ಕರಾವಳಿ

ಮಣಿಪಾಲ: ಸಾಲುಮರ ತಿಮ್ಮಕ್ಕ ಟ್ರೀಪಾರ್ಕ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ

Pinterest LinkedIn Tumblr

ಉಡುಪಿ: ವಿವಿಧ ಕಾರಣಗಳಿಂದ ಸಮೃದ್ಧ ಸಂಪನ್ಮೂಲಗಳಿದ್ದರೂ ನಾವಿಂದು ಪರಿಸರ ಸಂರಕ್ಷಣೆಯಲ್ಲಿ ತೊಡಗುವುದು ಅತ್ಯಗತ್ಯವಾಗಿದೆ. ಈ ಸಂಬಂಧ ಕಾನೂನು ಕಾಯಿದೆಗಳಿದ್ದರೂ ವೈಯಕ್ತಿಕ ನಿರ್ಧಾರಗಳು ಬದಲಾವಣೆಗೆ ಕಾರಣವಾಗಲಿದೆ; ಪರಿಸರ ಸಂರಕ್ಷಣೆ ಕೇವಲ ಆಚರಣೆಗೆ ಸೀಮಿತವಾಗದೆ, ವ್ಯಕ್ತಿಗತ ಆಚರಣೆಯಾದಾಗ ಮಾತ್ರ ನಿರೀಕ್ಷಿತ ಪರಿಣಾಮ ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಮಣಿಪಾಲ ಸಾಲುಮರ ತಿಮ್ಮಕ್ಕ ಟ್ರೀಪಾರ್ಕ್‌ನಲ್ಲಿ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್‌ಕ್ಲಬ್ ಉಡುಪಿ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡನೆಟ್ಟು ಮಾತನಾಡಿದರು.

ಪರಿಸರ ರಕ್ಷಣೆ ವಿಷಯ ಬಂದಾಗ ಇತಿಹಾಸ, ಕೈಗಾರಿಕೀಕರಣ, ಅಭಿವೃದ್ಧಿ, ಮಾನವರ ದುರಾಸೆ, ಕೊಳ್ಳುಬಾಕ ಸಂಸ್ಕೃತಿ ಇತ್ಯಾದಿ ಕಾರಣಗಳಿಂದಾಗಿ ಪರಿಸರ ಹಾಳಾಗುತ್ತಿದೆ. ಪ್ಲಾಸ್ಟಿಕ್‌ನ ಅತಿ ಬಳಕೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಸೃಷ್ಟಿಸಿರುವ ದುರಂತಗಳ ಅರಿವು ಈಗ ನಮ್ಮನ್ನು ತೀವ್ರವಾಗಿ ಕಾಡುತ್ತಿದ್ದು, ಪರಿಸರ ರಕ್ಷಣೆ ಕಾರ್‍ಯ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲಗಳನ್ನು ಮಿತವಾಗಿ ಬಳಸಿ, ಮುಂದಿನವರಿಗೂ ಬಳಕೆಗೆ ಅನುವು ಮಾಡಿಕೊಡಿ ಎಂಬ ಗಾಂಧಿ ಚಿಂತನೆ ಪರಿಸರ ರಕ್ಷಣೆಗೆ ಪೂರಕ ಎಂದು ಎಸ್‌ಪಿ ಲಕ್ಷ್ಮಣ ನಿಂಬರ್ಗಿ ಹೇಳಿದರು.

ಅಭ್ಯಾಗತರಾಗಿದ್ದ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ, ದೇಶದ ಗಡಿ ಕಾಯುವ ಸೈನಿಕರಂತೆ ಅರಣ್ಯ ಇಲಾಖೆ ದೇಶದೊಳಗಿನ ವನ್ಯ ಸಂಪತ್ತನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಜನಸಂಖ್ಯೆಗನುಗುಣವಾಗಿ ಒಟ್ಟು ಭೂಭಾಗದ ಶೇ. 33ರಷ್ಟು ಅರಣ್ಯ ಇರಬೇಕೆಂಬ ನಿಯಮ ಇದೆ. ಪ್ರಸ್ತುತ 21.5 ಶೇ.ದಷ್ಟು ಮಾತ್ರ ಇದೆ. ಕರ್ನಾಟಕದ ಒಟ್ಟು ವಿಸ್ತೀರ್ಣ 1.91 ಲಕ್ಷ ಹೆಕ್ಟೇರ್ ಪೈಕಿ ಸುಮಾರು 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಇದೆ. ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ನಮ್ಮ ರಾಜ್ಯ ಶೇ. 1ರಷ್ಟು ಅಧಿಕ ಅರಣ್ಯ ಪ್ರದೇಶ ಹೊಂದಿದೆ ಎಂದರು.

ಅರಣ್ಯ ರಕ್ಷಣೆಯಲ್ಲಿ ಇಲಾಖೆ ಸಾಕಷ್ಟು ಪರಿಣಾಮಕಾರಿ ಕಾರ್‍ಯಕ್ರಮಗಳನ್ನು ಅನುಸರಿಸುತ್ತಿದ್ದು ಈ ಬಾರಿ ಜಿಲ್ಲೆಯಲ್ಲಿ 8.20 ಲಕ್ಷ ಸಸಿ ನೆಡುವ ಗುರಿ ಇರಿಸಿಕೊಳ್ಳಲಾಗಿದೆ. ಆ ಪೈಕಿ 5 ಲಕ್ಷ ಸಸಿಗಳನ್ನು ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನೆಡಲಾಗುವುದು. ಸಾರ್ವನಿಕರಿಗೆ 1 ರೂ. ದರದಲ್ಲಿ 1.5 ಲಕ್ಷ ವಿವಿಧ ಜಾತಿಯ ಸಸಿಗಳನ್ನು ವಿತರಿಸಲುದ್ದೇಶಿಸಲಾಗಿದೆ ಎಂದು ಕ್ಲಿಫರ್ಡ್ ಹೇಳಿದರು.

ಅತಿಯಾದ ಪ್ಲಾಸ್ಟಿಕ್ ಬಳಕೆ ಅಪಾಯದ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ. ಕಳೆದ 100 ವರ್ಷದಲ್ಲಿ ಬಳಕೆ ಆಗುವಷ್ಟು ಪ್ರಮಾಣದ ಪ್ಲಾಸ್ಟಿಕ್ ಕಳೆದ 10 ವರ್ಷದಲ್ಲೇ ಬಳಕೆಯಾಗಿ ಅದರ ನಿರ್ವಹಣೆಯೇ ತಲೆನೋವಾಗಿ ಪರಿಣಮಿಸಿದೆ. ಪರಿಸರ ಮಾಲಿನ್ಯ ನಿವಾರಣೆಗೆ ಅರಣ್ಯೀಕರಣವೊಂದೇ ಪರಿಹಾರವಾಗಲಿದೆ ಎಂದರು.

ವಾರ್ತಾಧಿಕಾರಿ ರೋಹಿಣಿ, ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಗಣೇಶಪ್ರಸಾದ ಪಾಂಡೇಲು, ಕಾರ್‍ಯದರ್ಶಿ ಸಂತೋಷ್ ಸರಳೆಬೆಟ್ಟು, ಕೋಶಾಧಿಕಾರಿ ದಿವಾಕರ ಹಿರಿಯಡ್ಕ, ಜೊತೆ ಕಾರ್‍ಯದರ್ಶಿ ಮೈಕೆಲ್ ರಾಡ್ರಿಗಸ್ ಇದ್ದರು.

ಸಂಘದ ಮಾಜಿ ಅಧ್ಯಕ್ಷ ಕಿರಣ್ ಮಂಜನಬೈಲು ಸ್ವಾಗತಿಸಿದರು. ಪ್ರೆಸ್‌ಕ್ಲಬ್ ಸಂಚಾಲಕ ನಾಗರಾಜ ರಾವ್ ನಿರೂಪಿಸಿದರು. ಸಹ ಸಂಚಾಲಕ ಸುಭಾಶ್ಚಂದ್ರ ವಾಗ್ಳೆ ವಂದಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪತ್ರಕರ್ತರು ಕಸಿ ಮಾವಿನ ಗಿಡ, ಬೇವಿನಗಿಡ, ಗಂಧದ ಗಿಡ ಪಡೆದು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಬದ್ದರಾದರು.

Comments are closed.