ಮಂಗಳೂರು, ಅ.30: ಟಿಪ್ಪು ಜಯಂತಿ ಆಚರಣೆಯು ಕಳೆದ ವರ್ಷದಂತೆ ಈ ವರ್ಷವೂ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿ ಹೇಳಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ ಸಂದರ್ಭ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದರು. ಟಿಪ್ಪು ಜಯಂತಿ ಆಚರಣೆ ಪೂರ್ವ ನಿಗದಿಯಂತೆ ನಡೆಯಲಿದೆ. ಈ ಸಂದರ್ಭ ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ಹಿಂಸಾಚಾರ ನಡೆಯದಂತೆ ವ್ಯಾಪಕ ಮುಂಜಾಗ್ರತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯು ಪಿಎಫ್ಐ ಕಾರ್ಯಕರ್ತರಿಂದಾದ ಕೃತ್ಯ ಎನ್ನುವುದು ಸಂಪೂರ್ಣವಾಗಿ ದೃಢಪಟ್ಟಿಲ್ಲ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಕರಾವಳಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ :
ಕರಾವಳಿಯ ಉಭಯ ಜಿಲ್ಲೆಗಳ ಮರಳು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸಲಾಗುವುದು. ಶೀಘ್ರವೇ ಕರಾವಳಿ ಜಿಲ್ಲೆಗಳ ಮರಳು ಪೂರೈಕೆ ಸಮಸ್ಯೆಯನ್ನು ಪರಿಹರಿಸಲಾಗುವುದು. ಕರಾವಳಿಗೆ ಪ್ರತ್ಯೇಕ ಮರಳುನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನ.3ರಂದು ಸಭೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ಸ್ಟೀಲ್ ಬ್ರಿಡ್ಜ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಗರ ವಿರುದ್ಧ ಹರಿಹಾಯ್ದ ಸಿಎಂ, ಬಿಜೆಪಿಗರಿಗೆ ಸುಳ್ಳು ಹೇಳುವುದೇ ಚಾಳಿ.ಇದು ಅವರ ಆಡಳಿತಾವಧಿಯಲ್ಲಿ ರೂಪುಗೊಂಡ ಯೋಜನೆ. ಸಾರ್ವಜನಿಕ ಅಭಿಪ್ರಾಯದ ಮೇರೆಗೆ ಈ ಯೋಜನೆ ರೂಪಿಸಲಾಗಿದೆ. ಪ್ರತಿಷ್ಠಿತ ಎಲ್ ಆಯಂಡ್ ಟಿ ಸಂಸ್ಥೆಗೆ ಟೆಂಡರ್ ನೀಡಿದ್ದೇವೆ. ಈಗ ಈ ಯೋಜನೆಯನ್ನು ಡಿ.ವಿ. ಸದಾನಂದಗೌಡ ವಿರೋಧಿಸುತ್ತಿದ್ದಾರೆ ಬಜೆಟ್ಟಿನಲ್ಲಿ ಘೋಷಣೆ ಮಾಡಿದ್ದಾಗ ಅವರು ಎಲ್ಲಿದ್ದರು?, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
Comments are closed.