ಮಂಗಳೂರು, ನ.30: ನವೆಂಬರ್ 10 ಟಿಪ್ಪು ಜಯಂತಿಯ ದಿನದಂದು ಮೈಸೂರು ಜೈಲಿನಲ್ಲಿ ಹತ್ಯೆಯಾದ ವಿಚಾರಣಾಧೀನ ಕೈದಿ ಕಾವೂರಿನ ಮುಸ್ತಫಾನ ಹತ್ಯೆಯ ಹಿಂದಿರುವ ವ್ಯವಸ್ಥಿತ ಸಂಚಿನ ಬಗ್ಗೆ ನ್ಯಾಯಾಂಗ ತನಿಖೆಗೊಳಪಡಿಸಬೇಕು ಹಾಗೂ ಮುಸ್ತಫಾ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ದ ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ವಿಚಾರಣಾಧೀನ ಕೈದಿ ಮುಸ್ತಫಾನನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ. ಇದರ ಹಿಂದಿನ ನಿಗೂಢತೆಯನ್ನು ಹೊರಗೆಡಹಲು ಸಂಘಪರಿವಾರದ ಮುಖಂಡರನ್ನು ವಿಚಾರಣೆಗೊಳಪಡಿಸಬೇಕು ಎಂದು ಹೇಳಿದರು.
ಮುಸ್ಲಿಮರನ್ನು ಧಮನಿಸಲು ಪ್ರಯತ್ನಿಸುತ್ತಿರುವ ಆರೆಸ್ಸೆಸ್ ಜೊತೆಗೆ ಇಲ್ಲಿನ ಪೊಲೀಸ್ ಅಧಿಕಾರಿಗಳೂ ಸೇರಿಕೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿರುವ ಬಹುತೇಕ ಪೇದೆಗಳು ಬಜರಂಗದಳದ ಕಾರ್ಯಕರ್ತರಾಗಿದ್ದಾರೆ. ದ.ಕ.ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕಾದರೆ ನೀವು ಹಾಕಿಕೊಂಡಿರುವ ಕಾಕಿ ಬಟ್ಟೆಯ ಕಾನೂನಿಗೆ ಅನುಸಾರವಾಗಿ ನೀವು ನಡೆದುಕೊಳ್ಳಬೇಕಿದೆ. ಪೊಲೀಸರು ಕಾನೂನನ್ನು ಸರಿಯಾಗಿ ನಿಭಾಯಿಸಿದರೆ ದ.ಕ.ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಸಾಧಿಸಲು ಖಂಡಿತವಾಗಿಯೂ ಸಾಧ್ಯವಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಯುವಕರನ್ನು ಪೊಲೀಸರು ರೌಡಿ ಶೀಟರ್ ಎಂದು ಗುರುತಿಸುತ್ತಾರೆ. ಮುಸ್ಲಿಮರ ಭಾಷಣಗಳ ಬಗ್ಗೆ ಯಾವುದೇ ಆಧಾರವಿಲ್ಲದಿದ್ದರೂ ಅವರನ್ನು ಬಂಧಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತಿದ್ದಾರೆ. ಆದರೆ ಕೆಲವು ಹಿಂದೂ ಮುಖಂಡರು ಯಾವ ರೀತಿ ಭಾಷಣ ಮಾಡಿದರೂ ಅವರನ್ನು ಬಂಧಿಸುವುದಿಲ್ಲ ಎಂದು ಆರೋಪಿಸಿದ ಇಲ್ಯಾಸ್ ಮುಹಮ್ಮದ್ ಕೆಲವು ಸಂಘ ಪರಿವಾರದ ಮುಖಂಡರನ್ನು ಬಾಯಿ ಬಿಡಿಸಿದರೆ ಮುಸ್ತಫಾ ಹತ್ಯೆಯ ಬಗ್ಗೆ ಎಲ್ಲಾ ಮಾಹಿತಿಗಳು ಹೊರಬರಲಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪಿಎಫ್ಐ ದ.ಕ.ಜಿಲ್ಲಾಧ್ಯಕ್ಷ ಹನೀಫ್ ಕಾಟಿಪಳ್ಳ, ಪಿಎಫ್ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಪಿಎಫ್ಐ ಮೈಸೂರು ಜಿಲ್ಲಾಧ್ಯಕ್ಷ ಫಾರೂಕ್ ಮೈಸೂರು, ಮುಸ್ತಫಾನ ಸಹೋದರ ತ್ವಾಹಾ ಇಬ್ರಾಹೀಂ, ಸಂಬಂಧಿ ಇರ್ಫಾನ್ ಮುಂತಾದವರು ಪಾಲ್ಗೊಂಡಿದ್ದರು.
Comments are closed.