ಕುಂದಾಪುರ: ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಕೋಟೇಶ್ವರ ವಲಯದ ವತಿಯಿಂದ 6ನೇ ವರ್ಷದ ಸಾಮೂಹಿಕ ಗೋ ಪೂಜಾ ಕಾರ್ಯಕ್ರಮವು ಕೋಟೆಶ್ವರದ ಸರಸ್ವತಿ ಕಲ್ಯಾಣಮಂದಿರದಲ್ಲಿ ಸೋಮವಾರ ನಡೆಯಿತು.
ಶ್ರೀ ಕ್ಷೇತ್ರ ಕೇಮಾರು ಸಾಂಧೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಗೋ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಗೋವಿನ ಕಿವಿಯಲ್ಲಿ ಹೇಳುವ ಮಾತುಗಳು ದೇವರಿಗೆ ಕೇಳಿ ಆ ಕಷ್ಟಗಳು ನಿವಾರಿಸುತ್ತಾನೆ ಎಂಬ ನಂಬಿಕೆಯಿದೆ. ಗೋ ಸೇವೆ ಮೂಲಕ ಯಾವುದೇ ದೋಷ ಹಾಗೂ ತೊಂದರೆಗಳ ನಿವಾರಣೆ ಸಾಧ್ಯ. ಹಿಂದಿನ ಕಾಲದಲ್ಲಿ ಗೋ ಸೇವೆಯ ಮೂಲಕವೇ ವಿದ್ಯೆ ಹಾಗೂ ಜ್ಞಾನ ಪ್ರಾಪ್ತಿಯಾಗುವ ಕಾರ್ಯವನ್ನು ಋಷಿ ಮುನಿಗಳು ಮಾಡುತ್ತಿದ್ದರು. ಪ್ರಕೃತಿಯೊಂದಿಗೆ ಸಹಜವಾಗಿ ಬದುಕುವ ಪ್ರಾಣಿಗಳು ಯಾವುದೇ ಸಮಸ್ಯೆ ಬಂದರೂ ಅದನ್ನು ತಾವೇ ಬಗೆಹರಿಸಿಕೊಳ್ಳುತ್ತದೆ. ಆದರೇ ಮನುಷ್ಯ ಮಾತ್ರ ನೈಜ್ಯತೆಯಿಂದ, ಸಹಜ ಧರ್ಮದಿಂದ ಬದುಕುತ್ತಿಲ್ಲ. ಹಿಂದೂ ಎಂದು ಮಾತನಾಡುವ ನಾವು ಮೊದಲು ಧಾರ್ಮಿಕತೆಯ ಬಗ್ಗೆ ತಿಳಿದಿರಬೇಕಿದೆ. ಮನೆಯಲ್ಲಿ ಹಿರಿಯರು ಮಕ್ಕಳನ್ನು ಉತ್ತಮವಾಗಿ ತಿದ್ದುವ ಮೂಲಕ ಮೂಲಕ ಅಂತರಂಗದಿಂದ ಗಟ್ಟಿಯಾಗುವಂತೆ ಬೆಳಸಬೇಕು. ನಾವುಗಳು ಭಗವಂತನ ಸ್ಮರಣೆ ಹಾಗೂ ಜಪ-ಉಪಾಸನೆಗಳ ಮೂಲಕ ಭಗವಂತನನ್ನು ಒಲಿಸಿಕೊಂಡು ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಮುಖರಾದ ಚೈತ್ರಾ ಕುಂದಾಪುರ ದಿಕ್ಸೂಚಿ ಭಾಷಣದಲ್ಲಿ, ಗೋವುಗಳು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೀವನ ಪರ್ಯಂತ ನಮಗೆ ಹಾಲುಣಿಸುವ ಗೋಮಾತೆಗೆ ಋಣಿಯಾಗಿ ಬದುಕಬೇಕಿದೆ. ಗೋ ಮಾತೆಯನ್ನು ರಕ್ಷಿಸಲು ಕಟಿಬದ್ದರಾದ ಸಂಘಟನೆಯವರ ಕಾರ್ಯ ಮಹತ್ತರವಾದುದು. ನಮ್ಮನ್ನು ಹೆತ್ತವರಿಗೂ ಹಾಲುಣಿಸಿದ ಗೋವನ್ನು ನಾವೆಂದಿಗೂ ಮಾತೆಯೆಂದೇ ಪೂಜಿಸುತ್ತೇವೆ. ಯಾವುದೇ ಧರ್ಮದಲ್ಲಿಯೂ ಗೋವಧೆ ಮಾಡುವುದು ಶಾಸ್ತ್ರ ಅಥವಾ ಧರ್ಮವೆಂದು ಹೇಳಿಲ್ಲ. ಗೋವಿನ ವಿಚಾರವನ್ನು ರಾಜಕೀಯವಾಗಿ ಉಪಯೋಗಿಸಿಕೊಂಡು, ಆಹಾರದ ಹಕ್ಕಿನ ಬಗ್ಗೆ ಮಾತನಾಡಲು ಕೆಲವರು ಆರಂಭಿಸಿದ್ದಾರೆ. ಎಲವೂ ಕೂಡ ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸ್ಥಾಪಿತ ಹಿತಾಸಕ್ತಿಗಳೇ ಮಾಡುತ್ತಿರುವ ಅಪಪ್ರಚಾರ ಎಂದರು. ರಾಮ-ಕೃಷ್ಣರು ಗೋ ಮಾಂಸ ತಿನ್ನುತ್ತಿದ್ದರೆಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ ಹೇಳಿಕೆ ಬಾಲಿಷವಾಗಿದ್ದು, ಯಾವ ವೇದದಲ್ಲಿ ಈ ಉಲ್ಲೇಖವಿದೆಯೆನ್ನುವ ಬಗ್ಗೆ ಸಚಿವರು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಗೋ ಪೂಜ ಕಾರ್ಯಕ್ರಮಕ್ಕೂ ಮೊದಲು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಸರಸ್ವತಿ ಕಲ್ಯಾಣ ಮಂದಿರದವರೆಗೂ ಶೋಭಾಯಾತ್ರೆ ನಡೆಯಿತು. ಕಾರ್ಯಕ್ರಮದಲ್ಲಿ ಕೋಟೇಶ್ವರ ವಲಯ ಬಜರಂಗದಳದ ನೂತನ ಸಂಚಾಲಕರಾಗಿ ಮರುತಿ ಅವರನ್ನು ವಿಶ್ವಹಿಂದೂ ಪರಿಷತ್ ಜಿಲ್ಲಧ್ಯಕ್ಷ ವಿಲಾಸ್ ನಾಯಕ್ ಘೋಷಿಸಿದರು.
ಲೆಕ್ಕಪರಿಶೋಧಕ ಹಾಗೂ ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಶಂಕರ್ ನಾಯಕ್ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಸಂಘಚಾಲಕ ಗುರು ಇಂಜಿನಿಯರ್, ಭಜರಂಗದಳ ವಿಭಾಗ ಸಹಸಂಚಾಲಕ ಸುನೀಲ್ ಕೆ.ಆರ್, ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿಶ್ವಹಿಂದೂ ಪರಿಷತ್ ಪ್ರಖಂಡ ಪ್ರಮುಖ್ ಪ್ರಭಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗೋಪೂಜೆ ಸಂದರ್ಭ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ ಇದ್ದರು.
ಸುರೇಂದ್ರ ಮಾರ್ಕೋಡು ಸ್ವಾಗತಿಸಿ, ಯೋಗೀಶ್ ತೆಂಕುಪೇಟೆ ಕಾರ್ಯಕ್ರಮ ನಿರೂಪಿಸಿ, ಶ್ರೀಕಾಂತ ಮಾರ್ಕೋಡು ವಂದಿಸಿದರು. ಪುನೀತ್ ಹೊದ್ರೋಳಿ ವೈಯಕ್ತಿಕಗೀತೆ, ಶಂಕರ ಅಂಕದಕಟ್ಟೆ ವಂದೇ ಮಾತರಂ ಗೀತೆ ಹಾಡಿದರು.
ಚಿತ್ರ, ವರದಿ- ಯೋಗೀಶ್ ಕುಂಭಾಸಿ
Comments are closed.