ಮಂಗಳೂರು,ನ.15: ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಾರ್ಪೊರೇಶನ್ ಬ್ಯಾಂಕ್ ತನ್ನ 2016ನೆ ಆರ್ಥಿಕ ವರ್ಷದ ಎರಡನೆ ತ್ರೈಮಾಸಿಕ ಅವಧಿಯಲ್ಲಿ 206 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಜೈ ಕುಮಾರ್ ಗರ್ಗ್ ತಿಳಿಸಿದ್ದಾರೆ.
ಕಾರ್ಪೊರೇಶನ್ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬ್ಯಾಂಕ್ ಎರಡನೆ ತ್ರೈಮಾಸಿಕ ಅವಧಿಯಲ್ಲಿ 3,54,431 ಕೋಟಿ ರೂ. ಆರ್ಥಿಕ ವ್ಯವಹಾರ ನಡೆಸಿದೆ. 32,260 ಕೋಟಿ ರೂ. ಉಳಿತಾಯ ಖಾತೆಯ ಮೂಲಕ ಠೇವಣಿ ಸಂಗ್ರಹಿಸಲಾಗಿದೆ. 1,38,316 ಕೋಟಿ ರೂ. ಸಾಲ ನೀಡಲಾಗಿದೆ. ಬ್ಯಾಂಕಿನ ನಿರ್ವಹಣಾ ಲಾಭ ಗಳಿಕೆ 1,267 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕಿನ ಲಾಭ ಗಳಿಕೆ 36 ಕೋಟಿ ರೂ., ಆರ್ಥಿಕ ವ್ಯವಹಾರ 3,35,445 ಕೋಟಿ ರೂ., ನಿರ್ವಹಣಾ ಲಾಭಗಳಿಕೆ 797 ಕೋಟಿ ರೂ., ಠೇವಣಿ ಸಂಗ್ರಹ 1,98,502 ಕೋಟಿ ರೂ.ಗಳಾಗಿತ್ತು ಎಂದು ಜೈ ಕುಮಾರ್ ಗರ್ಗ್ ತಿಳಿಸಿದ್ದಾರೆ.
ಬ್ಯಾಂಕಿನ ಎನ್ಪಿಎ ಪ್ರಮಾಣ ಹಾಲಿ ಅವಧಿಯಲ್ಲಿ ಶೇ.6.19ಕ್ಕೆ ಇಳಿಕೆಯಾಗಿದೆ. ಆದ್ಯತಾ ವಲಯಕ್ಕೆ ಸಂಬಂಧಿಸಿದಂತೆ ಸಣ್ಣ ಮತ್ತು ಸಾಮಾನ್ಯ ವಿಭಾಗದ ರೈತರಿಗೆ 13,263 ಕೋಟಿ ರೂ. ಸಾಲ ವಿತರಿಸಲಾಗಿದೆ. ಬ್ಯಾಂಕ್ 3,131 ಎಟಿಎಂಗಳನ್ನು 1,06,240 ಪಿಒಎಸ್ ಮೆಶಿನ್ಗಳನ್ನು ಹೊಂದಿದೆ. ದುಬೈ ಹಾಗೂ ಹಾಂಕಾಂಗ್ನಲ್ಲಿ ಬ್ಯಾಂಕ್ ಎರಡು ಪ್ರಾತಿನಿಧಿಕ ಶಾಖೆಗಳನ್ನು ಹೊಂದಿದೆ ಎಂದು ಜೈ ಕುಮಾರ್ ಗರ್ಗ್ ತಿಳಿಸಿದ್ದಾರೆ.
1000, 500 ಕೋಟಿ ರೂ ಅಮಾನ್ಯ ಗೊಳಿಸಿರುವುದರಿಂದ ಬ್ಯಾಂಕಿಂಗ್ ವ್ಯವಹಾರ ಚುರುಕುಗೊಂಡಿದೆ. ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಗಳ ಮೂಲಕ ಹಣ ಜಮಾವಣೆಯಾಗುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಎಟಿಎಂಗಳು ಹಿಂದಿನಂತೆ ಸಹಜ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಲಿದೆ . ಕೆಲವು ಕಡೆ ಮೊಬೈಲ್ ಬ್ಯಾಂಕಿಂಗ್ ಸೇವೆ, ಮೈಕ್ರೋ ಎಟಿಎಂಗಳು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಮೂಲಕ ಅಲ್ಲಿನ ಗ್ರಾಹಕರಿಗೆ ಸಹಾಯವಾಗಬಹುದು ಎಂದು ಜೈ ಕುಮಾರ್ ಗಾರ್ಗ್ ತಿಳಿಸಿದ್ದಾರೆ.
ಮಂಗಳೂರಿನ ಪ್ರಧಾನ ಕಚೇರಿ ಬೆಂಗಳೂರಿಗೆ ವರ್ಗಾವಣೆ :
ಕಾರ್ಪೊರೇಶನ್ ಬ್ಯಾಂಕಿನ ಕೇಂದ್ರ ಕಚೇರಿ ಬೆಂಗಳೂರಿಗೆ ವರ್ಗಾವಣೆಯಾಗುತ್ತದೆಯೇ? ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಜೈ ಕುಮಾರ್ ಗರ್ಗ್ ”ಬೆಂಗಳೂರಿನಲ್ಲಿ ಬ್ಯಾಂಕಿನ ಮುಂದಿನ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಐ.ಟಿ.ವಿಭಾಗ, ತರಬೇತಿ ಹಾಗೂ ಕಚೇರಿಯ ವಿಭಾಗವನ್ನು ಆರಂಭಿಸಲು ಬಹಳ ಹಿಂದೆಯೇ ತೀರ್ಮಾನಿಸಲಾಗಿದೆ.
ಮಂಗಳೂರಿನಲ್ಲಿರುವ ವ್ಯವಸ್ಥೆ ಹಾಗೆಯೇ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಬ್ಯಾಂಕಿನ ವಿಸ್ತರಣಾ ಯೋಜನೆಯಿಂದ ಮಂಗಳೂರಿನ ಗ್ರಾಹಕರ ಸೇವೆಗೆ ಯಾವುದೇ ತೊಂದರೆಯಾಗುವುದಿಲ್ಲ ”ಎಂದು ಜೈ ಕುಮಾರ್ ಗರ್ಗ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಎಂ.ಭಗತ್, ಸುನಿಲ್ ಮೆಹ್ತಾ ಹಾಗೂ ಮಹಾಪ್ರಬಂಧಕ ಎಂ.ಬಿ.ಗಣೇಶ್ ಉಪಸ್ಥಿತರಿದ್ದರು.
Comments are closed.