ಮಂಗಳೂರು, ನವೆಂಬರ್.15: ಮಂಗಳೂರಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಡೀಲ್ ಬಳಿ ನಿರ್ಮಿಸಲಾಗಿರುವ ರೈಲ್ವೆ ಕೆಳಸೇತುವೆ ಇಂದು ಲೋಕಾರ್ಪಣೆಗೊಂಡಿತು. ಈ ಮೂಲಕ ಪಡೀಲ್ ಬಳಿ ನಿರಂತರವಾಗಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ಗೆ ತಕ್ಕ ಮಟ್ಟಿಗೆ ಮುಕ್ತಿ ಸಿಕ್ಕಿದೆ.
ಪಡೀಲ್-ಕೊಡಕ್ಕಲ್ ಬಳಿ ಪ್ರತಿನಿತ್ಯ ಟ್ರಾಫಿಕ್ ಜಾಮ್, ಪ್ರತಿನಿತ್ಯ ಗಂಟೆಗಟ್ಟಲೆ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದವು. ವಾಹನ ಚಾಲಕರು ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದರು. ಇದೀಗ ಸಮಸ್ಯೆ ಬಗೆಹರಿದಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಡೀಲ್ ಬಳಿ ನೂತನ ರೈಲ್ವೆ ಅಂಡರಪಾಸ್ ಇಂದು ವಾಹನ ಸಂಚಾರಕ್ಕೆ ಮುಕ್ತ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಪಡೀಲ್-ಕೊಡಕ್ಕಲ್ ಬಳಿ ಸುಮಾರು 16.50 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕೆಳಸೇತುವೆಯನ್ನು ಬುಧವಾರ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು. ಸುರತ್ಕಲ್- ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯನ್ನು ಸಾಗರ್ಮಾಲ ಯೋಜನೆಯಡಿ 500 ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರ ಮಂಜೂರಾತಿ ನೀಡಿದೆ ಎಂದು ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಮನಪಾ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ. ಬಂಗೇರ, ವಿಜಯ್ ಕುಮಾರ್, ಮಾಜಿ ಎಮ್ಎಲ್ಸಿ ಮೋನಪ್ಪ ಭಂಡಾರಿ ಪ್ರಮುಖರಾದ ರವಿಶಂಕರ್ ಮಿಜಾರ್, ವೇದವ್ಯಾಸ ಕಾಮಾತ್, ರೈಲ್ವೇ ಸಲಹಾ ಸಮಿತಿ ಸದಸ್ಯ ಅಹ್ಮದ್ ಬಾವ, ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅಜಿತ್, ಗುತ್ತಿಗೆದಾರ ಅರುಣ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.
Comments are closed.