ಕರಾವಳಿ

ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ವದಂತಿ ಬಿಜೆಪಿಯ ಕಟ್ಟು ಕತೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

ಮಂಗಳೂರು, ನವೆಂಬರ್.19: ಸಚಿವ ಪ್ರಮೋದ್ ಮಧ್ವರಾಜ್ ಯಾವೂದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಬಿಜೆಪಿಗೆ ಸೇರಲಿದ್ದಾರೆಂಬ ವದಂತಿಯನ್ನು ಪ್ರಮೋದ್ ಮಧ್ವರಾಜ್ ಅವರ ತೇಜೋವಧೆ ಮಾಡಲು ಬಿಜೆಪಿಯವರು ಹುಟ್ಟುಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉಡುಪಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ಧಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಚಿವ ಪ್ರಮೋದ್ ಮಧ್ವರಾಜ್ ಅವರ ಇಮೇಜ್ ಹಾಳು ಮಾಡೋಕೆ ಬಿಜೆಪಿಯವರು ಇಂಥಹದ್ದನ್ನು ಹುಟ್ಟುಹಾಕುತ್ತಿದ್ದಾರೆ. ಪ್ರಮೋದ್ ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಈ ಸಂದರ್ಭ ಪಕ್ಕದಲ್ಲೇ ಇದ್ದ ಪ್ರಮೋದ್ ಮಧ್ವರಾಜ್ ರನ್ನು ಕರೆದ ಸಿಎಂ, ಏನಯ್ಯಾ ಬಿಜೆಪಿಗೆ ಹೋಗ್ತ್ಯಾ? ಎಂದು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ಧ್ವನಿ ಗೂಡಿಸಿದ ಮಧ್ವರಾಜ್ ಇದೆಲ್ಲಾ ಬಿಜೆಪಿಯ ಸೃಷ್ಟಿಸುತ್ತಿರುವ ಸುಳ್ಳು ಸುದ್ಧಿ ಎಂದು ಹೇಳಿದರು.

“ಸಂಸದ ನಳಿನ್ ಕುಮಾರ್ ಕಟೀಲ್ ಏನು ಮಾತಾಡುತ್ತಾರೆ ಅಂತ ಅವರಿಗೇ ಗೊತ್ತಿಲ್ಲ. ಅವರಿಗೆ ಸ್ವಲ್ಪವೂ ಬುದ್ಧಿಯಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. “ನನ್ನ ಜತೆ ಬೇಕಾದಷ್ಟು ಮಂದಿ ಬಿಜೆಪಿಯವರು ಸಂಪರ್ಕದಲ್ಲಿದ್ದಾರೆ. ಬಹಳಷ್ಟು ಜನ ಆರ್.ಎಸ್.ಎಸ್ ನವರೂ ಇದ್ದಾರೆ. ಅದನ್ನೆಲ್ಲಾ ಹೇಳಲು ಆಗುತ್ತದಾ?” ಎಂದು ಪ್ರಶ್ನಿಸಿದರು.

Comments are closed.