ಮಂಗಳೂರು,ಅಕ್ಟೋಬರ್.17: ಬೆಂಗಳೂರಿನಲ್ಲಿ ನಡೆದ ಆರ್ಎಸ್ಎಸ್ ಕಾರ್ಯಕರ್ತ ಆರ್.ರುದ್ರೇಶ್ರವರ ಹತ್ಯೆ ಖಂಡಿಸಿ ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಸೋಮವಾರ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ ಅವರು ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಆರೆಸ್ಸಸ್ ಪಥಸಂಚಲನದಲ್ಲಿ ಭಾಗವಹಿಸಿ ಹಿಂತಿರುಗುವ ಸಂದರ್ಭದಲ್ಲಿ ಆರ್ಎಸ್ಎಸ್ ಕಾರ್ಯಕರ್ತ ಆರ್.ರುದ್ರೇಶ್ರವರನ್ನು ಮಾರಕಾಯುಧದಿಂದ ಭೀಕರವಾಗಿ ಹತ್ಯೆ ನಡೆಸಿರುವ ಘಟನೆ ಹೇಯ ಕೃತ್ಯವಾಗಿದೆ. ಕರ್ನಾಟಕದ ರಾಜಧಾನಿಯಲ್ಲಿ ಹಾಡುಹಗಲೇ ನಡೆದ ಈ ಕೃತ್ಯವು ರಾಜ್ಯ ಸರಕಾರದ ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಾಜ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಿಟ್ಟುಕೊಂಡು ನಿರಂತರವಾಗಿ ಹತ್ಯೆಗಳು ನಡೆಯುತ್ತಿವೆ. ಮಂಗಳೂರಿನ ಪ್ರಶಾಂತ್ ಪೂಜಾರಿ, ಮೈಸೂರಿನ ರಾಜು, ಕೊಡಗಿನ ಕೂಟ್ಟಪ್ಪ , ಈಗ ರುದ್ರೇಶ್ ಹತ್ಯೆ. ಈ ರೀತಿಯಾಗಿ ಕಾಂಗ್ರೆಸ್ ಈ ರಾಜ್ಯವನ್ನು ರಾಜ್ಯವನ್ನು ಗೂಂಡ ರಾಜ್ಯವನ್ನಾಗಿ ಮಾಡಲು ಯತ್ನಿಸುತ್ತಿದೆ. ಸರಕಾರದ ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ಭೀಕರ ಹತ್ಯೆಯನ್ನು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆ ತೀವ್ರವಾಗಿ ಖಂಡಿಸುತ್ತಿದೆ ಎಂದು ಹೇಳಿದರು.
ಈ ಹತ್ಯಾ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಅಗ್ರಹಿಸಿದ ಅವರು, ಈ ಮೂಲಕ ರುದ್ರೇಶ್ರವರ ಕುಟುಂಬಕ್ಕೆ ನ್ಯಾಯ ಮತ್ತು ಸೂಕ್ತ ಪರಿಹಾರ ಒದಗಿಸಬೇಕೆಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಥ್ವಿರಾಜ್ ಯು.ಬಿ.ಬಂಗೇರ, ಜಿಲ್ಲಾ ಉಪಾಧ್ಯಕ್ಷರಾದ ಸಂದೀಪ್ ಶೆಟ್ಟಿ ಮರವೂರು, ಜಿಲ್ಲಾ ಕಾರ್ಯದರ್ಶಿ ಗಳಾದ ಭರತ್ ಈಶ್ವರಮಂಗಲ, ಕಿಶೋರ ಬಾಬು, ದಯಾನಂದ ಕೊಣಾಜೆ, ಸುದರ್ಶನ್ ಪೂಜಾರಿ, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸುಜೀತ್ ಮಾಡೂರು, ಯಶಪಾಲ್, ಸುನೀಲ್, ಅನೀಸ್, ಅಭಿಲಾಷ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶೆಟ್ಟಿ, ಲೋಹಿತ್ ಪೂಜಾರಿ, ದೇವಿಕಿರಣ್ ಕುಲಾಲ್, ಸಂತೋಷ ಕೈಕರ, ಸಂತೋಷ ಬಂಟ್ವಾಳ, ನಂದನ ಮಲ್ಯ, ಸಚಿನ್ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Comments are closed.