ಮಂಗಳೂರು, ಅ.19: ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಇಂದು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
2009ರಲ್ಲಿ ಮಂಗಳೂರಿನ ಬಲ್ಮಠದಲ್ಲಿ ನಡೆದ ಪಬ್ ದಾಳಿಗೆ ಪ್ರೇರಣೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಮೋದ ಮುತಾಲಿಕ್ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗಾಗಿ ಅವರು ಇಂದು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಪಬ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ಹಿಂತುರಿಗುತ್ತಿದ್ದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್ ಅವರು, ಕೆಲ ವಿಕೃತವಾದಿಗಳು ಮತ್ತು ಬುದ್ಧಿಗೇಡಿಗಲು ‘ಉಡುಪಿ ಚಲೋ’ ಹೆಸರಿನಲ್ಲಿ ಕರ್ನಾಟಕದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಉಡುಪಿ ಕೃಷ್ಣಮಠವನ್ನು ಪ್ರವೇಶಿಸಿದರೆ ಅವರು ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು.
ಸೆಕ್ಯುಲರ್ವಾದಿಗಳು ಮುಸ್ಲಿಮರು, ಕ್ರಿಶ್ಚಿಯನ್ನರ ಏಜೆಂಟ್ ಗಳಾಗಿದ್ದಾರೆ. ಅವರಿಗೆ ತಾಕತ್ತಿದ್ದರೆ ಮಸೀದಿಯೊಳಗಿನ ಅಸ್ಪಶ್ಯತೆಯನ್ನು ನಿವಾರಿಸಲು ಮಸೀದಿಯೊಳಗಡೆ ಪ್ರವೇಶಿಸಲಿ ಎಂದು ಮುತಾಲಿಕ್ ಸವಾಲೆಸೆದರು.
ಕಳೆದ ವರ್ಷ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯಿಂದ ರಾಜ್ಯದಲ್ಲಿ ಗದ್ದಲ ಸೃಷ್ಟಿಯಾಗಿದೆ. ಜನರಲ್ಲಿ ಈ ಬಗ್ಗೆ ಆಕ್ರೋಶವಿದೆ. ಕಳೆದ ವರ್ಷ ಈ ವಿಚಾರದಲ್ಲಿ ಒಂದು ಪ್ರಾಣವೂ ಬಲಿಯಾಗಿದೆ. ಸರಕಾರ ಮುಸ್ಲಿಮರ ಓಲೈಕೆಗಾಗಿ ಈ ಆಚರಣೆಯನ್ನು ಜಾರಿಗೆ ತಂದಿದೆ. ಇದನ್ನು ಹೀಗೆಯೇ ಬಿಟ್ಟರೆ ಬಿನ್ ಲಾಡೆನ್ನ ಜಯಂತಿಯನ್ನೂ ಆಚರಿಸಬಹುದು.ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಬೇಕು ಎಂದಿದ್ದರೆ ಸರಕಾರ ಕೂಡಲೇ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಆದೇಶವನ್ನು ಹಿಂಪಡೆಯಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
ಕರ್ನಾಟಕದಲ್ಲಿ ಪಾಕಿಸ್ತಾನಿ ಕಲಾವಿದರ ಚಿತ್ರಪ್ರದರ್ಶನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ ಮುತಾಲಿಕ್ ಅವರು, ಪಾಕಿಸ್ತಾನಿ ನಟರು, ಕ್ರಿಕೆಟ್ ಆಟಗಾರರಿಗೆ ಬಹಿಷ್ಕಾರ ಹಾಕಬೇಕು. ದೇಶದಲ್ಲಿ ಅವರ ಸಿನೆಮಾಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದರು.
ತ್ರಿವಳಿ ತಲಾಖ್ ಕುರಿತಂತೆ ಕುರಿತಂತೆ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಒಂದು ವಿಚಾರದಲ್ಲಿ ಎರಡು ಕಾನೂನು ಯಾವ ದೇಶದಲ್ಲೂ ಇಲ್ಲ. ಇಂತಹ ಕಾನೂನು ಇರುವ ಅವಶ್ಯಕತೆಯೂ ಇಲ್ಲ. ಈ ರೀತಿ ಬೇಕು ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ. ಈ ದೇಶದಲ್ಲೇ ಇರಬೇಕಾದರೆ ಒಂದೇ ಕಾನೂನಿನಡಿ ಇರಲಿ ಎಂದು ಪ್ರತಿಕ್ರಿಯೆ ನೀಡಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ದೊಡ್ಡ ಪ್ರಮಾಣದಲ್ಲಿ ಹಿಂದುತ್ವದ ಆಧಾರದಲ್ಲಿ ಮತಗಳು ಲಭಿಸಿವೆ. ಮೋದಿಯವರು ಭಾರತದಲ್ಲಿ ಗೋಹತ್ಯೆಯನ್ನು ನಿಷೇಧಿಸುತ್ತಾರೆ, ಪಾಕಿಸ್ತಾನಕ್ಕೆ ಬುದ್ಧಿ ಕಲಿಸುತ್ತಾರೆ ಎನ್ನುವ ವಿಶ್ವಾಸ ನಮಗಿದೆ ಎಂದು ಹೇಳಿದರು. ,ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಾರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲೇಬೇಕು ಎಂದು ಹೇಳಿದರು.
Comments are closed.