ಕರಾವಳಿ

ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಅ.ವಂ.| ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನೇಮಕ

Pinterest LinkedIn Tumblr

ಮಂಗಳೂರು: ಮಂಗಳೂರು ಕಿರೆಂ ಮೂಲದ, ಪ್ರಸ್ತುತ ರೋಮಿನ ಫೊಂತಿಫಿಕಾಲ್ ಉರ್ಬನ್ ವಿಶ್ವವಿದ್ಯಾನಿಲಯದಲ್ಲಿ ದೇವತಾಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿರುವ ಅತೀ ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇವರನ್ನು ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಕ್ರೈಸ್ತರ ಪರಮೋಚ್ಛ ಧಾರ್ಮಿಕ ಗುರು ಪೋಪ್ ಫ್ರಾನ್ಸಿಸ್ ಇವರು ನೇಮಕ ಮಾಡಿದ್ದಾರೆ.

ಮಂಗಳವಾರ ಮಧ್ಯಾಹ್ನ ಭಾರತೀಯ ಸಮಯ ಅಪರಾಹ್ನ 3.30 ಗಂಟೆಗೆ ವ್ಯಾಟಿಕನ್, ದೆಹಲಿ ಮತ್ತು ಮಂಗಳೂರಿನಲ್ಲಿ ಏಕಕಾಲದಲ್ಲಿ ಈ ಘೋಷಣೆ ಮಾಡಲಾಗಿದೆ.

1964 ಎಪ್ರಿಲ್ 27 ರಂದು ಜನಿಸಿದ ಪೂಜ್ಯರು 1991 ಮೇ 06 ರಂದು ಗುರು ದೀಕ್ಷೆ ಪಡೆದು ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಹಾಗೂ ಮಂಗಳೂರಿನ ಮಿಲಾಗ್ರಿಸ್ ಹಾಗೂ ವಿಟ್ಲಾ ಚರ್ಚ್‌ಗಳಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ರೋಮ್‌ಗೆ ತೆರಳಿದ ಇವರು ಫೊಂತಿಫಿಕಾಲ್ ಉರ್ಬನ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ನಂತರ ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.

1674ರಲ್ಲಿ ಮಂಗಳೂರು ಧರ್ಮಪ್ರಾಂತ್ಯವಾಗಿ ಅಸ್ತಿತ್ವಕ್ಕೆ ಬಂದ, ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಸುಮಾರು 124 ಧರ್ಮಕೇಂದ್ರಗಳ ವ್ಯಾಪ್ತಿ ಹೊಂದಿರುವ ಈ ರೋಮನ್ ಕ್ರೈಸ್ತ ಧರ್ಮಪ್ರಾಂತ್ಯಕ್ಕೆ ಇವರು ಹದಿನಾಲ್ಕನೆ ಬಿಷಪ್ ಆಗಿ ಮಾರ್ಗದರ್ಶನ ನೀಡುವರು.

ಹಿಂದಿನ ಬಿಷಪ್ ಎಲೋಶಿಯಸ್ ಪಾವ್ಲ್ ಡಿಸೋಜ ಇವರು 22 ವರ್ಷ ಸೇವೆ ಸಲ್ಲಿಸಿ ಎರಡು ವರ್ಷಗಳ ಮೊದಲು ನಿವೃತ್ತರಾಗಿದ್ದು, ನೂತನ ಬಿಷಪರ ಅಧಿಕಾರ ಸ್ವೀಕಾರ ತನಕ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ತಿಳಿದು ಬಂದಿದೆ.

Comments are closed.