ಮಂಗಳೂರು, ಅ.22 ನಗರದ ಹೊರ ವಲಯದ ದೇರಳಕಟ್ಟೆಯಲ್ಲಿ ಕಾರ್ಯ ನಿರ್ವಾಹಿಸುತ್ತಿರುವ ಯೆನೆಪೊಯ ವಿಶ್ವವಿದ್ಯಾನಿಲಯದ 6ನೆ ಘಟಿಕೋತ್ಸವ ಶನಿವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಭಾರತ ಸರಕಾರದ ಬಯೋ ಟೆಕ್ನಾಲಜಿ ವಿಭಾಗದ ಕಾರ್ಯದರ್ಶಿ ಡಾ.ಕೆ. ವಿಜಯ ರಾಘವನ್ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಗತಿಯ ಬೆಳವಣಿಗೆಯ ಈ ಕಾಲಘಟ್ಟದಲ್ಲಿ ಆ ಬದಲಾವಣೆಗೆ ನಮ್ಮನ್ನು ನಾವು ಒಡ್ಡಿಕೊಳ್ಳುವುದಲ್ಲದೆ, ಬದಲಾವಣೆಯ ದೂತರಾಗಿ ಕಾರ್ಯ ನಿರ್ವಹಿಸಬೇಕು ಎಂದು ಯುವ ವೈದ್ಯರಿಗೆ ಕರೆ ನೀಡಿದರು.
ಹಿಂದೆ ಶಿಕ್ಷಣ ಪಡೆಯಲು ಶಾಲೆಗೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ ಇಂದು ತಂತ್ರಜ್ಞಾನದ ಬದಲಾವಣೆಯಿಂದ ಸಾಮಾಜಿಕ ಜಾಲತಾಣಗಳ ಮೂಲಕವೇ ಶಿಕ್ಷಣದ ವಿಭಿನ್ನ ಆಯಾಮಗಳು, ವಿಭಿನ್ನತೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇಂತಹ ಪ್ರಗತಿಯ ನಡುವೆ ನಾವು ಆರೋಗ್ಯ ಕ್ಷೇತ್ರವಲ್ಲದೆ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ನಾವಿಂದು ವಿಭಿನ್ನಮಯ ಸವಾಲುಗಳನ್ನು ಎದುರಿಸುತ್ತಿದ್ದೇವೆ.ಅದರಲ್ಲೂ ಮುಖ್ಯವಾಗಿ ಹವಾಮಾನ ಬದಲಾವಣೆ, ಜನ ಸಂಖ್ಯೆಯಲ್ಲಿ ತೀವ್ರ ತೆರನಾದ ಹೆಚ್ಚಳ ಬಹುಮುಖ್ಯ ಸಮಸ್ಯೆಗಳಲ್ಲಿ ಒಂದಾಗಿದೆ ಎಂದವರು ಹೇಳಿದರು.
ಈ ಎಲ್ಲಾ ಸಮಸ್ಯೆಗಳ ಹೊರತಾಗಿಯೂ ನಾವು ನಮ್ಮ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಆತಂಕಿತರಾಗಿರುತ್ತೇವೆ. ಆದರೆ, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಬೇಕಾದರೆ ನಾವು ನಮ್ಮ ಸುತ್ತಮುತ್ತಲಿನವರ ಸಮಸ್ಯೆಗಳನ್ನು ಕಣ್ತೆರೆದು ನೋಡಬೇಕಾಗುತ್ತದೆ. ಆಗ ನಮ್ಮ ಸಮಸ್ಯೆಗಳು ಲಘುವಾಗಿ ಕಾಣಸಿಗುತ್ತವೆ. ಯುವ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಜತೆ ಆಧುನಿಕತೆಯ ಬದಲಾವಣೆಗೆ ಪೂರಕವಾಗಿ ಮುಂದೆ ಸಾಗಬೇಕು ಎಂದು ಅವರು ಸಲಹೆ ನೀಡಿದರು.
ಸಮಾರಂಭದಲ್ಲಿ ಡಾಕ್ಟರಲ್ ಫೆಲೋಶಿಪ್, ಡಾಕ್ಟರೇಟ್, ಸ್ನಾತಕೋತ್ತರ ಡಿಪ್ಲೊಮಾ, ಸ್ನಾತಕೋತ್ತರ ಹಾಗೂ ಪದವಿ ಪಡೆಯಲು ಅರ್ಹರಾದ ಒಟ್ಟು 477ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
2012-13ನೆ ಸಾಲಿನಲ್ಲಿ ಪ್ರಥಮ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ದಿವಂಗತ ಎ. ರೈಝಾ ಹೆಸರಿನಲ್ಲಿ ಸ್ಥಾಪಿಸಲಾದ ದತ್ತಿ ಪುರಸ್ಕಾರವನ್ನು ಎಂಬಿಬಿಎಸ್ನ ನೂರ್ ಸೈಫಿಕ್ ಬಿಂಟಿ ಮುಹಮ್ಮದ್ ಹಸನ್ ಅವರಿಗೆ ಪ್ರದಾನ ಮಾಡಲಾಯಿತು.
ಬಿಡಿಎಸ್ ವಿಭಾಗದಲ್ಲಿ ಫಾತಿಮಾ ಫರ್ಹಾನ, ಝೈನಬಾ ಹಮ್ನಾ ಕೆ.ಎ., ಎಂಬಿಬಿಎಸ್ನಲ್ಲಿ ಮವಿಯಾ ಅಬ್ದುಲ್ ಅಝೀಝ್, ಸ್ನಾತಕೋತ್ತರ ಮೂಲ ವಿಜ್ಞಾನ ನರ್ಸಿಂಗ್ನಲ್ಲಿ ನಮೃತಾ ಖಾಡ್ಕಾ, ಶ್ರುತಿ ಲಕ್ಷ್ಮಿ, ಬಿಎಸ್ಸಿ ನರ್ಸಿಂಗ್ನಲ್ಲಿ ಸಾಂಡ್ರಾ ಸಾಜು, ಶ್ರುತಿ ಎಸ್., ಬಿಪಿಟಿಯಲ್ಲಿ ಜುಬೈರಿಯಾ ಪಿ. ಸೇರಿದಂತೆ ಎಂಟು ಮಂದಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಘಟಿಕೋತ್ಸವ ಮೆರವಣಿಗೆಯೊಂದಿಗೆ ಘಟಿಕೋತ್ಸವ ಆರಂಭಗೊಂಡಿತು.ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಪತಿ ವೈ. ಅಬ್ದುಲ್ಲಾ ಕುಂಞಿಯವರು ಅಧ್ಯಕ್ಷತೆ ವಹಿಸಿದ್ದರು. ಯೆನೆಪೋಯ ಫೌಂಡೇಶನ್ನ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಬಿ.ಎಚ್. ಶ್ರೀಪತಿ ರಾವ್, ಡಾ. ಗುಲಾಂ ಜೀಲಾನಿ ಖಾದಿರಿ, ಪ್ರೊ. ಆಶಾ ಪಿ. ಶೆಟ್ಟಿ, ಪ್ರೊ. ಪದ್ಮ ಕುಮಾರ್ ಎಸ್., ಡಾ. ಕಮಲಕಾಂತ್ ಶೆಣೈ, ಡಾ. ಸಂಪತ್ತಿಲ ಪದ್ಮನಾಭ, ಡಾ. ಅಖ್ತರ್ ಹುಸೇನ್, ಡಾ. ಬಿ.ಟಿ. ನಂದೀಶ್, ಡಾ. ಜಿ. ಶ್ರೀಕುಮಾರ್ ಮೆನನ್, ಟ್ರಸ್ಟಿಗಳಾದ ಡಾ. ಸಿ.ಪಿ. ಹಬೀಬ್ ರೆಹಮಾನ್, ಖಾಲಿದ್ ಬಾವಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪ ಕುಲಪತಿ ಡಾ.ಎಂ. ವಿಜಯ ಕುಮಾರ್ ಸ್ವಾಗತಿಸಿದರು. ಡಾ. ಮಲ್ಲಿಕಾ ಶೆಟ್ಟಿ ಮತ್ತು ಡಾ. ರೊಚೆಲ್ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು.
ವರದಿ ಕೃಪೆ : ವಾಭಾ
Comments are closed.