ಕುಂದಾಪುರ: ಕಾರು ಹಾಗೂ ಕಂಟೇನರ್ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಹಾಗೂ ಮಗು ದಾರುಣವಾಗಿ ಸಾವನ್ನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೈಂದೂರಿನ ಒತ್ತಿನೆಣೆ ಸಮೀಪ ಭಾನುವಾರ ಸಂಜೆ ನಡೆದಿದೆ.
ಮೃತರನ್ನು ಸಾರಾ(27) ಹಾಗೂ ಅವರ ಒಂದೂವರೆ ತಿಂಗಳ ಮಗು ಫಾತಿಮಾ ಎಂದು ಗುರುತಿಸಲಾಗಿದ್ದು, ಸಾರಾ ಅವರ ಪತಿ ಅಬ್ಧುಲ್ ಸಲ್ಮಾನ್ ಹಾಗೂ ಇನ್ನೋರ್ವ ಪುತ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರೆಲ್ಲರೂ ಹೊನ್ನಾವರದಿಂದ ಕುಂದಾಪುರದತ್ತ ಸಾಗುತ್ತಿದ್ದು ಕುಂದಾಪುರದ ನಿವಾಸಿಗಳು ಎನ್ನಲಾಗುತ್ತಿದೆ.
ಹೊನ್ನಾವರದಿಂದ ಕುಂದಾಪುರದೆಡೆಗೆ ಬರುತ್ತಿದ್ದ ಕಾರು ಹಾಗೂ ಅದೇ ಮಾರ್ಗವಾಗಿ ಸಾಗುತ್ತಿದ್ದ ಕಂಟೇನರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಕಂಟೇನರ್ ಚಾಲಕ ಯಾವುದೇ ಮುನ್ಸೂಚನೆಯಿಲ್ಲದೇ ವಾಹನವನ್ನು ರಸ್ತೆಯ ಒಂದು ಕಡೆಗೆ ತಿರುಗಿಸಿದ್ದು ಹಿಂಬದಿಯಿಂದ ವೇಗವಾಗಿ ಬಂದ ಕಾರು ಕಂಟೇನರಿಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು ಕ್ರೇನ್ ಮೂಲಕ ತೆರವುಗೊಳಿಸಲಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ ಕಾರಣ ಹಲವು ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬೈಂದೂರು ಪೊಲಿಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ. ಸದ್ಯ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
Comments are closed.