ಮಂಗಳೂರು, ಫೆಬ್ರವರಿ.12: ಜ್ಯೋತಿಷಿ ತಂದೆಯೋರ್ವ ಮಗನ ಜೊತೆ ಸೇರಿಕೊಂಡು ತನ್ನ ಇನ್ನೋರ್ವ ಪುತ್ರನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಮಟ್ಲ ಎಂಬಲ್ಲಿ ತಡರಾತ್ರಿ ನಡೆದಿದೆ.
ಮೃತರನ್ನು ನವೀನ್(28) ಎಂದು ಗುರುತಿಸಲಾಗಿದೆ. ಬೆಳ್ತಂಗಡಿಯಲ್ಲಿ ಜ್ಯೋತಿಷಿಗಳಾಗಿರುವ ತಂದೆ ಮಂಜುನಾಥ ಹಾಗೂ ಸೋದರ ರಾಘವೇಂದ್ರ ಪ್ರಕರಣದ ಆರೋಪಿಗಳಾಗಿದ್ದು ತಲೆಮರೆಸಿಕೊಂಡಿದ್ದಾರೆ.
ಕಳೆದ ಡಿಸೆಂಬರ್ 31ರಂದು ರಾತ್ರಿ ಹೊಸ ವರ್ಷಾಚರಣೆ ಸಂದರ್ಭ ನವೀನ್ ಹಾಗೂ ತಂದೆ ಮಂಜುನಾಥ್ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಜಗಳ ಉಂಟಾಗಿತ್ತು. ಈ ವೇಳೆ ತಂದೆಯ ಮೇಲೆ ನವೀನ್ ಹಲ್ಲೆ ನಡೆಸಿದ್ದ. ಇದೇ ದ್ವೇಷ ಇಬ್ಬರ ಮಧ್ಯೆ ಮುಂದುವರಿದಿದ್ದು ಆಗಾಗ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ನಿನ್ನೆಯೂ ರಾತ್ರಿ ಊಟ ಮಾಡುತ್ತಿದ್ದ ವೇಳೆ ನವೀನ್ ಮತ್ತು ಮಂಜುನಾಥ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಜಗಳ ಗಂಭೀರ ಸ್ವರೂಪಕ್ಕೆ ತಿರುಗಿದ್ದು, ಮಂಜುನಾಥ್ ಮತ್ತು ರಾಘವೇಂದ್ರ ಸೇರಿ ನವೀನ್ ಮೇಲೆ ದಾಳಿ ನಡೆಸಿದ್ದಾರೆ. ಚೂರಿಯಿಂದ ನವೀನ್ ಹೊಟ್ಟೆ ಹಾಗೂ ತೊಡೆಗೆ ಚೂರಿಯಿಂದ ಇರಿದಿದ್ದು, ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ನವೀನ್ಗೆ ವಿವಾಹವಾಗಿದ್ದು, ಪತ್ನಿ ಇಬ್ಬರು ಮಕ್ಕಳಿದ್ದಾರೆ. ಇವರು ಮೂಲತಃ ಹಾಸನ ಮೂಲದವರಾಗಿದ್ದು, ಸುಡುಗಾಡು ಸಿದ್ದ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಮೃತ ನವೀನ್ ಮನೆಯಲ್ಲಿ ತೋಟದ ಕೆಲಸ ನೋಡಿಕೊಳ್ಳುತ್ತಿದ್ದರು. ಆರೋಪಿಗಳಾದ ಮಂಜುನಾಥ್ ಮತ್ತು ರಾಘವೇಂದ್ರ ಬೆಳ್ತಂಗಡಿಯಲ್ಲಿ ಜ್ಯೋತಿಷಿ ವೃತ್ತಿ ಮಾಡಿಕೊಂಡಿದ್ದರು. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ನವೀನ್ ಪತ್ನಿ ಬೇಬಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Comments are closed.