ಕರಾವಳಿ

ಬಿಡಬ್ಲ್ಯುಎಫ್‌ನ ಸಾಮಾಜಿಕ ಸೇವೆ ಶ್ಲಾಘನೀಯ : ಮಂಗಳೂರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್

Pinterest LinkedIn Tumblr

ಮಂಗಳೂರು, ಫೆಬ್ರವರಿ. 12: ಮುಸ್ಲಿಂ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ಸಂಘಟನೆಯ ವತಿಯಿಂದ ಶನಿವಾರ ನಡೆದ ಮಂಗಳೂರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 17 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮಂಗಳೂರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಖಾದ ನೇತೃತ್ವದಲ್ಲಿ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಖಾಝಿಯವರು ದುವಾ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಆರ್ಥಿಕವಾಗಿ ಹಿಂದುಳಿದ ಮುಸ್ಲಿಮ್ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸಿದ ಬಿಡಬ್ಲ್ಯುಎಫ್ನ ಸಾಮಾಜಿಕ ಸೇವೆಯನ್ನು ಶ್ಲಾಘಿಸಿ ನೂತನ ವಧು-ವರರಿಗೆ ಶುಭ ಹಾರೈಸಿದರು.

ಅಬುಧಾಬಿಯಲಿದ್ದುಕೊಂಡು ತಮ್ಮ ಉದ್ಯೋಗದ ಜೊತೆ ಕರಾವಳಿಯ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರ ವಿವಾಹ ಕಾರ್ಯಕ್ರಮವನ್ನು ನೆರವೇರಿಸಿರುವ ಬಿಡಬ್ಲ್ಯುಎಫ್ ಸೇವೆ ಶ್ಲಾಘನೀಯ. ಇವರ ಈ ಸೇವೆಯು ಇತರ ಸಂಘಟನೆಗಳಿಗೂ ಮಾದರಿಯಾಗಿದ್ದು, ಇನ್ನಷ್ಟು ಸಾಮಾಜಿಕ ಸೇವೆ ನೀಡುವಂತಾಗಲಿ ಎಂದು ಶಾಸಕ ಮೊಯ್ದಿನ್ ಬಾವ ಶುಭಹಾರೈಸಿದರು.

ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಬ್ಯಾರಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ 2004ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಬ್ಯಾರೀಸ್ ವೆಲ್ಫೇರ್ ಫೋರಂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಥಮವಾಗಿ 2008ರಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇಂದು ನಡೆದ 17 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಬಿಡಬ್ಲುಎಫ್ನ 7ನೆ ಸಾಮೂಹಿಕ ಕಾರ್ಯಕ್ರಮವಾಗಿದ್ದು, ಈ ಮೂಲಕ ಸಂಘಟನೆಯು 100 ಜೋಡಿಗಳ ವಿವಾಹ ಕಾರ್ಯಕ್ರಮವನ್ನು ನೆರವೇರಿಸಿದಂತಾಗಿದೆ ಎಂದರು.

ವಿದೇಶದಲ್ಲಿ ಉದ್ಯೋಗದಲ್ಲಿರುವ ಕರಾವಳಿಗರ ಪರಿಸ್ಥಿತಿ ಹದಗೆಟ್ಟಿದ್ದು, ಈ ಪೈಕಿ ಹಲವರು ಸ್ವದೇಶಕ್ಕೆ ಮರಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ ವಿದೇಶದಿಂದ ವಾಪಸಾಗುವವರ ಆರ್ಥಿಕ ಸಂಕಷ್ಟವನ್ನು ನಿಭಾಯಿಸುವ ನಿಟ್ಟಿನಲ್ಲಿ ಕೇರಳದಲ್ಲಿ ಅಲ್ಲಿನ ಸರಕಾರ 50 ಕೋಟಿ ರೂ.ವನ್ನು ಮೀಸಲಿಟ್ಟಿದೆ. ಇದೇ ಮಾದರಿಯಲ್ಲಿ ರಾಜ್ಯ ಸರಕಾರವು ಕೂಡ ವಿದೇಶದಿಂದ ವಾಪಸಾಗುವವರ ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಸಚಿವರು ಹಾಗೂ ಶಾಸಕರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ನ ಅಧ್ಯಕ್ಷ ಬಿ.ಎಂ.ಫಾರೂಕ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಭಾರತ್ ಇನ್ಫ್ರಾಸ್ಟ್ರಕ್ಚರ್ಸ್ನ ಆಡಳಿತ ನಿರ್ದೇಶಕ ಮುಸ್ತಫಾ ಎಸ್.ಎಂ., ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುರ್ರಹ್ಮಾನ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್ನ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ, ಬಿಡಬ್ಲುಎಫ್ನ ಮುಖ್ಯ ಸಲಹೆಗಾರರಾದ ಸಿದ್ದೀಕ್ ಉಚ್ಚಿಲ್, ಬಶೀರ್ ಬಜ್ಪೆ, ಸಲಹೆಗಾರ ಹನೀಫ್ ಉಳ್ಳಾಲ, ಜಿಲ್ಲಾ ಮುಸ್ಲಿಮ್ ಐಕ್ಯತಾ ವೇದಿಕೆಯ ಅಧ್ಯಕ್ಷ ಮುಸ್ತಫಾ ಕೆಂಪಿ, ದುಬೈ ಎಮಿರೇಟ್ಸ್ ಗ್ಲಾಸ್ ಇಂಡಸ್ಟ್ರೀಸ್ನ ಫತಾವುಲ್ಲಾ ಸಾಹೇಬ್, ಅಲ್ ವಫಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮುಹಮ್ಮದ್ ಹನೀಫ್, ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಆಝಾದ್ ಹಾರ್ಡ್ವೇರ್ಸ್ನ ಮನ್ಸೂರ್ ಅಹ್ಮದ್, ಬಿಡಬ್ಲುಎಫ್ನ ಉಪಾಧ್ಯಕ್ಷರಾದ ಹಂಝ ಅಬ್ದುಲ್ ಖಾದರ್, ಮುಹಮ್ಮದ್ ರಫೀಕ್ ಕೃಷ್ಣಾಪುರ, ಕೋಶಾಧಿಕಾರಿ ಮುಹಮ್ಮದ್ ಸಿದ್ದೀಕ್ ಕಾಪು, ಸಂಯೋಜಕ ಇಮ್ರಾನ್ ಅಹ್ಮದ್ ಕುದ್ರೋಳಿ, ಬಿಡಬ್ಲುಎಫ್ ಸಾಮೂಹಿಕ ವಿವಾಹ ಕಾರ್ಯಕ್ರಮ ಸಮಿತಿ ಸಂಚಾಲಕ ಉಮರ್ ಯು.ಎಚ್., ಉದ್ಯಮಿ ಪಿ.ಪಿ.ಮಜೀದ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಖ್ರಾ ಅರಬಿಕ್ ಸ್ಕೂಲ್ನ ವಿದ್ಯಾರ್ಥಿ ಅಬ್ದುಲ್ ಬಾಸಿತ್ ಕಿರಾಅತ್ ಪಠಿಸಿದರು. ಬಿಡಬ್ಲುಎಫ್ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ ಸ್ವಾಗತಿಸಿದರು. ಮುಖ್ಯ ಸಲಹೆಗಾರ ಸಿದ್ದೀಕ್ ಉಚ್ಚಿಲ್ ವಂದಿಸಿದರು. ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

Comments are closed.