– ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಹರಿದು ಬಂದ ಜನಸಾಗರ – ವರ್ಣಮಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಲಕ್ಷಾಂತರ ಭಕ್ತರು –
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಆಕ್ಟೋಬರ್.11: ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ದಸರಾ ಪ್ರಯುಕ್ತ ಅ. 1ರಿಂದ 11ರ ತನಕ ಪೂಜಿಸಲ್ಪಟ್ಟ ಶ್ರೀ ಗಣಪತಿ, ಶ್ರೀ ಶಾರದೆ ಮಾತೆ ಸಹಿತ ನವದುರ್ಗೆಯರ ವಿಗ್ರಹಗಳ ಭವ್ಯ ಶೋಭಾಯಾತ್ರೆಯು ಮಂಗಳವಾರ ಸಂಜೆ ಶ್ರೀ ಕ್ಷೇತ್ರದ ನವೀಕರಣ ಮತ್ತು ಮಂಗಳೂರು ದಸರಾ ರೂವಾರಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಬಹಳ ವೈಭವದಿಂದ ಜರಗಿತು.
ಮಂಗಳೂರಿಗೆ ಮಂಗಳೂರೇ ವರ್ಣಮಯವಾಗಿ ಕಂಗೊಳಿಸಿ-ವಿಜೃಂಭಿಸಿದ ಕುದ್ರೋಳಿ ಕ್ಷೇತ್ರದ ‘ಮಂಗಳೂರು ದಸರಾ’ ಶೋಭಾಯಾತ್ರೆ ಭಾರೀ ಸಂಖ್ಯೆಯ ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಮಂಗಳವಾರ ಸಂಜೆ ಸಂಭ್ರಮ ಸಡಗರದೊಂದಿಗೆ ಕ್ಷೇತ್ರದಿಂದ ಆರಂಭವಾಗೊಂಡಿತ್ತು.
ಕುದ್ರೋಳಿ ದೇವಸ್ಥಾನದ ದರ್ಬಾರ್ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಶಾರದ ಮಾತೆಯನ್ನುಯನ್ನು ಸಂಜೆ ದೇವಸ್ಥಾನದ ದರ್ಬಾರ್ ಮಂಟಪದಿಂದ ಭಕ್ತ ಜನಸಾಗರದ ಜಯಘೋಷಗಳೊಂದಿಗೆ ಅಲಂಕೃತ ವಾಹನಗಳಿಗೆ ಏರಿಸಲಾಯಿತು.
ಸಾಲು ಸಾಲು ಬಣ್ಣದ ಕೊಡೆಗಳು, ಕಿವಿಗಡಚಿಕ್ಕುವ ಚೆಂಡೆ ವಾದನ, ನಾಸಿಕ್ ಬ್ಯಾಂಡ್ ಅಬ್ಬರ, ಭಜನಾ ತಂಡಗಳ ಶಿಸ್ತುಬದ್ಧ ಕುಣಿತ, ಕೋಲಾಟ, ವೀರಗಾಸೆ, ಕಂಸಾಳೆ , ಡೋಲು, ಜಾಗಟೆ, ಕೊಂಬು, ಕಹಳೆಯ ನಿನಾದ, ಮುಗಿಲು ಮುಟ್ಟಿದ ಭಕ್ತರ ಜಯಘೋಷ, ವೈವಿಧ್ಯಮಯ ನೃತ್ಯ, ಅಲ್ಲಲ್ಲಿ ಸಂಗೀತದ ರಸದೌತಣದ ಮೂಲಕ ಶ್ರೀ ಮಹಾಗಣಪತಿ, ಶಾರದೆ, ಆದಿಶಕ್ತಿ, ಶ್ರೀ ಕ್ಷೇತ್ರದ ವಿಶಿಷ್ಟ ಪರಂಪರೆಯಾದ ನವದುರ್ಗೆಯರ ಶೋಭಾಯಾತ್ರೆಯು ಕುದ್ರೋಳಿ ಶ್ರೀ ಗೋಕರ್ಣಣಾಥೇಶ್ವರ ದೇವಳದಿಂದ ಪ್ರಾರಂಭವಾಗೊಂಡಿತ್ತು.
ಕರಾವಳಿಯ ವಿವಿಧ ಪುಣ್ಯಕ್ಷೇತ್ರಗಳಿಂದ ಪ್ರವರ್ತಿತ ಧಾರ್ಮಿಕ- ಸಾಂಸ್ಕೃತಿಕ ಸ್ತಬ್ಧಚಿತ್ರ, ಹುಲಿವೇಷ, ನೃತ್ಯರೂಪಕಗಳು, ದೇಶದ ಪರಂಪರೆಯ ಟ್ಯಾಬ್ಲೋಗಳು, ತ್ರಿಶೂರಿನ ಬಣ್ಣದ ಕೊಡೆ, ಕೇರಳದ ಚೆಂಡೆವಾದ್ಯ, ಕಲ್ಲಡ್ಕ ಶಿಲ್ಪಾಗೊಂಬೆಗಳು, ಬೆಂಗಳೂರಿನ ವಾದ್ಯತಂಡ, ಮಹಾರಾಷ್ಟ್ರದ ಡೋಲುನೃತ್ಯ, ಕರ್ನಾಟಕದ ಜಾನಪದ ವೈವಿಧ್ಯ… ಹೀಗೆ ಶೋಭಾಯಾತ್ರೆಗೆ ಮತ್ತಷ್ಟು ಮೆರುಗು ತುಂಬಿತು. ಶೋಭಾಯಾತ್ರೆಯುದ್ದಕ್ಕೂ ಸೇರಿದ ಅಪಾರ ಜನಸ್ತೋಮ ಸಂಭ್ರಮಿಸಿತು.
ಈ ಬಾರಿ ಶಾರದೆ ಮಾತೆಗೆ 90 ಅಟ್ಟಿ ಕಸ್ತೂರಿ ಮಲ್ಲಿಗೆಯ ಅಲಂಕಾರ
ನವರಾತ್ರಿಯ ಮೊದಲ ದಿನ ( ಅಕ್ಟೋಬರ್ 1ರಂದು) ಪ್ರತಿಷ್ಠಾಪನೆಗೊಂಡ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತಿತ್ತು. ಬಳಿಕ ಪ್ರತಿ ದಿನ ಬಣ್ಣದ ಆಕರ್ಷಕ ಸೀರೆಯೊಂದಿಗೆ ಶಾರದಾ ಮಾತೆಗೆ ಅಲಂಕಾರಗಳನ್ನು ನಡೆಸಲಾಗುತ್ತಿತ್ತು.
ಇಂದು ಶೋಭಾಯಾತ್ರೆ ಸಂದರ್ಭ ವಿಶೇಷ ಕಚ್ಚೆ ಸೀರೆಯ ವಿಶೇಷ ಅಲಂಕಾರದ ಜತೆಗೆ ಶಾರದಾ ಮಾತೆಗೆ ಕಸ್ತೂರಿ ಮಲ್ಲಿಗೆ ಜಲ್ಲಿ (ಮಲ್ಲಿಗೆಯ ಕೇಶಾಲಂಕಾರ) ಹಾಕಲಾಗಿತ್ತು. ಈ ಅಲಂಕಾರಕ್ಕಾಗಿ ಸುಮಾರು 90 ಅಟ್ಟಿ ಕಸ್ತೂರಿ ಮಲ್ಲಿಗೆ (ಒಂದು ಅಟ್ಟಿಯಲ್ಲಿ ನಾಲ್ಕು ಚೆಂಡು)ಯನ್ನು ಬಳಸಲಾಗಿತ್ತು. ಜತೆಗೆ ಗುಲಾಬಿ ಎಸಳುಗಳ ಮೂಲಕ ವಿಶೇಷ ಜಲ್ಲಿಯನ್ನು ಹಾಕಲಾಗಿತ್ತು. ವೃತ್ತಿಯಲ್ಲಿ ಬ್ಯೂಟಿಶಿಯನ್ ಹಾಗೂ ಕಳೆದ ಐದು ವರ್ಷಗಳಿಂದ ಶಾರದಾ ಮಾತೆ ಹಾಗೂ ನವದುರ್ಗೆಯರ ಅಲಂಕಾರದಲ್ಲಿ ತೊಡಗಿಕೊಂಡಿರುವ ರಾಧಿಕಾ ಭಟ್ ಅವರು ಈ ಬಾರಿಯೂ ಈ ವಿಶೇಷ ಅಲಂಕಾರವನ್ನು ಬಹಳ ಮುತುರ್ವಜಿಯಿಂದ ಮಾಡಿದ್ದಾರೆ.
ಶ್ರೀ ಗಣಪತಿ, ಶ್ರೀ ಶಾರದೆ ಮಾತೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಟಾಪಿಸಲ್ಪಟ್ಟ ದರ್ಬಾರ್ ಮಂಟಪಕ್ಕೆ ‘ಅಕ್ರೆಲಿಕ್’ ವರ್ಣಾಲಂಕಾರ ಈ ಬಾರಿಯ ವಿಶೇಷತೆಯಾಗಿತ್ತು. ಅರಮನೆ ದರ್ಬಾರನ್ನು ಹೋಲುವ ರೀತಿಯಲ್ಲಿ ಪ್ರತಿ ವರ್ಷ ಹೊಸ ಹೊಸ ವಿನ್ಯಾಸಗಳೊಂದಿಗೆ ಮಂಟಪವನ್ನು ಅಲಂಕಾರಗೊಳಿಸಲಾಗುತ್ತಿದೆ. ಕಳೆದ ವರ್ಷ ಗೋಲ ಗುಮ್ಮಟ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದ ದರ್ಬಾರ್ ಮಂಟಪವು ಈ ಬಾರಿ, ಅಕ್ರಾಲಿಕ್ನ ವಿಭಿನ್ನ ವೈಭವದಲ್ಲಿ ರೂಪುಗೊಂಡಿದೆ.
ಬುಧವಾರ ಮುಂಜಾನೆ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಸಂಪನ್ನ
ಶೋಭಾಯಾತ್ರೆ ಮಣ್ಣಗುಡ್ಡೆ, ಲೇಡಿಹಿಲ್, ಲಾಲ್ಬಾಗ್, ಬಲ್ಲಾಳ್ಬಾಗ್, ಪಿವಿಎಸ್, ನವಭಾರತ್ ವೃತ್ತ, ಎಂಜಿ ರಸ್ತೆ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ, ಜಿಎಚ್ಎಸ್ ರಸ್ತೆ ,ಮೋಹಿನಿ ವಿಲಾಸ, ಓಂಮಹಲ್ ಜಂಕ್ಷನ್, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಲೋವರ್ ಕಾರ್ಸ್ಟ್ರೀಟ್, ನ್ಯೂಚಿತ್ರಾ ಟಾಕೀಸ್, ಅಳಕೆ ಮೂಲಕ ಸಾಗಿ ಬುಧವಾರ ಮುಂಜಾನೆ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಸಂಪನ್ನಗೊಳ್ಳಲ್ಲಿದೆ.
ಹರಿದು ಬಂದ ಜನ ಸಾಗರ:
ಸಾಗರದಂತೆ ಹರಿದು ಬಂದ ಲಕ್ಷಾಂತರ ಭಕ್ತರು ವರ್ಣಮಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಗರವು ಪೂರ್ತಿ ವರ್ಣಮಯ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿತು. ಶೋಭಾಯಾತ್ರೆ ಸಾಗಿದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಸ್ವಾಗತ ಕೋರುವ ದೇವಿಯ ಚಿತ್ರದ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದವು. ಅಲ್ಲಲ್ಲಿ ಭಕ್ತಾಧಿಗಳು ಆರತಿ ಪೂಜೆ ಸಲ್ಲಿಸಿದರು. ಮೆರವಣಿಗೆ ವೀಕ್ಷಿಸಲು ಮಕ್ಕಳು, ಮಹಿಳೆಯರು ಸೇರಿದಂತೆ ಲಕ್ಷಾಂತರ ಮಂದಿ ಸಂಜೆಯಿಂದಲೇ ರಸ್ತೆ ಪಕ್ಕದಲ್ಲಿ ಗುಂಪುಗುಂಪಾಗಿ ನೆರೆದಿದ್ದರು.
ಶ್ರೀ ದೇವರ ಸೇವೆ ಮಾಡಿವರಿಗೆ ಹಾಗೂ ಇತರ ಸಾಧಕರಿಗೆ ಕ್ಷೇತ್ರದ ವತಿಯಿಂದ ಗೌರವ -ಸಮ್ಮಾನ :
ಶೋಭಾಯಾತ್ರೆ ಆರಂಭಕ್ಕೆ ಮೊದಲು ಶ್ರೀ ಶಾರದೆಯ ಸನ್ನಿಧಿಯಲ್ಲಿ ಜನಾರ್ದನ ಪೂಜಾರಿ ಸೇವಾಕತೃಗಳನ್ನು ಸಮ್ಮಾನಿಸಿದರು.
ಮೆರವಣಿಗೆಯ ಚಾಲನೆ ಸಂದರ್ಭದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಉಪಧ್ಯಾಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕರಿ ಪದ್ಮರಾಜ್ ಆರ್(ಎಡ್ವೋಕೇಟ್). ಕ್ಷೇತ್ರ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಜಯ ಸಿ ಸುವರ್ಣ ಮುಂಬಯಿ, ಪ್ರಮುಖರಾದ ರವಿಶಂಕರ್ ಮಿಜಾರ್, ಮಹೇಶ್ ಚಂದ್ರ, ಬಿ.ಆರ್.ತಾರನಾಥ, ಕಳ್ಳಿಗೆ ತಾರನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಕೆ. ಮಹೇಶ್ಚಂದ್ರ, ದೇವೇಂದ್ರ ಪೂಜಾರಿ, ಡಾ| ಅನುಸೂಯಾ, ರಾಧಾಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಪೂಜಾರಿ ಶ್ಲಾಘನೆ
ಕುದ್ರೋಳಿ ಕ್ಷೇತ್ರದ ಈ ಬಾರಿಯ ಮಂಗಳೂರು ದಸರಾವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದ ಸರ್ವರನ್ನೂ ತಾನು ಶ್ಲಾಘಿಸುವುದಾಗಿ ಬಿ. ಜನಾರ್ದನ ಪೂಜಾರಿ. ಸಾಮಾಜಿಕ ಸಮಾನತೆ, ಮಹಿಳಾ ಸಶಕ್ತೀಕರಣ, ಸರ್ವಧರ್ಮ ಸಮನ್ವಯದ ಸಂದೇಶವನ್ನು ಬ್ರಹ್ಮಶ್ರೀ ನಾರಾಯಣ ಗುರು ನೀಡಿದ್ದಾರೆ. ಈ ಸಂದೇಶವನ್ನು ಕುದ್ರೋಳಿ ಕ್ಷೇತ್ರದಲ್ಲಿ ಅನುಷ್ಠಾನಿಸಲಾಗುತ್ತಿದೆ. ‘ಸರ್ವರಿಗೂ ಸಮಬಾಳು’ ಎಂಬ ಆದರ್ಶವನ್ನು ಇಲ್ಲಿ ಪರಿಪಾಲಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಭಕ್ತಾಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಶ್ರೀ ಕ್ಷೇತ್ರದ ಧಾರ್ಮಿಕ ಸೇವಾಕಾರ್ಯಗಳ ಬಗ್ಗೆ ಭಕ್ತರಿಗಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್:
ದಸರಾ ಮೆರವಣಿಗೆ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿತ್ತು. ಮೆರವಣಿಗೆ ಸಾಗುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವಾಹನ ಸಂಚಾರ ನಿಷೇಧ:
ಮೆರವಣಿಗೆಯ ಹಿನ್ನಲೆಯಲ್ಲಿ ಶುಕ್ರವಾರ 3ರಿಂದ ಮೆರವಣಿಗೆ ಸಾಗುವ ದಾರಿಗಳಲ್ಲಿ ಹಾಗೂ ರಸ್ತೆ ಅಕ್ಕಪಕ್ಕಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೆರವಣಿಗೆ ಆರಂಭವಾದ ಕೂಡಲೇ ನ್ಯೂ ಚಿತ್ರದಿಂದ ಕುದ್ರೋಳಿ ಕಡೆಗೆ, ಅಳಕೆ ಜಂಕ್ಷನ್ ನಿಂದ ಕುದ್ರೋಳಿ ದೇವಸ್ಥಾನದ ಕಡೆಗೆ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು. ಕುದ್ರೋಳಿ ದೇವಸ್ಥಾನದ ದಕ್ಷಿಣ ಗೇಟ್ ಮತ್ತು ಉತ್ತರ ಗೇಟ್ ರಸ್ಥೆಗಳಲ್ಲಿ ನಿಷೇಧ ಹೇರಲಾಗಿತ್ತು.
ಮೆರವಣಿಗೆ ಆರಂಭಗೊಂಡ ಸ್ವಲ್ಪ ಹೊತ್ತಿನ ಬಳಿಕ ತಂಪೆರದ ವರುಣ:
ಮಂಗಳೂರು ದಸರಾ ಮೆರವಣಿಗೆ ಆರಂಭವಾದ ನಂತರ ಮಂಗಳೂರಿನಲ್ಲಿ 7.20ರ ಸುಮಾರಿಗೆ ಆರಂಭಗೊಂಡ ವರುಣನ ಸಿಂಚನ 7.50ರವರೆಗೆ ಮುಂದುವರಿಯಿತು. ಕೆಲಹೊತ್ತುಗಳ ಕಾಲ ಸುರಿದ ಮಳೆಯಿಂದ ಸಂಭ್ರಮ ಆಚರಿಸುತ್ತಿದ್ದ ಜನರಿಗೆ ಸ್ವಲ್ಪ ನಿರಾಶೆ ಉಂಟು ಮಾಡಿತ್ತು. ಮಂಗಳೂರು ನಗರದ ವಿವಿಧೆಡೆ ಕೆಲ ಹೊತ್ತುಗಳ ಕಾಲ ಸುರಿದ ಮಳೆ ಬಳಿಕ ಏಕಾಏಕಿ ನಿಂತ ಪರಿಣಾಮ ಮಂಗಳೂರು ದರಸಾ ಮೆರವಣಿಗೆ ನಿರ್ವಿಘ್ನವಾಗಿ ನೆರವೇರಿತು.
ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ…
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್.
Comments are closed.