ಮಂಗಳೂರು, ಮಾರ್ಚ್ : 10: ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಯ ರಾಗವನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿರುವ ಬಗ್ಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಬರಿಮಲೆ ಅಯ್ಯಪ್ಪನನ್ನು ಸ್ತುತಿಸುವ ‘ಪಳ್ಳಿಕಟ್ಟು ಶಬರಿಮಲೈಕ್ಕ್’ ಹಾಡಿನ ರಾಗವನ್ನು ಶಾಸಕ ಮೊಯ್ದಿನ್ ಅವರು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಚಾರಕ್ಕೆ ಬಳಸಿರುವುದನ್ನು ಆಕ್ಷೇಪಿಸಿ ಸಂಘ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ದೂರು ನೀಡಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ ಚುನಾವಣೆ ಸಂದರ್ಭದಲ್ಲಿ ಶಾಸಕ ಮೊಯ್ದೀನ್ ಬಾವಾ ಅಯ್ಯಪ್ಪ ಸ್ವಾಮಿ ಸ್ತುತಿಯನ್ನು ದುರ್ಬಳಕೆ ಮಾಡಿಕೊಂಡು ಸೌಹಾರ್ದ ಕದಡಲು ಯತ್ನಿಸಿದ್ದಾರೆ. ಶಾಸಕ ಮೊಯ್ದೀನ್ ಬಾವಾ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಹಾಗೂ ಹಿಂದೂ ದೇವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಮೊಯ್ದೀನ್ ಬಾವಾ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ. ಚುನಾವಣೆಯ ಸಂದರ್ಭ ಈ ರೀತಿಯ ಕೋಮು ಸೌಹಾರ್ದ ಕೆಡಿಸುವಂತಹ ವಿಷಯಗಳನ್ನು ಪ್ರಚಾರಕ್ಕೆ ಬಳಸಿರುವ ಮೊಯ್ದಿನ್ ಬಾವ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅರುಣ್ ಪುತ್ತಿಲ ದೂರಿನಲ್ಲಿ ತಿಳಿಸಿದ್ದಾರೆ.
ಪುಣ್ಯಕ್ಷೇತ್ರ ಶಬರಿಮಲೆಯ ಅಯ್ಯಪ್ಪ ಸ್ವಾಮಿಯನ್ನು ಸ್ತುತಿಸುವ “ಕಲ್ಲು ಮುಳ್ಳು ಶಬರಿಮಲೆಕ್ಕ್” ಅನ್ನುವ ಭಕ್ತಿಗೀತೆಯನ್ನೇ ಹೋಲುವಂತೆ ಚುನಾವಣಾ ಪ್ರಚಾರದ ಪದ್ಯವನ್ನು ರಚಿಸಲಾಗಿತ್ತು. ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಯ ರಾಗವನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿರುವ ಬಗ್ಗೆ ಶಾಸಕ ಮೊಯ್ದೀನ್ ಬಾವಾ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಹಾಡಿನಲ್ಲಿ ಅಯ್ಯಪ್ಪ ಸ್ವಾಮಿಯ ಬದಲಿಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾರನ್ನು ಹೊಗಳಿ ಸಾಹಿತ್ಯ ರಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಸಿದ್ಧ ಭಕ್ತಿಗೀತೆಯ ಧಾಟಿಯನ್ನು ರಾಜಕಾರಣಿಯನ್ನು ಹೊಗಳಲು ಬಳಸಿಕೊಂಡಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.