ಮಂಗಳೂರು, ಡಿಸೆಂಬರ್, 20 : ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ದಕ್ಷಿಣ ಕನ್ನಡ, ಉಡುಪಿಯ ವಿವಿಧ ಮುಸ್ಲಿಂ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಮಂಗಳೂರಿನ ಪುರಭವನದಲ್ಲಿ ಬೃಹತ್ ಶರಿಯತ್ ಸಂರಕ್ಷಣಾ ಮಹಿಳಾ ಸಮಾವೇಶ ನಡೆಯಿತು.
ಈ ಸಂದರ್ಭ ‘ಭಾರತದಲ್ಲಿ ಮುಸ್ಲಿಂ ಮಹಿಳೆಯರ ಸ್ಥಿತಿಗತಿ’ ಎಂಬ ವಿಷಯದ ಬಗ್ಗೆ ಮಾತನಾಡಿದ ಯುನಿವೆಫ್ ವುಮೆನ್ ವಿಂಗ್ ನ ಯು.ಸುನೈನಾ ಆಸೀಫ್ ಅವರು, ಶರೀಅತ್ ಕಾನೂನು ನಿನ್ನೆ ಮೊನ್ನೆ ಬಂದ ಕಾನೂನಲ್ಲ. ಇದಕ್ಕೆ ಹಲವಾರು ದಶಕಗಳ ಇತಿಹಾಸವಿದೆ. ಇಸ್ಲಾಂ ನಮ್ಮ ಧರ್ಮ. ಅದನ್ನು ತಿದ್ದುಪಡಿ ಮಾಡುವ ಅಧಿಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಗಿಲ್ಲ ಎಂದು ಹೇಳಿದರು.
‘ತಲಾಖ್ ಕಾನೂನು’ ವಿಷಯದಲ್ಲಿ ಸಲಫಿ ಗರ್ಲ್ಸ್ ಆಂಡ್ ವುಮೆನ್ಸ್ ಮೂವ್ ಮೆಂಟ್ ನ ಮುಮ್ತಾಜ್ ಬಿಂತ್ ಶಂಸುದ್ದೀನ್ ವಿಚಾರ ಮಂಡಿಸಿದರು.’ತಲಾಖ್ ಇನ್ ಇಸ್ಲಾಂ ‘ ಎಂಬ ವಿಷಯದಲ್ಲಿ ಎಚ್ ಐಎಫ್ ವುಮೆನ್ ವಿಂಗ್ ನ ರೈಹಾನ ಬಿಂತ್ ಹಕೀಂ ವಿಚಾರ ಮಂಡಿಸಿದರು.
‘ದಿ ಸೆಕ್ಯುಲರ್ ಇಂಡಿಯಾ ಆಂಡ್ ವುಮೆನ್ ‘ಎಂಬ ವಿಷಯದಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್ ನ ಶಾಹೀದಾ ಅಸ್ಲಾಂ ಹಾಗೂ ಹಿದಾಯ ಅರೇಬಿಕ್ ಟೀಚರ್ಸ್ ಟ್ರೈನಿಂಗ್ ಸೆಂಟರ್ ನ ಶಹನಾಝ್ ಅಹ್ಮದ್ ‘ಸ್ಟೇಟಸ್ ಆಫ್ ವುಮೆನ್ ಇನ್ ಇಸ್ಲಾಂ’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು.
ಏಕರೂಪ ನಾಗರಿಕ ಸಂಹಿತೆ’ ವಿಷಯದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ವುಮೆನ್ಸ್ ವಿಂಗ್ ನ ಸಬೀಹಾ ಫಾತಿಮಾ, ‘ಇಸ್ಲಾಂನಲ್ಲಿ ಕೌಟುಂಬಿಕ ಜೀವನ’ ಎಂಬ ವಿಷಯದಲ್ಲಿ ಮರಿಯಂ ಶಫೀನಾ, ‘ಇಸ್ಲಾಂ ಮತ್ತೆ ಮಹಿಳೆ’ ವಿಷಯದಲ್ಲಿ ಅಲ್ ಹಕ್ ಫೌಂಡೇಶನ್ ನ ವುಮೆನ್ಸ್ ವಿಂಗ್ ನ ಮಸೀರಾ ಅಬ್ದುಲ್ ಲತೀಫ್ ಭಾಷಣ ಮಾಡಿದರು.
ಝೊಹರಾ ಅಬ್ಬಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಸ್ರೀಯಾ ಬೆಳ್ಳಾರೆ, ಹಫೀಜಾ ಪ್ರಾಸ್ತಾವಿಕ ಮಾತನ್ನಾಡಿದರು. ಹುದಾ ಅಬ್ದುಲ್ ರಹ್ಮಾನ್ ಕಿರಾಅತ್ ಪಠಿಸಿದರು. ಮುಮ್ತಾಜ್ ಉಳ್ಳಾಲ ಧನ್ಯವಾದ ಸಲ್ಲಿಸಿದರು. ಸಮಾವೇಶದಲ್ಲಿ ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರು.
ಕಳೆದ ತಿಂಗಳಲ್ಲಿ ಮುಸ್ಲಿಮ್ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆ ಹಾಗೂ ಉಭಯ ಜಿಲ್ಲೆಯ ವಿವಿಧ ಮುಸ್ಲಿಂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಬೃಹತ್ ಶರಿಯತ್ ಸಂರಕ್ಷಣಾ ಸಮಾವೇಶ ನಡೆದಿತ್ತು. ಈ ವೇಳೆ ಏಕರೂಪ ನಾಗರಿಕ ಸಂಹಿತೆ ವಿರುದ್ಧ ದೇಶದಾದ್ಯಂತ ಇರುವ ಎಲ್ಲ ಮುಸ್ಲಿಂ ಸಂಘಟನೆಗಳು ಒಗ್ಗಟ್ಟಿನ ಹೋರಾಟ ನಡೆಸಲು ಸಮಾವೇಶದ ಮೂಲಕ ಕರೆ ನೀಡಲಾಗಿತ್ತು.
Comments are closed.