ಕರಾವಳಿ

ಶಿವಮೊಗ್ಗ ಲೋಕಸಭಾ ಉಪ ಚುನಾವಣೆ: ಕುಂದಾಪುರ, ಬೈಂದೂರಿನಲ್ಲಿ 2 ದಿನ ನಿಷೇಧಾಜ್ಞೆ ಜಾರಿ

Pinterest LinkedIn Tumblr

ಉಡುಪಿ: ಶಿವಮೊಗ್ಗ ಲೋಕಸಭಾ ಉಪ-ಚುನಾವಣೆ 2018 ಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವ್ಯಾಪಿಯಲ್ಲಿ ನವೆಂಬರ್ 3 ರಂದು ಮತದಾನ ನಡೆಯಲಿದ್ದು, ಮುಂಜಾಗೃತ ಕ್ರಮವಾಗಿ ಮತದಾನ ಕೊನೆಗೊಳ್ಳುವ 48 ಗಂಟೆಗಳ ಮುಂಚಿತವಾಗಿ ಅಂದರೆ ನವೆಂಬರ್ 1, 2018 ರ ಸಂಜೆ 6 ಗಂಟೆಯಿಂದ ನವೆಂಬರ್ 3 ರ ರಾತ್ರಿ 8 ಗಂಟೆಯ ವರೆಗೆ ಈ ಕೆಳಕಂಡ ನಿಬಂಧನೆಗಳನ್ನು ವಿಧಿಸಿ, ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿರುತ್ತಾರೆ.

ನಿಷೇದಾಜ್ಞೆ ಜಾರಿ ಮಾಡಿದ ಅವಧಿಯಲ್ಲಿ ಮತದಾನದ ದಿನದಂದು ಮತದಾನ ಕೇಂದ್ರಗಳಿಗೆ ಮತ ಹಾಕಲು ಬರುವ ಮತದಾರರನ್ನು ಹೊರತುಪಡಿಸಿ, ಉಳಿದಂತೆ 5 ಜನರ ಮೇಲ್ಪಟ್ಟು, ಗುಂಪುಗಾರಿಕೆ ಮಾಡುವುದಾಗಲೀ, ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ.

ಯಾವುದೇ ಸಂಘಟನೆಗಳು / ರಾಜಕೀಯ ಪಕ್ಷಗಳು/ ಧಾರ್ಮಿಕ ಪಂಗಡಗಳು ಮೆರವಣಿಗೆ ಮಾಡಕೂಡದು ಹಾಗೂ ಪ್ರತಿಭಟನೆ ನಡೆಸಕೂಡದು.
ಶಸ್ತ್ರ, ಕಡಗೋಲು, ಖಡ್ಗ, ಚೂರಿ, ಬಂದೂಕು. ಕೋಲು ಅಥವಾ ದೇಹಕ್ಕೆ ಅಪಾಯ ಉಂಟುಮಾಡಬಹುದಾದ ಮಾರಕಾಸ್ತ್ರಗಳನ್ನು ಹಾಗೂ ಯಾವುದೇ ವಿನಾಶಕಾರಿ ವಸ್ತು ಇಲ್ಲವೇ ಸ್ಪೋಟಕ ವಸ್ತುಗಳನ್ನು ಒಯ್ಯಕೂಡದು.
ಕಲ್ಲು ಅಥವಾ ಎಸೆಯುವ ವಸ್ತು ಅಥವಾ ವಸ್ತುಗಳನ್ನು ಎಸೆಯುವ ಅಥವಾ ಚಲಿಸುವ ಅಸ್ತ್ರಗಳನ್ನು ಸಂಗ್ರಹಿಸುವುದನ್ನು ಮತ್ತು ತಯಾರಿಸುವುದನ್ನು ನಿಷೇಧಿಸಿದೆ.
ಯಾವುದೇ ವ್ಯಕ್ತಿ ನಿಷೇಧಿಸಿರುವ ಮಾರಕಾಸ್ತ್ರ, ಸ್ಪೋಟಕ ವಸ್ತುಗಳನ್ನು, ಬಂದೂಕುಗಳನ್ನು ಹೊಂದಿದ್ದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವಿರುತ್ತದೆ ಮತ್ತು ಅಂತಹ ವ್ಯಕ್ತಿಯ ಬಳಿಯಲ್ಲಿರುವ ಮಾರಕಾಸ್ತ್ರಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದು.
ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಜನರು ಗುಂಪು ಗುಂಪಾಗಿ ನಿಲ್ಲುವುದನ್ನು ಹಾಗೂ ಓಡಾಡುವುದನ್ನು ನಿಷೇಧಿಸಿದೆ.
ಭಾಷಣ ಮಾಡುವುದು, ಪ್ರಚೋದನಾಕಾರಿಯಾಗಿ ಮಾತನಾಡುವುದು, ಬ್ಯಾನರ್ ಅಥವಾ ಫ್ಲೆಕ್ಸ್ಗಳನ್ನು ಅಂಟಿಸುವುದನ್ನು ನಿಷೇಧಿಸಲಾಗಿದೆ.
ಚುನಾವಣಾ ಆಯೋಗವು ನೀಡಿರುವ ಸ್ಪಷ್ಟೀಕರಣದಂತೆ ಮತದಾನದ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಅಭ್ಯರ್ಥಿಯು ಮನೆಮನೆಗೆ ಭೇಟಿ ನೀಡಿ, ಚುನಾವಣಾ ಪ್ರಚಾರ ಮಾಡುವುದಕ್ಕೆ ವಿನಾಯಿತಿ ನೀಡಲಾಗಿದೆ. ಆದರೆ 10 ಕ್ಕಿಂತ ಹೆಚ್ಚಿನ ಜನರು ಈ ಗುಂಪಿನಲ್ಲಿತಕ್ಕದ್ದಲ್ಲ. ಈ ಆದೇಶವು ನವೆಂಬರ್ 1 ಸಂಜೆ 6 ರಿಂದ ನವೆಂಬರ್ 3 ರ ಸಂಜೆ 8 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ಈ ಆದೇಶವು ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಮತ್ತು ಆರಕ್ಷಕ ಸಿಬ್ಬಂದಿಗಳು ಕಾರ್ಯನಿರ್ವಹಣೆ ವೇಳೆ ಲಾಠಿ/ ಬಂದೂಕುಗಳನ್ನು ಉಪಯೋಗಿಸುವುದಕ್ಕೆ ಅನ್ವಯಿಸುವುದಿಲ್ಲ ಹಾಗೂ ಚುನಾವಣೆ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳು ಅವರು ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.