬೆಳಗ್ಗೆ 10 ಗಂಟೆಯಿಂದ ಜಿಲ್ಲೆಯ ಜನಪ್ರತಿನಿಧಿಗಳ ಜತೆ ಟೋಲ್ ಸಮೀಪ ಬಂದ್ನ ಸಂದರ್ಭ ಬೃಹತ್ ಪ್ರತಿಭಟನೆ ಜರಗಲಿದೆ.
ನಾಳೆ ಕೋಟ ಹಾಗೂ ಸಾಸ್ತಾನ ವ್ಯಾಪ್ತಿಯ ಮಾಬುಕಳ, ಐರೋಡಿ, ಪಾಂಡೇಶ್ವರ, ಯಡಬೆಟ್ಟು, ಸಾಸ್ತಾನ, ಕೋಡಿ ಕನ್ಯಾಣ, ಗುಂಡ್ಮಿ, ಸಾಲಿಗ್ರಾಮ, ಚಿತ್ರಪಾಡಿ, ಕೋಟ ಮೂರುಕೈ, ಕೋಟತಟ್ಟು, ಕೋಟ, ಮಣೂರಿನಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್ ಆಗಿರುವ ಸಾಧ್ಯತೆ ದಟ್ಟವಾಗಿದೆ.
ವ್ಯಾಪಕ ಬೆಂಬಲ…..
ನಾಳೆ ನಡೆಯುವ ಕೋಟ ಬಂದ್ ಗೆ ಹೆಜಮಾಡಿ ಟೋಲ್ ಹೋರಾಟಗಾರರು ಬೆಂಬಲ ನೀಡಿದ್ದು, ಸಹಸ್ರಾರು ಜನ ಭಾಗವಹಿಸುವಂತೆ ಉಭಯ ಜಿಲ್ಲಾ ಟೋಲ್ ವಿರುದ್ಧ ಹೋರಾಟ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲೆಯ ಸುಮಾರು ೭೦ಕ್ಕೂ ಅಧಿಕ ಸಂಘಸಂಸ್ಥೆಗಳು ಬಂದ್ಗೆ ಬೆಂಬಲ ಸೂಚಿಸಿದೆ.
Comments are closed.