ಮಂಗಳೂರು, ಆಕ್ಟೋಬರ್.15: ನಾಗೇಶ್ವರ ಸಿನಿ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಣದ ಅಂಬರ್ ಕ್ಯಾಟರರ್ಸ್ ತುಳು ಸಿನಿಮಾದ ಮುಹೂರ್ತ ಸಮಾರಂಭವು ಅಕ್ಟೋಬರ್ 16ರಂದು ಭಾನುವಾರ ಬೆಳಿಗ್ಗೆ 8.30ಕ್ಕೆ ಬಾರ್ಕೂರಿನ ನಾಗೇಶ್ವರ ದೇವಳದಲ್ಲಿ ನೆರವೇರಲಿದೆ.
ಸದ್ಯ ಜನನದಿಂದ ಮರಣದವರೆಗೂ ಅನಿವಾರ್ಯ ಮತ್ತು ಅವಶ್ಯವಾಗಿ ಬೇಕಾಗುವ ಊಟೋಪಚಾರ ಸರಬರಾಜು ಮಾಡುವ ಉದ್ಯಮವೇ ಕೇಟರರ್ ವ್ಯವಸ್ಥೆ. ಈ ಉದ್ಯಮದ ವ್ಯವಸ್ಥೆಯೊಳಗಿನ ಸೇವಾ ವ್ಯಾಪ್ತಿಯೊಳಗೆ ಅನುಭವ ಹಂಚುವ ರಸದೌತನದ ಚಲನಚಿತ್ರವೇ ‘ಅಂಬರ್ ಕೇಟರರ್ಸ್’. ಅಂಬರ್ ಕೇಟರರ್ಸ್ ಇದೊಂದು ವಿನೂತನ ಶೈಲಿಯ, ಹಾಸ್ಯ ಪ್ರಧಾನವಾಗಿ ಮೂಡಿಬರಲಿರುವ ತುಳು ಸಿನೆಮಾ ಎನ್ನುವುದರಲ್ಲಿ ಸಂಶಯವಿಲ್ಲ. ಅಂಬರ್ ಕೇಟರರ್ಸ್ ಮೂಲಕ ಯುವ ಪ್ರತಿಭಾನ್ವಿತ ಕಲಾವಿದ ಮುಂಬಯಿಯಲ್ಲಿನ ಕಡಂದಲೆ ಸೌರಭ್ ಸುರೇಶ್ ಭಂಡಾರಿ ಅವರು ತುಳು ಚಿತ್ರಜಗತ್ತಿಗೆ ಹೆಜ್ಜೆಯನ್ನಿರಿಸುತ್ತಿದ್ದಾರೆ.
ಜೈಪ್ರಸಾದ್ ಬಜಾಲ್ ಚಿತ್ರ ಕತೆ ರಚಿಸಿ ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವ ಹಾಗೂ ನಾಗೇಶ್ವರ ಸಿನಿ ಕಂಬೈನ್ಸ್ ಪ್ರಸ್ತುತಿಯಲ್ಲಿ ಈ ನೂತನ ಕಲ್ಪನೆಯ ಈ ತುಳು ಚಲನಚಿತ್ರ ಮೂಡಿಬರಲಿದೆ. ಜೈಪ್ರಸಾದ್ ಬಜಾಲ್ ಸಂಭಾಷಣೆಗೈದು ನಿರ್ದೇಶಿಸಲಿರುವ ಈ ಸಿನೇಮಾವನ್ನು ಸಂತೋಷ್ ರೈ ಪಾತಾಜೆ ತನ್ನ ಕ್ಯಾಮೆರಾ ಮೂಲಕ ಚಿತ್ರೀಕರಿಸಲಿದ್ದು,ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆಗೈಯಲಿದ್ದಾರೆ.ಮಣಿಕಾಂತ್ ಕದ್ರಿ ಸಂಗೀತ ನೀಡಲಿದ್ದಾರೆ. ವಿಜಯಕುಮಾರ್ ಕೊಡಿಯಾಲ್ ಬೈಲ್, ನಿತಿನ್ ಬಂಗೇರ ಚಿಲಿಂಬಿ ಹಾಗೂ ಜೈಪ್ರಸಾದ್ ಬಜಾಲ್ ಅವರ ಸಾಹಿತ್ಯವಿದೆ. ಸಹ ನಿರ್ದೇಶನ ಪ್ರಶಾಂತ್ ಆಳ್ವ ಹಾಗೂ ಶಿವನಂದ್ ನಿಡಿಂಜಿ, ಸಹಾಯಕ ನಿರ್ದೇಶಕರಾಗಿ ನಿತಿನ್ ಬಂಗೇರ ಚಿಲಿಂಬಿ, ಲತೀಶ್ ಮಡಿಕೇರಿ. ಅಭಿಷೇಕ್ ಧರ್ಮಪಾಲ್ ಶೆಟ್ಟಿ ಕಾರ್ಯನಿರ್ವಹಿಸಿದ್ದಾರೆ.
ತಾರಾಗಣದಲ್ಲಿ ನಾಯಕ ನಟನಾಗಿ ಪ್ರಧಾನ ಭೂಮಿಕೆಯಲ್ಲಿ ಸೌರಭ್ ಎಸ್.ಭಂಡಾರಿ, ನಾಯಕಿ ಪಾತ್ರದಲ್ಲಿ ಸಿಂಧು ಲೋಕನಾಥ್, ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ನವೀನ್ ಡಿ.ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಸುನೇತ್ರ ಪಂಡಿತ್ ನಟಿಸಲಿದ್ದಾರೆ. ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಇದೇ ಮೊದಲ ಬಾರಿಗೆ ತುಳು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.
ಅಕ್ಟೋಬರ್ ೧೬ರಂದು ಭಾನುವಾರ ಬೆಳಿಗ್ಗೆ 8.30ಗಂಟೆಗೆ ಉಡುಪಿ ಬಾರ್ಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ‘ಅಂಬರ್ ಕ್ಯಾಟರರ್ಸ್’ ತುಳು ಸಿನೇಮಾಕ್ಕೆ ಕನ್ನಡ ಚಲನಚಿತ್ರದ ನಿರ್ದೇಶಕ ಎಂ.ಡಿ ಶ್ರೀಧರ್ ಕ್ಲಾಪ್ ಮಾಡಲಿರುವರು. ನಿರ್ದೇಶಕರುಗಳಾದ ಹೆಚ್.ವಾಸು, ಆನಂದ್ ಪಿ.ರಾಜು, ಹ.ಸೂ ರಾಜಶೇಖರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Comments are closed.