ಕರಾವಳಿ

ಅಂಪಾರು: ಜೋಗಕ್ಕೆ ತೆರಳಿ ವಾಪಾಸ್ಸಾಗುವಾಗ ಕಾರಿಗೆ ಬಸ್ಸು ಡಿಕ್ಕಿ; ಇಬ್ಬರು ದಾರುಣ ಸಾವು, ಮೂವರಿಗೆ ಗಾಯ

Pinterest LinkedIn Tumblr

ಕುಂದಾಪುರ: ತಾಲೂಕಿನ ಅಂಪಾರು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಖಾಸಗಿ ಬಸ್ ಹಾಗೂ ಕಾರು ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಐವರಲ್ಲಿ ಇಬ್ಬರು ಸಾವನ್ನಪ್ಪಿದ್ದು ಮೂವರು ಗಾಯಗೊಂಡ ಘಟನೆ ರವಿವಾರ ಸಂಜೆ ನಡೆದಿದೆ.

(ದೀಕ್ಷಿತ್ ಶೆಟ್ಟಿ, ಕಿರಣ್ ಶೆಟ್ಟಿ)

ಕುಂದಾಪುರ ತಾಲೂಕಿನ ಹೊಸ್ಮಠ ನಿವಾಸಿ ಕಿರಣ ಶೆಟ್ಟಿ (23) ಹಾಗೂ ಮಲ್ಯಾಡಿ ಮೂಲದ ದೀಕ್ಷಿತ್ ಶೆಟ್ಟಿ (23) ಮೃತ ದುರ್ದೈವಿಗಳು. ಅಪಘಾತದಲ್ಲಿ ಅರುಣ ಎಂಬಾತನಿಗೆ ಗಂಭೀರ ಗಾಯವಾಗಿದ್ದು ಮಣಿಪಾಲದಲ್ಲಿ ಹಾಗೂ ಮನೀಷ್ ಹಾಗೂ ಜೀವನ್ ಎನ್ನುವವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ ರಜಾ ದಿನವಾದ್ದರಿಂದ ಸ್ನೇಹಿತರೆಲ್ಲರೂ ಎರಡು ಕಾರಿನಲ್ಲಿ ಜೋಗ ಜಲಪಾತ ನೋಡಲು ತೆರಳುತ್ತಿದ್ದು ಸಂಜೆ ವೇಳೆ ಊರಿಗೆ ವಾಪಾಸಾಗುತ್ತಿದ್ದರು. ಕುಂದಾಪುರದ ಸಿದ್ದಾಪುರ ಮಾರ್ಗವಾಗಿ ಕುಂದಾಪುರದತ್ತ ಸಾಗುವಾಗ ಒಂದಷಟ್ಟು ಮಂದಿ ಚಲಿಸುತ್ತಿದ್ದ ಕಾರು ಮುಂಭಾಗದಲ್ಲಿ ತೆರಳುತ್ತಿದ್ದು ಈ ಕಾರು ಹಿಂದಿನಿಂದ ಸಂಚರಿಸುತ್ತಿತ್ತು. ಇದೇ ವೇಳೆ ಕುಂದಾಪುರದಿಂದ ಸಿದ್ದಾಪುರದತ್ತ ಸಾಗಿಬಂದ ಖಾಸಗಿ ಬಸ್ ಸ್ಯಾಂಟ್ರೋ ಕಾರಿಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಐವರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮದ್ಯೆ ದೀಕ್ಷಿತ್ ಮೃತಪಟ್ಟಿದ್ದು ಗಂಭೀರ ಗಾಯಗೊಂಡ ಕಿರಣ್ ಹಾಗೂ ಅರುಣ್ ಎಂಬಿಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಾಗ ಕಿರಣ್ ಕೂಡ ಮೃತಪಟ್ಟಿದ್ದಾರೆ. ಸದ್ಯ ಅರುಣ್ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ತೀವೃತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಮೃತ ಕಿರಣ್ ಶೆಟ್ಟಿ ವಿದ್ಯಾಭ್ಯಾಸದ ಬಳಿಕ ಗುತ್ತಿಗೆದಾರನಾಗಿ ಕಾರ್‍ಯ ನಿರ್ವಹಿಸುತ್ತಿದ್ದು, ದೀಕ್ಷಿತ್ ಕೊಣಾಜೆಯಲ್ಲಿ ಎಂ.ಎಸ್.ಸಿ ಮುಗಿಸಿ ಕ್ಯಾಂಪಸ್ ಸೆಲಕ್ಷನ್‌ನಲ್ಲಿ ಉದ್ಯೋಗ ಗಿಟ್ಟಿಸಿ ಆ.1ಕ್ಕೆ ಹಾಜರಾಗುವವರಿದ್ದರು.

ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕೆ ಭೇಟಿ ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿರಿ: ಕುಂದಾಪುರದ ಅಂಪಾರಿನಲ್ಲಿ ಬಸ್-ಕಾರು ನಡುವೆ ಭೀಕರ ಅಪಘಾತ; ಇಬ್ಬರು ಗಂಭೀರ(Breaking)

Comments are closed.