ಉಡುಪಿ: ಉಡುಪಿಯನ್ನೇ ಬೆಚ್ಚಿಬೇಳಿಸಿದ್ದು ಮಾತ್ರವಲ್ಲದೇ ಇಡೀ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಉದ್ಯಮಿ ಭಾಸ್ಕರ್ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ತನಿಖೆಯನ್ನು ಮುಗಿಸಿರುವ ಸಿಐಡಿ ತಂಡ ಐವರು ಆರೋಪಿಗಳ ವಿರುದ್ದ ಉಡುಪಿಯ ಜಿಲ್ಲಾ ನ್ಯಾಯಾಲಯದಲ್ಲಿ 1300 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಅಲ್ಲದೇ ಎಲ್ಲರಲ್ಲೂ ಇದ್ದ ಕೊಲೆಯ ಸೀಕ್ರೇಟ್ ವಿಚಾರವೂ ಇಂದು ಬಹಿರಂಗಗೊಂಡಿದೆ.
ಯಾರ ವಿರುದ್ಧ ಚಾರ್ಜ್ ಶೀಟ್…
ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಹೋಮ ಕುಂಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 90 ದಿನಗಳ ತನಿಖೆಯನ್ನು ನಡೆಸಿರುವ ಸಿಐಡಿ ತಂಡ ತನ್ನ ಪ್ರಾಥಮಿಕ ಚಾರ್ಜ್ ಶೀಟನ್ನು ಉಡುಪಿಯ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ. 1300 ಪುಟಗಳು ಹಾಗೂ 4 ವಾಲ್ಯೂಮ್ ಇರುವ ಚಾರ್ಜ್ ಶೀಟ್ ನಲ್ಲಿ ಐವರು ಆರೋಪಿಗಳ ವಿರುದ್ದ ವಿವಿಧ ಪ್ರಕರಣ ದಾಖಲಿಸಲಾಗಿದೆ. ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವ್ರರಿ, ಮಗ ನವನೀತ್ ಶೆಟ್ಟಿ, ನಿರಂಜನ್ ಭಟ್ ಹಾಗೂ ಸಾಕ್ಷ್ಯ ನಾಶದ ಆರೋಪಿಗಳಾದ ಶ್ರೀನಿವಾಸ್ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿರುವ ಸಿಐಡಿ ತಂಡ ಹತ್ಯೆ ನಡೆದಿರುವ ಬಗ್ಗೆ ಸಮಗ್ರವಾಗಿ ಚಾರ್ಜ್ ಶೀಟ್ ಸಲ್ಲಿಸಿದೆ.
ಕೊಲೆ ಮಾಡಿದ್ದು ಹೀಗೆ….
ಜುಲೈ 28ರಂದು ಭಾಸ್ಕರ್ ಶೆಟ್ಟಿ ಹತ್ಯೆಯಾಗಿದ್ದು ಇಂದ್ರಾಳಿಯ ಮನೆಗೆ ಬಂದಿದ್ದ ಭಾಸ್ಕರ್ ಶೆಟ್ಟಿ ಸ್ನಾನ ಮುಗಿಸಿ ಬರುತ್ತಿದ್ದ ವೇಳೆ ಮಗ ನವನೀತ್ ಶೆಟ್ಟಿ ಪೆಪ್ಪರ್ ಸ್ಪ್ರೇ ಮಾಡಿ , ಕಬ್ಬಿಣದ ರಾಡ್ ನಿಂದ ಹೊಡೆದು ನೀರಿನ ಟಬ್ ನಲ್ಲಿ ಬಾಸ್ಕರ್ ಶೆಟ್ಟಿಯನ್ನು ಮುಳುಗಿಸಿ ಅಲ್ಲಿಯೂ ಭಾಸ್ಕರ್ ಶೆಟ್ಟಿ ಸಾಯದಿದ್ದಾಗ , ಕೀಟನಾಶಕ ಕುಡಿಸಿದ ಬಳಿಕ ನಿರಂಜನ್ ಭಟ್ ಮನೆಯಾಗಿರುವ ನಂದಳಿಕೆಗೆ ಕರೆದುಕೊಂಡು ಹೋಗಿ ಹೋಮಕುಂಡದಲ್ಲಿ ಸುಟ್ಟ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದ್ದು ಹತ್ಯೆಯ ಸಂದರ್ಬ ನಿರಂಜನ್ ಭಟ್ ಕೂಡಾ ಇಂದ್ರಾಳಿಯ ಮನೆಯಲ್ಲಿದ್ದರು ಎಂಬ ಅಂಶವು ಸಿಐಡಿ ತನಿಖೆಯಿಂದ ಬಯಲಾಗಿದೆ.
ಸಿಕ್ಕ ಮೂಳೆ ಭಾಸ್ಕರದ್ದು…..
ಸಿಐಡಿಯ ಸುಮಾರು 15 ಜನರ ತಂಡ ಕಳೆದ 90 ದಿನಗಳಿಂದ ತನಿಖೆಯನ್ನು ನಡೆಸುತ್ತಿದ್ದು ಹತ್ಯೆಯಾದ ಮನೆ, ಭಾಸ್ಕರ್ ಶೆಟ್ಟಿಯವರನ್ನು ಸುಟ್ಟು ಅವಶೇಷಗಳನ್ನು ಬಿಸಾಡಿರುವ ನದಿಗಳಲ್ಲಿ ಶೋಧ ಕಾರ್ಯವನ್ನು ನಡೆಸಲಾಗಿತ್ತು. ಸಿಕ್ಕಿರುವ ಅವಶೇಷಗಳ ಪೈಕಿ ಕೆಲವೊಂದು ಮೂಳೆ ಹಾಗೂ ಕಲ್ಲುಗಳನ್ನು ಶೇಖರಿಸಲಾಗಿದ್ದು ಅವನ್ನು ಡಿ.ಎನ್.ಎ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಈ ಪೈಕಿ ಮೂಳೆಯು ಭಾಸ್ಕರ್ ಶೆಟ್ಟಿಯದ್ದೇ ಎಂಬ ಡಿ.ಎನ್.ಎ ವರದಿ ಬಂದಿದೆ. ಇನ್ನು ಸೈಬರ್ ಫೋರೆನ್ಸಿಕ್ ವರದಿ ಬರಲಿದ್ದು ಅದರ ಬಳಿಕ ಸಂಪೂರ್ಣ ತನಿಖೆ ಮುಗಿಸಿ ಅಂತಿಮ ಚಾರ್ಚ್ ಶೀಟ್ ಸಿಐಡಿ ತಂಡ ಸಲ್ಲಿಸಲಿದೆ.
ಅಂಡರ್ ವರ್ಲ್ಡ್ ಲಿಂಕ್ ಇಲ್ಲ….
ತನಿಖೆಯಲ್ಲಿ ಸಿಐಡಿ ತಂಡ ಕಂಡು ಕೊಂಡ ಅಂಶ ಎಂದರೆ ಈ ಹತ್ಯೆಗೆ ಪ್ರಮುಖ ಕಾರಣ ಆಸ್ತಿ ಹಾಗೂ ಅನೈತಿಕ ಸಂಬಂಧ. ಅನೈತಿಕ ಸಂಬಂಧ ರಾಜೇಶ್ವರಿ ಹಾಗೂ ನಿರಂಜನ್ ಭಟ್ ನಡುವೆಯೋ ಅಥವಾ ಭಾಸ್ಕರ್ ಶೆಟ್ಟಿಯ ಅನೈತಿಕ ಸಂಬಂಧವೋ ಎನ್ನುವುದರ ಬಗ್ಗೆ ಸಿಐಡಿ ಎಸ್ಪಿ ತಿಳಿಸಲು ನಿರಾಕರಿಸಿದರು. ಅಲ್ಲದೇ ಈ ಹತ್ಯೆ ಪ್ರಕರಣಕ್ಕೂ ಅಂಡರ್ ವರ್ಲ್ಡ್ ಲಿಂಕ್ ಬಗ್ಗೆ ಇರುವ ಸಂಶಯವನ್ನು ಅಲ್ಲಗೆಳೆದ ಸಿಐಡಿ ತಂಡ. ಬಾಂಬೆ ವ್ಯಕ್ತಿಯನ್ನು ಸಾಕ್ಷಿಗಾಗಿ ಕರೆ ತಂದದ್ದು ಮಾತ್ರ ಆದ್ರೆ ಯಾವುದೆ ಲಿಂಕ್ ಇಲ್ಲ ಎಂದು ಸಿಐಡಿ ಎಸ್ಪಿ ಮಾರ್ಟೀನ್ ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ತಂಡ ತನ್ನ ಮೊದಲ ಹಂತದ ತನಿಖೆಯನ್ನು ಮುಗಿಸಿ ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ್ದು ಮುಂದೆ ಅಂತಿಮ ತನಿಖೆ ಯಾವಾಗ ಮುಗಿಯುತ್ತೇ, ಯಾವುದೆಲ್ಲಾ ಅಂಶಗಳು ಹೊರ ಬರಳಿದೆ ಎಂಬುದು ಕಾದುನೋಡಬೇಕಿದೆ.
Comments are closed.