ಮಂಗಳೂರು, ನ. 13: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕಮಿಗಳು ಇಬ್ಬರು ಯುವಕರಿಗೆ ಚೂರಿಯಿಂದ ಇರಿದ ಘಟನೆ ಶನಿವಾರ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜನಾಡಿಯ ಕಟ್ಟೆಮಾರು ಹಾಗೂ ಅನ್ಸಾರ್ ನಗರದ ಬಳಿ ನಡೆದಿದೆ.
ಮಂಜನಾಡಿ ಬಳಿಯ ನಿವಾಸಿ ಮಹಮ್ಮದ್ ಅವರ ಪುತ್ರ ನವಾಝ್ (25) ಹಾಗೂ ಅನ್ಸಾರ್ ನಗರದ ರಝಾಕ್ ಎಂಬವರ ಪುತ್ರ ಕಾಲೇಜು ವಿದ್ಯಾರ್ಥಿ ಶಮೀರ್(19) ಎಂಬವರು ಹಲ್ಲೆಗೊಳಗಾದ ಯುವಕರು.
ಬೈಕ್ನಲ್ಲಿ ಆಗಮಿಸಿದ ಇಬ್ಬರು ದುಷ್ಕಮಿಗಳು ಈ ಯುವಕರಿಬ್ಬರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇರಿತದಿಂದ ಒಬ್ಬಾತ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ
ನವಾಝ್ ಮಂಜನಾಡಿಯ ತನ್ನ ಮನೆಯ ಕಡೆಗೆ ಹೋಗುತ್ತಿದ್ದಾಗ ಬೈಕ್ನಲ್ಲಿ ಆಗಮಿಸಿದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಬಲವಾಗಿ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ರಸ್ತೆಗೆ ಕುಸಿದು ಬಿದ್ದ ನವಾಝ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ನವಾಝ್ ಹಾಸನದ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದು ರಜೆಯ ಮೇಲೆ ಇತ್ತೀಚೆಗಷ್ಟೇ ಮಂಜನಾಡಿಯ ತನ್ನ ಮನೆಗೆ ಮರಳಿದ್ದರೆಂದು ಹೇಳಲಾಗಿದೆ.
ಇದೇ ದುಷ್ಕರ್ಮಿಗಳು ಘಟನೆ ನಡೆದ ಸ್ಥಳದಿಂದ ಸುಮಾರು 1ಕಿ.ಮೀ. ದೂರದ ತೌಡುಗೋಳಿ ಕ್ರಾಸ್ ಸಮೀಪದ ಅನ್ಸಾರ್ ನಗರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿ ಶಮೀರ್ನ ಹೊಟ್ಟೆಯ ಭಾಗಕ್ಕೂ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡಿರುವ ಶಮೀರ್ ಚಿಂತಾಜನಕ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಹಾಗೂ ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
Comments are closed.