ಮಂಗಳೂರು : ಪ್ರಕೃತಿ ವಿಕೋಪದಿಂದಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 23 ಮನೆಗಳು ಸಂಪೂರ್ಣ ಹಾಗೂ ಭಾಗಶಃ ಹಾನಿಯಾಗಿದ್ದು, ಆ ಎಲ್ಲಾ ಮನೆಗಳ ಕುಟುಂಬಿಕರಿಗೆ 10 ದಿನಗಳೊಳಗಾಗಿ ಪರಿಹಾರ ವಿತರಿಸಲು ಅಧಿಕಾರಿಗಳಿಗೆ, ಸಂಬಂಧಿಸಿದ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಗಾಳಿ ಮಳೆಯಿಂದ ಸಂಪೂರ್ಣ ಹಾನಿಗೀಡಾದ ಮಂಗಳೂರು ಕ್ಷೇತ್ರದ ವಿವಿದೆಡೆ ಭಾನುವಾರ ಭೇಟಿ ನೀಡಿ ವೀಕ್ಷಿಸಿದ ಸಂದರ್ಭ ಈ ಹೇಳಿಕೆ ನೀಡಿದ್ದಾರೆ.
ಹಾನಿಗೀಡಾದ ಸುಭಾ಼ಶ್ ನಗರದ ಇಸ್ಮಾಯಿಲ್, ಮುನ್ನೂರು ಮಜಲ್ ತೋಟದಲ್ಲಿ ಹಾನಿಗೀಡಾದ ಸುಂದರ ಹಾಗೂ ಲೂಸಿ ಅವರ ಮನೆಯನ್ನು ಸಂದರ್ಶಿಸಿದ ಸಚಿವರು ಶೀಘ್ರ ಪರಿಹಾರದ ಭರವಸೆ ನೀಡಿದರು.
ಬಳಿಕ ಅಂಬ್ಲಮೊಗರು-ಮುನ್ನೂರು ಸೇತುವೆ ನಿರ್ಮಾಣದ ಕಾಮಗಾರಿ ವೀಕ್ಷಿಸಿ ಅದಕ್ಕೆ ಪರ್ಯಾಯವಾಗಿ ನಿರ್ಮಿಸಿದ ರಸ್ತೆಯ ತುಂಬಾ ಮಳೆ ನೀರು ತುಂಬಿ ಹಾನಿಯಾಗಿದ್ದು, ಅದನ್ನು ದುರಸ್ತಿಗೊಳಿಸಲು ಸ್ಥಳೀಯ ಗ್ರಾ.ಪಂ.ಗೆ ಸೂಚಿಸಿದರು.
ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷ ರಫೀಕ್ ಮದಕ, ಸದಸ್ಯರಾದ ಇಕ್ಬಾಲ್, ಶಶಿಪ್ರಭಾ ಶೆಟ್ಟಿ, ದಯಾನಂದ ಶೆಟ್ಟಿ, ಜಾನ್ ಇವರು ಸೇರಿ ಪರ್ಯಾಯ ರಸ್ತೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ಸೇತುವೆ ಪೂರ್ಣವಾಗುವ ತನಕ ಪರ್ಯಾಯ ರಸ್ತೆ ಹಾನಿಯಾದರೆ ದುರಸ್ತಿಗೊಳಿಸಿ ಯಥಾಸ್ಥಿತಿಯಲ್ಲಿಡುವಂತೆ ಸಚಿವ ಯು.ಟಿ.ಖಾದರ್ ಸೇತವೆ ಗುತ್ತಿಗೆದಾರರಿಗೆ ಸೂಚಿಸಿದರು.
Comments are closed.