ಮಂಗಳೂರು, ನ.29: ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇಂದು ಪಾಲಿಕೆಯ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕೆಲವು ಮನಪಾ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯುತ್ತಿರುವ ಎಲ್ಲಾ ಜುಗಾರಿ ಕ್ಲಬ್,ಸ್ಕಿಲ್ ಗೇಮ್ ಹಾಗೂ ಮಸಾಜ್ ಕೇಂದ್ರಗಳನ್ನು ಬಂದ್ ಮಾಡಿ ಪೊಲೀಸರಿಗೆ ಮಾಹಿತಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ರಿಕ್ರಿಯೇಶನ್ ಕ್ಲಬ್ ಹೆಸರಿನಲ್ಲಿ ಜುಗಾರಿ ಕ್ಲಬ್, ಸ್ಕಿಲ್ ಗೇಮ್ ಹಾಗೂ ಮಸಾಜ್ ಕೇಂದ್ರಗಳು ಅವ್ಯಾಹತವಾಗಿ ತಲೆ ಎತ್ತಿರುವ ಬಗ್ಗೆ ಈ ಹಿಂದೆ ಹಲವು ಸಭೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಯಾವ ಕ್ರಮಗಳಾಗಿವೆ ಎಂದು ಸದಸ್ಯರಾದ ದಯಾನಂದ ಶೆಟ್ಟಿ, ನವೀನ್ ಡಿಸೋಜ ಮೊದಲಾದವರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್, ಮನಪಾದಿಂದ ಒಳಾಂಗಣ ಕ್ರೀಡೆಗಳಾದ ಕೇರಂ, ಚೆಸ್ ಮೊದಲಾದ ಆಟಗಳಿಗೆ ಮಾತ್ರವೇ ಪರವಾನಿಗೆ ನೀಡಲಾಗುತ್ತಿದೆ. ಉಳಿದಂತೆ ಧರ್ಮಸ್ಥಳ ಆಯುರ್ವೇದಿಕ್ ಆಯುರ್ವೇದಿಕ್ ಸೆಂಟರ್ ಹೊರತು ಪಡಿಸಿ ಯಾವುದೇ ಮಸಾಜ್ ಪಾರ್ಲರ್ಗಳಿಗೆ ಮನಪಾದಿಂದ ಪರವಾನಿಗೆ ನೀಡಲಾಗಿಲ್ಲ. ಇಂತಹ ಪಾರ್ಲರ್ಗಳು ನಗರದಲ್ಲಿ ಕಾರ್ಯಾಚರಿಸುತ್ತಿದ್ದು, ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದಾಳಿಯನ್ನೂ ನಡೆಸಲಾಗಿದೆ.
ಇತ್ತೀಚೆಗೆ ಗೃಹ ಸಚಿವರು ನಗರಕ್ಕೆ ಭೇಟಿ ನೀಡಿದ್ದ ವೇಳೆ ಅವರ ಗಮನಕ್ಕೆ ತರಲಾಗಿತ್ತು. ಅವರು ತಕ್ಷಣ ಪೊಲೀಸ್ ಆಯುಕ್ತರನ್ನು ಕರೆಯಿಸಿ ವರದಿ ನೀಡುವಂತೆ ತಿಳಿಸಿದ್ದರು. ಆ ಬಳಿಕ ಸಾಕಷ್ಟು ಮಸಾಜ್ ಪಾರ್ಲರ್ಗಳು ಹಾಗೂ ರಿಕ್ರಿಯೇಶನ್ ಕ್ಲಬ್ಗಳನ್ನು ಬಂದ್ ಮಾಡಿರುವ ಮಾಹಿತಿ ಲಭ್ಯವಾಗಿದೆ. ಪೊಲೀಸರು ಈ ಬಗ್ಗೆ ಕಾಳಜಿ ವಹಿಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸದ ಮನಪಾ ಸದಸ್ಯರಾದ ನವೀನ್ ಡಿಸೋಜ ಹಾಗೂ ವಿನಯರಾಜ್ ಅವರು ನಗರದಲ್ಲಿ ಯಾವುದೇ ಒಳಾಂಗಣ ಕ್ರೀಡೆಗಳಿಗೂ ಮನಪಾದಿಂದ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮೇಯರ್ ಹರಿನಾಥ್ ಅವರು, ನಗರದಲ್ಲಿ ನಡೆಯುತ್ತಿರುವ ಎಲ್ಲಾ ಜುಗಾರಿ ಕ್ಲಬ್, ಸ್ಕಿಲ್ಗೇಮ್ ಹಾಗೂ ಮಸಾಜ್ ಕೇಂದ್ರಗಳನ್ನು ಬಂದ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
Comments are closed.