ಕರಾವಳಿ

ಆನ್ ಲೈನ್ ಮೂಲಕ ಹೊಸ ಎಪಿಎಲ್ ಕಾರ್ಡ್ : ಸಲ್ಲಿಕೆ ವಿಧಾನ

Pinterest LinkedIn Tumblr

ಮಂಗಳೂರು,ಜನವರಿ.11: ಪಡಿತರ ಚೀಟಿ ಹೊಂದಿಲ್ಲದ ಬಡತನ ರೇಖೆಗಿಂತ ಮೇಲಿನ ಕುಟುಂಬದವರಿಗೆ ಆನ್ ಲೈನ್ ಮೂಲಕ ಹೊಸ ಎಪಿಎಲ್ ಪಡಿತರ ಚೀಟಿ ಪಡೆದುಕೊಳ್ಳಲು ಸರಕಾರ ಅವಕಾಶ ಕಲ್ಪಿಸಿದೆ.

ಮನೆಯಲ್ಲಿ ಕಂಪ್ಯೂಟರ್ ವ್ಯವಸ್ಥೆ ಇರುವವರು ಮನೆಯಿಂದಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಸುಲಭವಾಗಿ ಪಡಿತರ ಚೀಟಿ ಮುದ್ರಿಸಿ ಪಡೆಯಬಹುದಾಗಿದೆ. ಕಂಪ್ಯೂಟರ್ ಇಲ್ಲದವರು ತಮ್ಮ ಸಮೀಪದ ಸೈಬರ್ ಕೇಂದ್ರದಲ್ಲಿ ಆನ್ ಲೈನ್ ಅರ್ಜಿ ದಾಖಲಿಸಿ ಪಡಿತರ ಚೀಟಿ ಪಡೆದುಕೊಳ್ಳ ಬಹುದಾಗಿದೆ.

ಹೊಸ ಪಡಿತರ ಚೀಟಿ ಪಡೆಯಲಿಚ್ಛಿಸುವವರು ಆಹಾರ ಇಲಾಖೆ ವೆಬ್ ಸೈಟ್ htpp://ahara.kar.nic.in ಗೆ ಲಾಗಿನ್ ಆಗಿ e-servises menu ಆಯ್ಕೆ ಮಾಡಬೇಕು. ಆಗ e-Ration Sub menu ಆಯ್ಕೆ ಮಾಡಬೇಕು. ಆಗ e-Ration Sub menu ನಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಮತ್ತು ಹೊಸ ಪಡಿತರ ಚೀಟಿ ಮುದ್ರಣ ಎಂಬುದನ್ನು ಕಾಣಬಹುದು. ಸೈಟ್ ತೆರೆದ ನಂತರ ಅರ್ಜಿದಾರರು ಕನ್ನಡ ಅಥವಾ ಇಂಗ್ಲಿಷ್ ಭಾಷೆ ಆಯ್ಕೆ ಮಾಡಿಕೊಳ್ಳಬೇಕು.

ನಂತರ ಅರ್ಜಿದಾರರು ಹೊಸ ರೇಶನ್ ಕಾರ್ಡು ಪಡೆಯುವ ಬಗ್ಗೆ “ New Ration Card request “ ನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ಸಂಖ್ಯೆಯನ್ನು ದಾಖಲಿಸಬೇಕು. ಅರ್ಜಿದಾರರು ಆಧಾರ್ ಸಂಖ್ಯೆಗೆ ದಾಖಲಿಸಿದ ಮೊಬೈಲ್ ನಂಬರಿಗೆ One Time Password (OTP) ಆಯ್ಕೆ ಮಾಡಿದರೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆದ ಮೊಬೈಲ್ ನಂಬರಿಗೆ ಸಂದೇಶ ಕಳುಹಿಸಲಾಗುತ್ತದೆ. ನಂತರ ಅರ್ಜಿದಾರರು OTP Password ನ್ನು ದಾಖಲಿಸಿದಾಗ ಅದು ಪರಿಶೀಲನೆ ಆಗುತ್ತದೆ. OTP ಯಶಸ್ವಿಯಾಗಿ ಪರಿಶೀಲನೆ ಆದ ನಂತರ ಆಧಾರ್ ವಿವರ ಪ್ರದರ್ಶಿಸಲ್ಪಡುತ್ತದೆ.

ನಂತರ ಅರ್ಜಿದಾರರು ಬೆರಳಚ್ಚು ಪರಿಶೀಲನೆ ನಮೂನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅರ್ಜಿದಾರರು ಬೆರಳಚ್ಚು ನಮೂನೆ ಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಬಳಿಕ ಅರ್ಜಿದಾರರು ಆಯ್ಕೆ ಮಾಡಿರುವುದಕ್ಕೆ ಅನುಗುಣವಾಗಿ ಒಂದು ಅಥವಾ ಎರಡು ಬೆರಳಚ್ಚು ನೀಡಿದಾಗ ಅದು ಈಗಾಗಲೇ ಆಧಾರ್ ಗೆ ನೀಡಿದ ಬೆರಳಚ್ಚಿನೊಂದಿಗೆ ಪರಿಶೀಲಿಸಲ್ಪಟ್ಟ ನಂತರ ಅರ್ಜಿದಾರರು ದಾಖಲಿಸಿದ ಆಧಾರ್ ವಿವರ ಗೋಚರಿಸುತ್ತದೆ.

ಅರ್ಜಿದಾರರು ಆಧಾರ್ ಸಂಖ್ಯೆ ಸರಿ ಇರುವುದನ್ನು ಖಾತ್ರಿ ಪಡಿಸಿಕೊಂಡು’ ADD “ ಎಂಬಲ್ಲಿ ಕ್ಲಿಕ್ ಮಾಡಿದಾಗ ಅರ್ಜಿ ಸ್ವೀಕೃತವಾಗಿ ಅರ್ಜಿ ಸಂಖ್ಯೆ ಮುದ್ರಿತವಾಗುತ್ತದೆ. ಒಂದೊಮ್ಮೆ ದಾಖಲಿಸಿದ ಆಧಾರ್ ಸಂಖ್ಯೆ ಬೇರೆ ಕಾರ್ಡಿಗೆ ಜೋಡಣೆ ಆಗಿದ್ದರೆ ಅರ್ಜಿದಾರರು ಈಗಾಗಲೇ ಜೋಡಣೆ ಆದ ಕಾರ್ಡಿನಿಂದ ಹೆಸರು ತೆಗೆಯಬೇಕು.

ಈಗಾಗಲೇ ಕಾರ್ಡು ಹೊಂದಿದ್ದರೆ/ ಬೇರೆ ಕಾರ್ಡಿನಲ್ಲಿ ಸದಸ್ಯರಾಗಿದ್ದರೆ ಅದನ್ನು ಕಳಚದೇ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಒಂದು ವೇಳೆ ಕಾರ್ಡಿನಿಂದ ಕಳಚಿದ ಸದಸ್ಯರು ಕುಟಂಬದ ಮುಖ್ಯಸ್ಥರಾಗಿದ್ದಲ್ಲಿ ಸಂಬಂಧಿಸಿದ ಕಾರ್ಡಿನಲ್ಲಿ ಉಳಿಕೆ ಆಗಿರುವವರ ಪೈಕಿ ಹಿರಿಯ ಮಹಿಳಾ ಸದಸ್ಯರನ್ನು ಮುಖ್ಯಸ್ಥರನ್ನಾಗಿ ಮಾಡತಕ್ಕದ್ದು. ಮತ್ತು ಕುಟುಂಬದ ಮುಖ್ಯಸ್ಥರೊಡನೆ ಸದಸ್ಯರಿಗಿರುವ ಸಂಬಂಧವನ್ನು ಸರಿಪಡಿಸಿದ ನಂತರ ಅರ್ಜಿ ಸಂಖ್ಯೆ ಜನರೇಟ್ ಆಗುತ್ತದೆ. ಅರ್ಜಿ ಸಂಖ್ಯೆಯನ್ನು ಬಳಸಿ ದೃಢೀಕರಣ ನೀಡಿದಾಗ ಅರ್ಜಿ ಸಿದ್ಧವಾಗುತ್ತದೆ.

ಸದಸ್ಯರ ಹೆಸರನ್ನು ಕಳಚಲು “ Delete / Add again “ ಗುಂಡಿಯ ಮೇಲೆ ಕ್ಲಿಕ್ ಮಾಡಿ ಹೊಸ ಅರ್ಜಿಗೆ ಸದಸ್ಯರ ಹೆಸರು ಸೇರಿಸಬಹುದು. ಹೊಸ ಕಾರ್ಡು ಅರ್ಜಿಗೆ ಸೇರಿಸಬೇಕಾದ ಎಲ್ಲಾ ಸದಸ್ಯರ ಹೆಸರು ಸೇರಿಸಿದ ನಂತರ “ Next Stage “ ಗುಂಡಿಯ ಮೇಲೆ ಕ್ಲಿಕ್ ಮಾಡಿದಾಗ ಕಾಣುವ ಸ್ಕ್ರೀನ್ ನಲ್ಲಿ ವಿಳಾಸ ಮತ್ತು ಮೊಬೈಲ್ ನಂಬ್ರ ನಮೂದಿಸುವುದು. ನಂತರ ಮುಂದಿನ ಹಂತಕ್ಕೆ ಹೋಗಲು “ Next Stage” Button ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಸ್ಕ್ರೀನ್ ನಲ್ಲಿ ಜಿಲ್ಲೆ ಮತ್ತು ತಾಲ್ಲೂಕು ಆಯ್ಕೆ ಮಾಡಬೇಕು. ಮುಂದಿನ ಹಂತದಲ್ಲಿ ಅರ್ಜಿದಾರರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

ನ್ಯಾಯಬೆಲೆ ಅಂಗಡಿ ಆಯ್ಕೆ ಮಾಡಿದ ನಂತರ ನಗರ/ಪಟ್ಟಣ ಪ್ರದೇಶದವರಾಗಿದ್ದಲ್ಲಿ ವಾರ್ಡ್ ಸಂಖ್ಯೆ, ಗ್ರಾಮಾಂತರದವರಾಗಿದ್ದಲ್ಲಿ ಗ್ರಾಮ ಪಂಚಾಯ್ತಿನ ಹೆಸರು ಆಯ್ಕೆ ಮಾಡಿಕೊಂಡು ಮುಂದಿನ ಹಂತಕ್ಕೆ ಹೋಗಬೇಕು. ಮತ್ತು ಕುಟುಂಬದ ಮುಖ್ಯಸ್ಥರನ್ನು ಆಯ್ಕೆ ಮಾಡಬೇಕು. 18 ವರ್ಷಕ್ಕಿಂತ ಮೇಲಿನ ಮಹಿಳಾ ಸದಸ್ಯರಿದ್ದಲ್ಲಿ ಅತ್ಯಂತ ಹಿರಿಯ ಮಹಿಳಾ ಸದಸ್ಯರನ್ನು ಕಾರ್ಡಿನ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಬೇಕು.

ಮುಂದಿನ ಹಂತದಲ್ಲಿ ಕುಟುಂಬದ ಮುಖ್ಯಸ್ಥರೊಂದಿಗೆ ಇತರ ಸದಸ್ಯರಿಗಿರುವ ಸಂಬಂಧ ದಾಖಲಿಸಲು ಸದಸ್ಯರ ಎದುರು ಇರುವ ಬಟನ್ ಕ್ಲಿಕ್ ಮಾಡಬೇಕು. ನಂತರ ಅರ್ಜಿದಾರರು ಪಡಿತರ ಅಕ್ಕಿ, ಗೋಧಿ ಪಡೆದುಕೊಳ್ಳಲು ಇಚ್ಛಿಸಿದಲ್ಲಿ ಈ ಬಗ್ಗೆ ನಮೂದಿಸಬೇಕು. ನಂತರ ಪಡಿತರ ಚೀಟಿ ಸಿದ್ಧಗೊಂಡು ಸ್ಕ್ರೀನ್ ನಲ್ಲಿ ಗೋಚರವಾಗುತ್ತದೆ.ಅದನ್ನು ಪರಿಶೀಲಿಸಿ ಸರಿ ಇರುವುದನ್ನು ಖಾತ್ರಿ ಪಡಿಸಿಕೊಂಡು “ Generata R.C.’ ಎಂಬಲ್ಲಿ ಕ್ಲಿಕ್ ಮಾಡಬೇಕು.

ಒಂದೊಮ್ಮೆ ಅರ್ಜಿದಾರರು ಪಡಿತರ ಚೀಟಿಯ ಪರಿಶೀಲನಾ ಪ್ರತಿ (verified copy) ಇಚ್ಛಿಸಿದಲ್ಲಿ ಇಲಾಖೆಯಿಂದ ನೀಡಿದ ನಮೂನೆಯಲ್ಲಿ ಮುದ್ರಿಸಿ ಅರ್ಜಿದಾರರು ದಾಖಲಿಸಿದ ವಿಳಾಸಕ್ಕೆ 15 ದಿವಸಗಳ ಒಳಗೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗುವುದು. ಅರ್ಜಿದಾರರು ಪೋಸ್ಟ್ ಮ್ಯಾನ್ ಗೆ ರೂ. 100 ಶುಲ್ಕ ನೀಡಿ ಪಡಿತರ ಚೀಟಿಯನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.