ಮಂಗಳೂರು : ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಫಾ.ಮೈಕಲ್ ಸಾಂತುಮೆಯರ್ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿ ಮಹಮ್ಮದ್ ಶಾನವಾಜ್ ನನ್ನು ಇಂದು ಸಂಜೆ ಬಂದರು ಪೊಲೀಸರು ಬಂಧಿಸಿದ್ದಾರೆ.
ಮಿಲಾಗ್ರಿಸ್ ಕಾಲೇಜಿನ ಎಂಬಿಎ ವಿದ್ಯಾರ್ಥಿ ಅತ್ತಾವರ ನಿವಾಸಿ ಶಾಹನವಾಝ್ ಎಂಬಾತನ ಹಾಜರಾತಿ ಕೊರತೆ ಸಹಿತ ಹಲವು ಕಾರಣದಿಂದ ವಿ.ವಿ.ಯ ನಿಯಮದಂತೆ ಹಾಲ್ ಟಿಕೆಟ್ ನಿರಾಕರಣೆ ಮಾಡಲಾಗಿತ್ತು. ಪರೀಕ್ಷಾ ಹಾಲ್ ಟಿಕೆಟ್ ನೀಡದ ಕಾರಣ ಸಿಟ್ಟಿಗೆದ್ದ ಈತ ವಿದ್ಯಾರ್ಥಿಗಳ ಹಾಜರಾತಿ ಪುಸ್ತಕದ ಹಾಳೆ ಹರಿದು ಹಾಕಿ ಬಳಿಕ ತರಗತಿ ಮುಗಿಸಿ ಹೊರ ಬಂದ ಕಾಲೇಜಿನ ಪ್ರಾಂಶುಪಾಲ ಫಾ.ಮೈಕಲ್ ಸಾಂತುಮೆಯರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಗೀಡಾದ ಪ್ರಾಂಶುಪಾಲ ಫಾ.ಮೈಕಲ್ ಸಾಂತುಮೆಯರ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ನಡೆಸಿದ ವಿದ್ಯಾರ್ಥಿ ವಿರುದ್ಧ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಘಟನೆ ಬಳಿಕ ನಾಪತ್ತೆಯಾಗಿದ್ದ ಆರೋಪಿಯ ಪತ್ತೆಗಾಗಿ ಬಂದರು ಠಾಣಾ ಇನ್ಸ್ ಪೆಕ್ಟರ್ ಶಾಂತರಾಮ್ ಅವರ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಬಂದರು ಪೊಲೀಸರ ವಿಶೇಷ ಕಾರ್ಯಾಚರಣೆಯಿಂದ ತಲೆಮರೆಸಿಸಿಕೊಂಡಿದ್ದ ಆರೋಪಿ ಮಿಲಾಗ್ರಿಸ್ ಕಾಲೇಜಿನ ಎಂಬಿಎ ವಿದ್ಯಾರ್ಥಿ ಅತ್ತಾವರ ನಿವಾಸಿ ಶಾಹನವಾಝ್ ನನ್ನು ಪಂಪ್ ವೆಲ್ ಸಮೀಪ ಸೆರೆಸಿಕ್ಕಿದ್ದಾನೆ ಎನ್ನಲಾಗಿದೆ.
ಹಲ್ಲೆ ವಿರುದ್ಧ ವ್ಯಾಪಕ ಖಂಡನೆ ; ಪ್ರತಿಭಟನೆ :
ನಗರದ ಮಿಲಾಗ್ರಿಸ್ ಕಾಲೇಜಿನ ಕಾಲೇಜಿನ ಪ್ರಾಂಶುಪಾಲ ಫಾ.ಮೈಕಲ್ ಸಾಂತುಮೆಯರ್ ರವರಿಗೆ ಅದೇ ಕಾಲೇಜಿನ ವಿದ್ಯಾರ್ಥಿ ಶಾಹನವಾಝ್ ಎಂಬಾತ ನಡೆಸಿದ ಹಲ್ಲೆಯನ್ನು ಹಲವಾರು ಸಂಘಟನೆಗಳು ಖಂಡಿಸಿ, ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದವು.
ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲ ವಂ.ಮೈಕಲ್ ಸಾಂತುಮಾಯಾರ್ ಅವರ ಮೇಲೆ ವಿದ್ಯಾರ್ಥಿಯಿಂದ ನಡೆದ ಹಲ್ಲೆಯನ್ನು ಖಂಡಿಸಿ ಜಮಾಅತೆ ಇಸ್ಲಾಮಿ ಹಿಂದ್ ದ.ಕ.ಜಿಲ್ಲಾ ಸಮಿತಿ, ಕಥೋಲಿಕ್ ಸಭಾ ಬೆಳ್ತಂಗಡಿ ವಲಯ ಸಮಿತಿ, ಮಿಲಾಗ್ರೀಸ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದ್ದರು.
ಇಂದು ಸಂಜೆ ವಿದ್ಯಾರ್ಥಿಯ ಬಂಧನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ದ.ಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಯುವ ಕ್ರೈಸ್ತ ಮುಖಂಡ ಜಾಯಲಸ್, ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಯನ್ನು ಶೀಘ್ರ ಬಂಧಿಸಬೇಕು. ವಿದ್ಯಾರ್ಥಿಯನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಪೊಲೀಸರು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಸುನಿಲ್ ಕುಮಾರ್ ಬಜಾಲ್, ಡೆನಿಸ್ ಡಿಸಿಲ್ವ, ಅಶ್ವಿತ್ ಪಿರೇರ, ವಸಂತ ಆಚಾರಿ, ಬಾಲಕೃಷ್ಣ ಶೆಟ್ಟಿ, ಸಂತೋಷ್ ಬಜಾಲ್, ಫ್ರಾಂಕ್ಲಿನ್ ಮೊಂತೆರೋ, ಜಾಕ್ಸನ್ ಡಿಕೋಸ್ತ, ರಿನಾಲ್ಡ್ ಡಿಸೋಜ, ನಿತೀನ್ ಕುತ್ತಾರ್, ಯಾದವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕ್ಯಾಥೊಲಿಕ್ ಸಭಾದಿಂದ ಕಮಿಷನರ್ಗೆ ಮನವಿ :
ಮಂಗಳೂರು : ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಫಾ.ಮೈಕಲ್ ಸಾಂತುಮೆಯರ್ ರವರಿಗೆ ವಿದ್ಯಾರ್ಥಿ ಶಾಹನವಾಝ್ ಎಂಬಾತ ನಡೆಸಿದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಮಂಗಳೂರು ಕ್ಯಾಥೊಲಿಕ್ ಸಭಾದ ಮುಖಂಡರು ಆರೋಪಿಯ ಬಂಧನಕ್ಕೆ ಆಗ್ರಹಿಸಿ ಇಂದು ಮಂಗಳೂರು ಪೊಲೀಸ್ ಆಯುಕ್ತ ಡಾ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದ್ದರು.
ಮಂಗಳೂರು ಕ್ಯಾಥೊಲಿಕ್ ಸಭಾದ ಮುಖ್ಯಸ್ಥರಾದ ಡೆನಿಸ್ ಮೊರಾಸ್ ಪ್ರಭು ಅವರ ನೇತ್ರತ್ವದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಡಾ ಚಂದ್ರಶೇಖರ್ ಅವರ ಕಚೇರಿಗೆ ತೆರಳಿದ ನಿಯೋಗವು ದ.ಕ.ಜಿಲ್ಲಾ ಬಿಷಪ್ ವಂ| ರೆ| ಫಾ| ಡಾ| ಅಲೋಸಿಯೇಸ್ ಪೌಲ್ ಡಿ’ಸೋಜಾರವರ ಪರವಾಗಿ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿತ್ತು.
ಇದೀಗ ಆರೋಪಿ ವಿದ್ಯಾರ್ಥಿ ಮಹಮ್ಮದ್ ಶಾನವಾಜ್ ಬಂಧನದೊಂದಿಗೆ ಪ್ರಕರಣಕ್ಕೆ ಸ್ವಲ್ಪ ಮಟ್ಟಿನೆ ಬ್ರೇಕ್ ಸಿಕ್ಕಿದೆ.
Comments are closed.