ಕರಾವಳಿ

ರಾಜ್ಯ ಹೆದ್ದಾರಿಗೂ ಟೋಲ್ ಕಾಟ: ಪ್ರತಿಭಟಿಸಿದ ನಾಗರಿಕರು!

Pinterest LinkedIn Tumblr

ಉಡುಪಿ: ರಾಜ್ಯ ಸಮ್ಮಿಶ್ರ ಸರ್ಕಾರ ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಗೇಟ್ ನಿರ್ಮಿಸಲು ಎಲ್ಲಾ ಸಿದ್ಧತೆ ಮಾಡಿದೆ. ಸರ್ಕಾರ ಸ್ಥಾಪನೆ ಮಾಡಲು ಹೊರಟಿರುವ ಟೋಲ್ ವಿರುದ್ಧ ಉಡುಪಿಯ ನಲವತ್ತು ಹಳ್ಳಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಕಾಪು ತಾಲೂಕನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇತಿಹಾಸದಲ್ಲೇ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣ ಆಗುತ್ತಿರೋದು ಇದೇ ಪ್ರಥಮ. ಹೀಗಾಗಿ ಸರ್ಕಾರದ ನೀತಿಯನ್ನು ಖಂಡಿಸಿ ಗ್ರಾಮಸ್ಥರು ಬೃಹತ್ ಪ್ರತಿಭಟನೆಯನ್ನು ಕೈಗೊಂಡರು. ಬೆಳ್ಮಣ್ಣು ಪೇಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಪಕ್ಷಾತೀತವಾಗಿ ಪಾಲ್ಗೊಂಡರು. ಯೋಜನೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ಮಣ್ ಟೋಲ್ ವಿರೋಧಿ ಹೋರಾಟ ಸುಹಾಸ್ ಹೆಗ್ಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಮೂರು ದಿನಗಳ ಹಿಂದೆ ನೀಡಿದ ಪ್ರತಿಭಟನೆಗೆ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಹೋರಾಟ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕೇಮಾರು ಈಶವಿಠಲ ದಾಸ ಸ್ವಾಮೀಜಿ, ಸ್ಥಳೀಯ ಶಾಸಕರಾದ ಸುನೀಲ್ ಕುಮಾರ್, ಲಾಲಾಜಿ ಮೆಂಡನ್, ಐವಾನ್ ಡಿಸೋಜಾ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ವಿವಿಧ ಸಂಘ ಸಂಸ್ಥೆಯ ಸದಸ್ಯರು ಸಾರ್ವಜನಿಕರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಮಾರು ಶ್ರೀ, ಸರ್ಕಾರ ರಸ್ತೆ ನೀರಿನ ಸೌಲಭ್ಯ ವಿದ್ಯುತ್ ಅನ್ನು ಒದಗಿಸದಿದ್ದರೆ ಅಂತಹ ಸರ್ಕಾರ ಇದ್ದರೆಷ್ಟು ಹೋದರೆಷ್ಟು ಅಂತ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಹೀಗೆ ಮುಂದುವರಿದರೆ ಸರ್ಕಾರಿ ಬಾವಿಯ ನೀರು ಕುಡಿಯಲು ಬಿಲ್ ಕಟ್ಟುವ ಪರಿಸ್ಥಿತಿ ನಿರ್ಮಾಣವಾದೀತು ಎಂದು ಜನರನ್ನು ಎಚ್ಚರಿಸಿದರು. ಟೋಲ್ ವಿರುದ್ಧ ಹೋರಾಟ ಮುಂದುವರಿಯುತ್ತದೆ. ಟೋಲ್ ಸಂಗ್ರಹ ಕೇಂದ್ರ ಆರಂಭವಾದರೆ ಅದನ್ನು ಪುಡಿಗೈಯ್ಯುವ ಹೋರಾಟದಲ್ಲಿ ನಾನು ಮುಂಚೂಣಿಯಲ್ಲಿ ಇರುತ್ತೇನೆ ಎಂದು ಕಟು ಎಚ್ಚರಿಕೆ ನೀಡಿದರು.

Comments are closed.