ಮಂಗಳೂರು, ಫೆಬ್ರವರಿ.12: ಮನಪಾ ಸದಸ್ಯೆ ( ಕಾರ್ಪೊರೇಟರ್ ) ಪ್ರತಿಭಾ ಕುಳಾಯಿ ಇತ್ತೀಚೆಗೆ ಕಾರ್ಕಳದಲ್ಲಿ ನೀಡಿದ ಹೇಳಿಕೆ ಬಗ್ಗೆ ತೀವ್ರ ಅಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸಂದೇಶವೊಂದು ಮತ್ತೊಂದು ವಿವಾದ ಸೃಷಿಸಿದೆ.
ಪ್ರತಿಭಾ ಕುಳಾಯಿ ಹಾಗೂ ಉತ್ತರ ವಿಧಾನ ( ಸುರತ್ಕಲ್ ) ಸಭಾ ಕ್ಷೇತ್ರದ ಶಾಸಕ ಬಿ.ಎ.ಮೊಯ್ದಿನ್ ಬಾವ ಅವರ ಮಧ್ಯೆ ಅನೈತಿಕ ಸಂಬಂಧವಿದೆ ಎಂಬ ರೀತಿಯಲ್ಲಿ ಅರ್ಥ ನೀಡುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆದರೆ ಇದನ್ನು ಶಾಸಕ ಬಿ.ಎ.ಮೊಯ್ದಿನ್ ಬಾವ ತೀವ್ರವಾಗಿ ಖಂಡಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ತನಗೆ ಮತ್ತು ಪ್ರತಿಭಾರ ಮಧ್ಯೆ ಅನೈತಿಕ ಸಂಬಂಧ ಕಲ್ಪಿಸುವ ಸಂದೇಶಗಳನ್ನು ಹರಿದು ಬಿಡಲಾಗುತ್ತದೆ. ಇಂತಹ ಸಂಬಂಧವನ್ನು ರುಜುವಾತುಪಡಿಸಿದರೆ ತಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವ ಹೇಳಿದ್ದಾರೆ.
ಪ್ರತಿಭಾ ಕುಳಾಯಿಯ ಕಾರ್ಕಳದಲ್ಲಿ ನೀಡಿದ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಆಕೆ ಸತ್ಯ ಸಂಗತಿಯನ್ನಷ್ಟೇ ಹೇಳಿದ್ದಾರೆ. ಹಾಗಂತ ಆಕೆಯನ್ನು ಅತ್ಯಂತ ಕೀಳಾಗಿ, ತುಚ್ಛ ಶಬ್ದಗಳಿಂದ ನಿಂದಿಸುವುದು ಸರಿಯಲ್ಲ. ಆಕೆಯನ್ನು ಟೀಕಿಸುವ ಭರಾಟೆಯಲ್ಲಿ ನಮ್ಮೊಳಗೆ ಸಂಬಂಧವಿದೆ ಎಂದು ಆರೋಪಿಸಲಾಗುತ್ತದೆ. ಇದು ಖಂಡನೀಯ. ಸಹೋದರಿ ಸಮಾನಳಾದ ಪ್ರತಿಭಾರನ್ನು ನಿಂದಿಸುವವರು ಸ್ವತ: ತಮ್ಮ ಸಹೋದರಿಯರ ಜೊತೆ ಅಂತಹ ಸಂಬಂಧ ಇಟ್ಟುಕೊಂಡಿರಬಹುದು ಎಂದು ಪ್ರತಿಕ್ರಿಯಿಸಿದರು.
ಕಾರ್ಪೊರೇಟರ್ ಮುಹಮ್ಮದ್ ಕುಂಜತ್ತಬೈಲ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ತಾಪಂ ಸದಸ್ಯ ಅಬ್ದುಸ್ಸಮದ್, ಮಾಜಿ ಜಿಪಂ ಸದಸ್ಯ ಕೃಷ್ಣ ಅಮೀನ್, ಮಾಜಿ ಕಾರ್ಪೊರೇಟರ್ ಶಾಲಿನಿ, ಪಕ್ಷದ ಮುಖಂಡ ಹಿರಣ್ಯಾಕ್ಷ ಕೋಟ್ಯಾನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.