ಮಂಗಳೂರು, ಮಾರ್ಚ್.13: ಮಹಿಳಾ ಕಾರ್ಪೋರೇಟರ್ ಜೊತೆ ಅಸಭ್ಯವಾಗಿ ವರ್ತಿಸಿದ್ದ ಕಾಂಗ್ರೆಸ್ ಮುಖಂಡನಿಗೆ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಪೋರೇಟರ್ ಧರ್ಮದೇಟು ನೀಡಿದ ಘಟನೆ ಸುರತ್ಕಲ್ನಲ್ಲಿ ಸೋಮವಾರ ನಡೆದಿದ್ದು,ಮಹಿಳೆಯೊಬ್ಬರ ಈ ಸಾಹಸದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಧರ್ಮದೇಟು ತಿಂದ ವ್ಯಕ್ತಿಯನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣಾಪುರ ಮೂಲದ ಅಬ್ದುಲ್ ಸತ್ತಾರ್ ಎಂದು ಗುರುತಿಸಲಾಗಿದೆ. ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ ಕಾಂಗ್ರೆಸ್ ಮುಖಂಡನಿಗೆ ಧರ್ಮದೇಟು ನೀಡಿದ ದಿಟ್ಟ ಮಹಿಳೆ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಪ್ರತಿಭಾ ಕುಳಾಯಿಯವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಸೋಮವಾರ ಬೆಳಗ್ಗೆ ಮಂಗಳೂರು ಉತ್ತರ ಶಾಸಕ ಮೊದಿನ್ ಬಾವಾ ಅವರ ಸುರತ್ಕಲ್ ಕಚೇರಿಯಲ್ಲಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಕೂಡ ಭಾಗವಹಿಸಿದ್ದರು. ಈ ವೇಳೆ ಪ್ರತಿಭಾ ಜೊತೆ ಸತ್ತಾರ್ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ.
ಈ ವೇಳೆ ಕೋಪಗೊಂಡ ಪ್ರತಿಭಾ, ಸತ್ತಾರ್ಗೆ ಧರ್ಮದೇಟು ನೀಡಲು ಮುಂದಾದ ವೇಳೆ ಆತ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಕಚೇರಿಯ ಮುಂದೆ ರಾಜೀ ಪಂಚಾಯಿತಿ ಮೂಲಕ ತನ್ನ ತಪ್ಪಿಗೆ ಕ್ಷಮೆ ನೀಡಬೇಕೆಂದು ಪ್ರತಿಭಾ ಬಳಿ ಕೇಳಿಕೊಂಡಿದ್ದ. ಆದರೆ ಆತನ ಅಸಭ್ಯ ವರ್ತನೆಗೆ ಮೊದಲೇ ಕೋಪಗೊಂಡಿದ್ದ ಪ್ರತಿಭಾ ಆತನಿಗೆ ಎರಡೇಟು ಬಿಗಿದಿದ್ದಾರೆ.
ಪ್ರತಿಭಾ ನಡೆ ಪರಿಸರದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಸತ್ತಾರ್ ಅನೇಕ ಮಹಿಳೆಯರ ಜೊತೆ ಹಿಂದೆ ಅಸಭ್ಯವಾಗಿ ವರ್ತಿಸುತ್ತಿದ್ದರೂ ಯಾವೊಬ್ಬ ಮಹಿಳೆ ಕೂಡ ತಕ್ಕ ಶಾಸ್ತಿ ಮಾಡಿರಲಿಲ್ಲ. ಇದೇ ಕಾರಣಕ್ಕಾಗಿ ಸತ್ತಾರ್ ತನ್ನ ಅಸಭ್ಯ ವರ್ತನೆಯನ್ನು ಮುಂದುವರೆಸಿದ್ದ. ಆದರೆ ಇದೀಗ ಮಾಡಿದ ತಪ್ಪಿಗೆ ಸರಿಯಾಗಿ ಪಾಠ ಕಲಿಸಿದ ಪ್ರತಿಭಾ ಕಾರ್ಯಕ್ಕೆ ಮಹಿಳೆಯರು ಸೇರಿದಂತೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹಿಂದೂ ಸಂಘಟನೆಗಳಿಂದ ತಲವಾರು ದಾಳಿ : ಕೈ ಕಳೆದುಕೊಂಡ ಸತ್ತಾರ್
ಪ್ರತಿಭಾ ಜೊತೆ ಸತ್ತಾರ್ ಈ ರೀತಿ ಅಸಭ್ಯವಾಗಿ ವರ್ತಿಸುತ್ತಿರುವುದು ಮೊದಲೇನಲ್ಲ. ಈ ಹಿಂದೆ ಕೂಡ ಆತ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ. ಅಲ್ಲದೆ ಪ್ರತಿಭಾ ಹಾಗೂ ಅವರ ಪತಿಯ ನಡತೆಯ ಬಗ್ಗೆ ಇಲ್ಲಸಲ್ಲದ್ದನ್ನು ಪ್ರಚಾರ ಮಾಡುತ್ತಿದ್ದ ಎನ್ನಲಾಗಿದೆ.
ಅದೂ ಅಲ್ಲದೆ ಸುರತ್ಕಲ್ ಪರಿಸರದಲ್ಲಿ ಅನೇಕ ಮಹಿಳೆಯರ ಜೊತೆ ಕೂಡ ಇದೇ ರೀತಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಇದೇ ಕಾರಣಕ್ಕಾಗಿ ಕೆಲ ವರ್ಷಗಳ ಹಿಂದೆ ಈತನಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ತಲವಾರು ದಾಳಿ ನಡೆಸಿದ್ದು, ಒಂದು ಕೈ ಕಳೆದುಕೊಂಡಿದ್ದ. ಆದರೂ ಅದೇ ಛಾಳಿಯನ್ನು ಸತ್ತಾರ್ ಮುಂದುವರೆಸಿದ್ದ. ಇದೀಗ ನಿನ್ನೆ ಕೂಡ ಸತ್ತಾರ್ ತನ್ನ ಹಿಂದಿನ ಛಾಳಿಯುನ್ನು ಮುಂದುವರೆಸಿದಾಗ ಸರಿಯಾಗಿ ಧರ್ಮದೇಟು ತಿಂದಿದ್ದಾನೆ.
ಸುಳ್ಳು ಸುದ್ದಿ ಹಬ್ಬಿಸಿ, ವಿಕೃತ ಆನಂದ ಪಡೆಯುತ್ತಿದ್ದ :
ನನ್ನ ಹಾಗೂ ನನ್ನ ಗಂಡನ ಬಗ್ಗೆ ಅಬ್ದುಲ್ ಸತ್ತಾರ್ ಅಪಪ್ರಚಾರ ನಡೆಸುತ್ತಿದ್ದ. ಪತಿ ಜೊತೆ ನಾನು ವಿಚ್ಛೇದನಗೊಂಡಿದ್ದೇನೆ, ನನಗೆ ಬೇರೊಬ್ಬರ ಜೊತೆ ಸಂಬಂಧವಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ, ವಿಕೃತ ಆನಂದ ಪಡೆಯುತ್ತಿದ್ದ. ಅದಕ್ಕೆ ಅತನಿಗೆ ತಕ್ಕ ಪಾಠ ಕಲಿಸಿದ್ದೇನೆ. ಸುರತ್ಕಲ್ ವ್ಯಾಪ್ತಿಯಲ್ಲಿ ಆತನ ವಿರುದ್ಧ ನಾನು 1000 ಮಂದಿಯನ್ನು ಸೇರಿಸಬಲ್ಲೆ, ಆದರೆ ಸತ್ತಾರ್ಗೆ ತಾಕತ್ ಇದ್ದರೆ ಆತನ ಪರವಾಗಿ ಆತ 10 ಮಂದಿಯನ್ನು ಸೇರಿಸಲಿ. ಸತ್ತಾರ್ನಂಥವರಿಂದಲೇ ಇಂದು ಮಹಿಳೆಯರು ರಾಜಕೀಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದ ಸಾಚಾ ಆಗಿದ್ದಲ್ಲಿ ನನ್ನ ವಿರುದ್ಧ ಕೇಸ್ ನೀಡಲಿ ಎಂದು ಪ್ರತಿಭಾ ಕುಳಾಯಿ ಪತ್ರಕರ್ತರಲ್ಲಿ ತಿಳಿಸಿದ್ದಾರೆ,
Comments are closed.