ಕರಾವಳಿ

ಕುಡ್ಸೆಂಪ್ ಹಗರಣ ಆರೋಪ ತಳ್ಳಿ ಹಾಕಿದ ಜೆ.ಆರ್.ಲೋಬೋ : ಆಪಾದಿತರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯ ಎಚ್ಚರಿಕೆ

Pinterest LinkedIn Tumblr

ಮಂಗಳೂರು, ಎಪ್ರಿಲ್.28: ನನ್ನ ವಿರುದ್ಧ ವೃಥಾರೋಪ ಮಾಡಹೊರಟೀರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇನೆ” ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಾರ್ಥಿ ಜೆ.ಆರ್.ಲೋಬೊ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಡ್ಸೆಂಪ್ ಹಗರಣವೆಂದು ನನ್ನ ವಿರುದ್ಧ ವೃಥಾರೋಪ ಮಾಡಲಾಗುತ್ತಿದೆ. ಈ ಮೂಲಕ ನನ್ನನ್ನು ಮಾನಸಿಕವಾಗಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದರ ವಿರುದ್ಧ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದೇನೆ. ಇದೀಗ ಈ ರೀತಿ ಆರೋಪ ಮಾಡಿದ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ.

‘ಕುಡ್ಸೆಂಪ್ ಯೋಜನೆಯ ನಿದೇಶಕನಾಗಿದ್ದ ನಾನು ಅಲ್ಲಿಂದ 2009ರಲ್ಲಿ ವರ್ಗಾವಣೆಗೊಂಡಿದ್ದೆ. ಆದರೆ ಕುಡ್ಸೆಂಪ್ ಯೋಜನೆಯಲ್ಲಿ ಈಗ ಮಾಡಲಾಗುತ್ತಿರುವ ಆರೋಪಗಳೆಲ್ಲ ಕೇಳಿಬಂದಿರುವುದು 2011, 12, 13ರಲ್ಲಿ. ಈ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದುದು ಬಿಜೆಪಿ. ಇದರಲ್ಲಿ ನನ್ನ ಪಾತ್ರವಿಲ್ಲದಿದ್ದರೂ ವಿಪಕ್ಷದ ಕೆಲವರು ಮಾಡುತ್ತಿರುವ ಆರೋಪದಿಂದ ನೋವಾಗಿದೆ ಎಂದು ಜೆ.ಆರ್.ಲೋಬೋ ವಿಷಾದ ವ್ಯಕ್ತಪಡಿಸಿದ್ದಾರೆ.

35 ವರ್ಷಗಳಿಂದ ಸರಕಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಈ ಅವಧಿಯಲ್ಲಿ ತನ್ನ ವಿರುದ್ಧ ಯಾವುದೇ ಆರೋಪಗಳು ಕೇಳಿಬಂದಿರಲಿಲ್ಲ. ಅದೇರೀತಿ ಕುಡ್ಸೆಂಪ್‌ನಲ್ಲಿ ತಾನು ಅಧಿಕಾರಿಯಾಗಿದ್ದಾಗ 400 ಅಧಿಕ ಎಂಜಿನಿಯರ್‌ಗಳು, 70 ಗುತ್ತಿಗೆದಾರರು ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸಿದ್ದರು. ಈ ಪೈಕಿ ಯಾರಾದರೊಬ್ಬರು ತಾನು ಭ್ರಷ್ಟ ಎಂದು ಹೇಳಿದರೆ ಆ ಬಗ್ಗೆ ಯಾವುದೇ ರೀತಿಯ ತನಿಖೆಯನ್ನು ಎದುರಿಸಲು ಸಿದ್ಧ.

ತನ್ನ ವಿರುದ್ಧ ಆರೋಪದ ಬಗ್ಗೆ ಯಾವುದೇ ರೀತಿಯ ವಿಚಾರಣೆ ಬೇಕಾದರೂ ಆಗಲಿ. ವೃಥಾರೋಪ ಮಾಡುತ್ತಿರುವವರು ಅದಕ್ಕೆ ಸಾಕ್ಷಗಳಿದ್ದರೆ ಲೋಕಾಯುಕ್ತರಿಗೆ ನೀಡಲಿ. ಅದು ಬಿಟ್ಟು ಚುನಾವಣೆ ಹಿನ್ನೆಲೆಯಲ್ಲಿ ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಲೋಬೊ ಹೇಳಿದ್ದಾರೆ.

ಮಾಜಿ ಮೇಯರ್ ಗಳಾದ ಮಹಾಬಲ ಮಾರ್ಲ, ಜೆಸಿಂತಾ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾರ್ಪೊರೇಟರ್ ಎ.ಸಿ ವಿನಯ್ ರಾಜ್, ಪಕ್ಷದ ಪ್ರಮುಖರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ವಿಶ್ವಾಸ್ ದಾಸ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.