ಕರಾವಳಿ

ಫೆ.10ರಿಂದ 12ರವರೆಗೆ ಮಂಗಳೂರು ಪುರಭವನದಲ್ಲಿ ಕೊಂಕಣಿ ಲೋಕೋತ್ಸವ್

Pinterest LinkedIn Tumblr

ಮಂಗಳೂರು, ಜನವರಿ.19: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ವತಿಯಿಂದ ಫೆ.10ರಿಂದ 12ರವರೆಗೆ ನಗರದ ಪುರಭವನದಲ್ಲಿ ರಾಜ್ಯಮಟ್ಟದ ಕೊಂಕಣಿ ಸಾಹಿತ್ಯ ಸಂಸ್ಕೃತಿ ಹಬ್ಬ (ಕೊಂಕಣಿ ಲೋಕೋತ್ಸವ್) ನಡೆಯಲಿದೆ.

ಬುಧವಾರ ನಗರದ ಪತ್ರಿಕಾಭವನದಲ್ಲಿ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಅವರು, ಹಬ್ಬದಲ್ಲಿ 41 ಸಮುದಾಯಗಳ ಜಾನಪದ ಕಲೆಗಳ ವೈವಿಧ್ಯಮಯ ಕಲಾಪ್ರದರ್ಶನಗಳನ್ನು ಪ್ರಸ್ತುತ ಪಡಿಸಲಾಗುತ್ತದೆ. ಕೊಂಕಣಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಸಂಪ್ರದಾಯಗಳ ಪ್ರದರ್ಶನ, ವಿಶಿಷ್ಟ ಮತ್ತು ಸ್ವಾದಿಷ್ಟ ಖಾದ್ಯಗಳ ಪ್ರದರ್ಶನ, ಕೊಂಕಣಿ ಕೃತಿ, ಸಿಡಿ, ಡಿವಿಡಿ ಇತ್ಯಾದಿಗಳ ಪ್ರದರ್ಶನ- ಮಾರಾಟಕ್ಕೆ ಸುಮಾರು 50 ಮಳಿಗೆಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಹಿಂದು, ಮುಸ್ಲಿಮ್, ಕ್ರೈಸ್ತ ಧರ್ಮಗಳಿಗೆ ಸೇರಿದ ಕೊಂಕಣಿ ಮಾತೃಭಾಷೆಯ 41 ಸಮುದಾಯಗಳ ಸಾಂಸ್ಕೃತಿಕ ಹಿರಿಮೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಫೆ.10ರಂದು ಬೆಳಗ್ಗೆ 10ಕ್ಕೆ ನಡೆಯುವ ಮಕ್ಕಳ ಮತ್ತು ಮಹಿಳೆಯರ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಸಾಧಕ ಮಕ್ಕಳಿಗೆ ಮತ್ತು ಮಹಿಳೆಯರನ್ನು ಗೌರವಿಸಲಾಗುತ್ತದೆ.

ಫೆ.11ರಂದು ಸಚಿವ ಆರ್.ವಿ.ದೇಶಪಾಂಡೆಯ ಅಧ್ಯಕ್ಷತೆಯಲ್ಲಿ ಯುವಜನೋತ್ಸವ ನಡೆಯಲಿದೆ. ಅಂದು ಬಲ್ಮಠದಿಂದ ಪುರಭವನದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಸುಮಾರು 400ರಷ್ಟು ಕಲಾವಿದರಿಂದ ವಿವಿಧ ಕಲಾಪ್ರಕಾರಗಳು ಪ್ರದರ್ಶನಗೊಳ್ಳಲಿದೆ. ಸಿದ್ದಿ, ಕುಡ್ಮಿ, ಖಾವಿ, ಹುಲುಸ್ವಾರ, ಮೇಸ್ತ, ದಾಲ್ದಿ ಕುಂಬಾರ ಜಾನಪದ ಪ್ರಕಾರಗಳು ಅನಾವರಣಗೊಳ್ಳಿದೆ.

ಫೆ.12ರಂದು ಸಮಸ್ತ ಕೊಂಕಣಿಗರ ಉತ್ಸವ ನಡೆಯಲಿದೆ. ಜೊತೆಗೆ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕೃತರಿಗೆ ಬಹುಮಾನ ನೀಡಲಾಗುವುದು. ಕೊಂಕಣಿ ಸಂಘ-ಸಂಸ್ಥೆಗಳಿಂದ ಆಕರ್ಷಕ ನೃತ್ಯಗಳ ಪ್ರದರ್ಶನ, ಜಾನಪದ ಕಲೆಗಳ ಪ್ರದರ್ಶನ, ಕವಿಗೋಷ್ಠಿ, ಕಾವ್ಯಕುಂಚ, ಜಾದೂ, ನಾಟಕ, ಸಮೂಹಗಾನ, ಹಾಸ್ಯ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ಸಾಧಕರಿಗೆ ಸನ್ಮಾನ ನಡೆಯಲಿದೆ. ಗೌರವ ಪ್ರಶಸ್ತಿ ಕಾರ್ಯಕ್ರಮದ ಅಂಗವಾಗಿ ಪ್ರಶಸ್ತಿ ವಿಜೇತರೊಂದಿಗೆ ಸಂವಾದ ನಡೆಯಲಿದೆ. ಅಲ್ಲದೆ 9 ಕೊಂಕಣಿ ಕೃತಿಗಳನ್ನು ಅನಾವರಣಗೊಳಿಸಲಾಗುವುದು ಎಂದವರು ತಿಳಿಸಿದರು.

ಅಕಾಡಮಿಯ ರಿಜಿಸ್ಟ್ರಾರ್ ಡಾ.ಬಿ.ದೇವದಾಸ ಪೈ, ಕೊಂಕಣಿ ಲೋಕೋತ್ಸವ ಸ್ವಾಗತ ಸಮಿತಿಯ ಸಂಚಾಲಕ ಬಸ್ತಿ ವಾಮನ ಶೆಣೈ, ಊಟೋಪಚಾರ ಸಮಿತಿಯ ಸಂಚಾಲಕ ಗೀತಾ ಕಿಣಿ, ದಾಖಲಾತಿ ಸಮಿತಿಯ ಸಂಚಾಲಕ ವಿಕ್ಟರ್ ಮಥಾಯಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.