ಕರಾವಳಿ

ನಮ್ಮದು ಮನುಷ್ಯತ್ವದ ಹಿಂದುತ್ವ, ರಾಕ್ಷಸೀ ಪ್ರವೃತ್ತಿಯ ಹಿಂದುತ್ವ ಅಲ್ಲ : ಸಿಎಂ

Pinterest LinkedIn Tumblr


ಉಡುಪಿ: ನಮ್ಮದು ಮನುಷ್ಯತ್ವ ಹೊಂದಿರುವ ಹಿಂದುತ್ವವೇ ಹೊರತು ರಾಕ್ಷಸಿ ಪ್ರವೃತ್ತಿಯ ಹಿಂದುತ್ವ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದುತ್ವ ಪ್ರತಿಪಾದಿಸುತ್ತಿಲ್ಲ. ಹಿಂದುತ್ವ ಬಿಜೆಪಿಯವರ ಗುತ್ತಿಗೆಯಲ್ಲ. ಹಿಂದುತ್ವ ಕುರಿತು ನಾವು ಅವರಿಂದ ಪಾಠ ಕಲಿಯಬೇಕಾಗಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ತಿರುಗೇಟು ನೀಡಿದ್ದಾರೆ.

ಯೋಗಿ ಆದಿತ್ಯನಾಥ್ ಗೋಡ್ಸೆ ಅನುಯಾಯಿ. ಇವರಿಂದ ಹಿಂದುತ್ವದ ಪಾಠ ಕಲಿಯಬೇಕಾಗಿಲ್ಲ. ಅವರು ಸಿದ್ದರಾಮಯ್ಯ ಹಿಂದೂವಾದರೆ ಗೋಹತ್ಯೆ ನಿಷೇಧ ಮಾಡಲಿ ಎನ್ನುತ್ತಾರೆ. ಸ್ವಾಮಿ ವಿವೇಕಾನಂದರು, ನಾವು ಯಾವ ಆಹಾರ ಸೇವನೆ ಮಾಡುತ್ತೇವೆ. ಅದರಲ್ಲಿ ಹಿಂದುತ್ವ ಆಗಲಿಕ್ಕೆ ಸಾಧ್ಯವಿಲ್ಲ. ನಮ್ಮ ಮನಸ್ಸಿನಲ್ಲಿ ಹಿಂದುತ್ವ ಇರಬೇಕು. ನಮ್ಮ ವ್ಯವಹಾರದಲ್ಲಿ ಹಿಂದುತ್ವ ಇರಬೇಕು. ಆ ಹಿಂದುತ್ವದಲ್ಲಿ ಮನುಷ್ಯತ್ವ ಇರಬೇಕು ಎಂದಿದ್ದಾರೆ. ಇದು ಅವರಿಗೆ ಗೊತ್ತಿಲ್ಲ ಎಂದರು.

ಹುಬ್ಬಳ್ಳಿಗೆ ಬಂದಾಗ ಯೋಗಿ ಅವರು ಸಿದ್ದರಾಮಯ್ಯನವರು ಟಿಪ್ಪೂ ಸುಲ್ತಾನ್ ಜಯಂತಿ ಮಾಡುತ್ತಾರೆ ಹನುಮ ಜಯಂತಿ ಮಾಡೋಲ್ಲ ಎಂದಿದ್ದರು. ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿ. ಅದು ಜಂಗಲ್ ರಾಜ್. ಅಲ್ಲಿ ಮಕ್ಕಳು ಅಪೌಷ್ಠಿಕತೆಯಿಂದ ಸಾಯುತ್ತಿದ್ದಾರೆ. ಅವರಿಗೆ ಒಂದೇ ಒಂದು ಸಲಹೆ ಏನೆಂದರೆ, ಅವರಿಗೆ ಕರ್ನಾಟಕದ ಬಗ್ಗೆ ಗೊತ್ತಾಗಬೇಕೆಂದರೆ ನಮ್ಮ ಅನ್ನಭಾಗ್ಯ ಯೋಜನೆ ನೋಡಲಿ. ಮಕ್ಕಳಿಗೆ ಹಾಲು ಕೊಡುತ್ತಿದ್ದೇವೆ, ಮಾತೃಪೂರ್ಣ ಮೂಲಕ ತಾಯಂದಿರಿಗೆ ಪೌಷ್ಠಿಕ ಆಹಾರ ಕೊಡುತ್ತಿದ್ದೇವಲ್ಲಾ ಅದನ್ನು ನೋಡಿ ಕಲಿಯಲಿ ಎಂದರು.

ಬಿಹಾರ, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ. ಅವರಿಗೆ ಕರ್ನಾಟಕದ ಇತಿಹಾಸ, ಸಂಸ್ಕೃತಿ ಗೊತ್ತಿಲ್ಲ. ಯೋಗಿ ಆದಿತ್ಯನಾಥರೇ ನಾನು ಕರ್ನಾಟಕದ ಮಣ್ಣಿನ ಮಗ, ನಾವು ಆಚರಿಸುವ 26 ಮಹಾಪುರುಷ, ಮಹಾಮಾತೆಯರ ಜಯಂತಿಯಲ್ಲಿ ಟಿಪ್ಪೂ ಸುಲ್ತಾನ್ ಜಯಂತಿ ಕೂಡಾ ಒಂದು ಎಂದು ಅವರು ತಿಳಿಸಿದರು.

ಹಿಂದೆ ರಾಷ್ಟ್ರಪತಿಗಳು ಬೆಂಗಳೂರಿಗೆ ಬಂದಿದ್ದರು. ಅವರು ತಮ್ಮ ಭಾಷಣದಲ್ಲಿ ಟಿಪ್ಪೂ ಸುಲ್ತಾನ್ ಉಲ್ಲೇಖ ಮಾಡಿದ್ದಾರೆ. ನಾವು ಕಳೆದ ಮೂರು ವರ್ಷಗಳಿಂದ ಟಿಪ್ಪೂ ಜಯಂತಿ ಮಾಡುತ್ತಿದ್ದೇವೆ. ಆದರೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಅನಂತ್ ಕುಮಾರ್ ಹೆಗಡೆ ಇವರು ನಾವು ಟಿಪ್ಪೂ ಜಯಂತಿ ಮಾಡೋದಕ್ಕೆ ಬಿಡೋಲ್ಲ ಎನ್ನುತ್ತಾರೆ. ನಾವು ಮಹಾವೀರ ಜಯಂತಿ, ಕೃಷ್ಣ ಜಯಂತಿ ಇನ್ನೂ ಅನೇಕರ ಜಯಂತಿ ಆಚರಿಸುತ್ತೇವೆ. ನಾರಾಯಣ ಗುರು, ಕೃಷ್ಣ, ಕೆಂಪೇಗೌಡ, ಮಹಾವೀರ ಜಯಂತಿ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಜಯಂತಿಗಳನ್ನು ಪ್ರಾರಂಭಿಸಿದವರು ನಾವು ಎಂದು ಮುಖ್ಯಮಂತ್ರಿ ಹೇಳಿದರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ನಾವು. ಅಂಬಿಗರು, ಮೊಗವೀರರು, ಗಂಗಾಮತಸ್ಥರು, ಇವರೆಲ್ಲರನ್ನೂ ಎಸ್.ಟಿ.ಪಟ್ಟಿಯಲ್ಲಿ ಸೇರಿಸಲು ಎರಡು ಸಲ ಶಿಫಾರಸು ಮಾಡಿದ್ದೇವೆ. ಅವರು ಹಿಂದಕ್ಕೆ ಕಳುಹಿಸಿದ್ದಾರೆ. ಯಡಿಯೂರಪ್ಪ ಸಂಸದರು. ಪಾರ್ಲಿಮೆಂಟ್ ನಲ್ಲಿ ಮಾತನಾಡಿ ಎಸ್.ಟಿ. ಪಟ್ಟಿಗೆ ಸೇರಿಸಲಿ. ಮತ್ತೆ ನಾನು ಹೆಸರನ್ನು ಶಿಫಾರಸು ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

Comments are closed.