ಮಂಗಳೂರು ನವೆಂಬರ್.10: ಮೂಡಬಿದ್ರೆಯಲ್ಲಿ ಹಾಡುಹಗಲೇ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿಯನ್ನು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸಹಕೈದಿಯೊಬ್ಬ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮುಸ್ತಫಾ ಕಾವೂರು ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಹಲ್ಲೆಯಿಂದ ಮೃತಪಟ್ಟ ಕೈದಿಯನ್ನು ಮಂಗಳೂರಿನ ಕಾವೂರು ನಿವಾಸಿ ಮುಸ್ತಾಫ ಕಾವೂರು (29) ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದ ಕೈದಿಯನ್ನು ಮಂಗಳೂರಿನ ಕಿರಣ್ ಶೆಟ್ಟಿ ಎನ್ನಲಾಗಿದೆ.
ಮೂಡಬಿದ್ರೆಯ ಹೂವಿನ ವ್ಯಾಪಾರಿ, ಬಜರಂಗ ದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯನ್ನು ಕಳೆದ ವರ್ಷ ಆಕ್ಟೋಬರ್ ತಿಂಗಳಿನಲ್ಲಿ ಮೂಡಬಿದ್ರೆಯ ಪೇಟೆಯ ಬಳಿ ಹಾಡುಹಗಲೇ ಮುಸ್ತಾಫ ಕಾವೂರು ಸೇರಿದಂತೆ ಕೆಲವು ದುಷ್ಕರ್ಮಿಗಳು ಮಾರಾಕಸ್ತ್ರಗಳಿಂದ ಕಡಿದು ಹತ್ಯೆಗೈದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧನಕ್ಕೊಳಗಾಗಿ ಮೈಸೂರು ಜೈಲಿನಲ್ಲಿದ್ದ ಮುಸ್ತಾಫನ ಮೇಲೆ ಇದೀಗ ಸಹ ಕೈದಿಯಿಂದ ನಡೆದ ಹಲ್ಲೆಯಿಂದ ಮೃತ ಪಟ್ಟಿದ್ದಾನೆ. ಇಂದು ಬೆಳಿಗ್ಗೆ ಸಹಕೈದಿ ಕಿರಣ್ ಎಂಬಾತ ಮುಸ್ತಾಫನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದ. ಕೂಡಲೇ ಮುಸ್ತಾಫನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಹಲ್ಲೆಗೆ ನಿರ್ಧಿಷ್ಟ ಕಾರಣ ತಿಳಿದು ಬಂದಿಲ್ಲ. ಅದರೆ ಮುಸ್ತಾಫ ಮೇಲೆ ಕಿರಣ್ ಶೆಟ್ಟಿಗೆ ಇದ್ದ ಹಳೆ ದ್ವೇಷವೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.