ಕರಾವಳಿ

ಮನಪಾ ವ್ಯಾಪ್ತಿಯ ಬಜಾಲ್‌ಪಡ್ಪು ಪ್ರದೇಶಕ್ಕೆ ನರ್ಮ್ ಬಸ್ ಒದಗಿಸುವಂತೆ ಆಗ್ರಹ

Pinterest LinkedIn Tumblr

turave_protest_1

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್‌ಪಡ್ಪು ಪ್ರದೇಶಕ್ಕೆ ಹೆಚ್ಚಿನ ಖಾಸಗಿ ಅಥವಾ ನರ್ಮ್ (ಸರಕಾರಿ) ಬಸ್ ಒದಗಿಸುವಂತೆ ಆಗ್ರಹಿಸಿ ಗುರುವಾರ ಬಜಾಲ್ ಪಡ್ಪುವಿನಲ್ಲಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು

ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು, ಬಜಾಲ್‌ಪಡ್ಪು ಮಂಗಳೂರು ಮಹಾನಗರ ವ್ಯಾಪ್ತಿಗೆ ಒಳಪಟ್ಟಿರುವ ಬೆಳೆಯುತ್ತಿರುವ ಪ್ರದೇಶ. ಇಲ್ಲಿ ಸಾಕಷ್ಟು ಜನಸಂಖ್ಯೆ ಇದ್ದು ಹೆಚ್ಚಿನವರು ಬಸ್ ಸೌಲಭ್ಯ ಅವಲಂಬಿಸಿದ್ದಾರೆ. ಆದರೆ ಇಲ್ಲಿನ ಜನರಿಗೆ ಓಡಾಡಲು ಇರುವುದು 11ಡಿ ನಂಬರಿನ (ಕೊಟ್ಟಾರ – ಬಜಾಲ್‌ಪಡ್ಪು) ಒಂದೇ ಖಾಸಗಿ ಬಸ್, ಈ ಬಸ್ ಸರಿಯಾಗಿ ಸಮಯ ಪರಿಪಾಲನೆ ಮಾಡದಿರುವುದರಿಂದ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಹಾಗೂ ಸ್ಟೇಟ್‌ಬ್ಯಾಂಕ್‌ಗೆ ಹೋಗಬೇಕಾದರೆ ಕಂಕನಾಡಿಯಿಂದ ಇಳಿದು ಇನ್ನೊಂದು ಬಸ್ಸಿನಲ್ಲಿ ತೆರಳಬೇಕಾಗುತ್ತದೆ. ಈ ಪ್ರದೇಶದಲ್ಲಿ ಸರಕಾರಿ ಶಾಲೆ ಇದ್ದು ಇಲ್ಲಿಗೆ ಬರುವ ಮಕ್ಕಳು ಹಾಗೂ ಶಿಕ್ಷಕರು ಬಸ್ ಸಮಸ್ಯೆಯಿಂದ ಬವಣೆ ಪಡುವಂತಾಗಿದೆ. ಅಂತೆಯೇ ಈ ಪ್ರದೇಶದಿಂದ ಪ್ರತಿ ದಿನವೂ ವಿದ್ಯಾರ್ಥಿಗಳು, ಕಾರ್ಮಿಕರು, ಉದ್ಯೋಗಸ್ಥರು, ಹಿರಿಯ ನಾಗರಿಕರು, ನಗರಕ್ಕೆ ಆಗಮಿಸಿ ಹಾಗೂ ನಿರ್ಗಮಿಸಬೇಕಾದುದರಿಂದ ಬಸ್‌ನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

turave_protest_2

ಮಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಡಿ.ಸಿ ಆಫೀಸ್ ಅಥವಾ ಹಂಪನಕಟ್ಟೆಗೆ ಬರಲು ಯಾವುದೇ ನೇರ ಬಸ್ ಸೌಕರ್ಯ ಇಲ್ಲದಿರುವುದು ವಿಷಾದನೀಯ. ಇಲ್ಲಿನ ಸ್ಥಳೀಯ ನಿವಾಸಿಗಳು ಈ ಸಮಸ್ಯೆಯನ್ನು ತುಳುನಾಡ ರಕ್ಷಣಾ ವೇದಿಕೆ ಗಮನಕ್ಕೆ ತಂದಿದ್ದು ಈ ಪ್ರದೇಶಕ್ಕೆ ಹೆಚ್ಚುವರಿ ಖಾಸಗಿ ಹಾಗೂ ನರ್ಮ (ಸರಕಾರಿ_ ಬಸ್‌ಗಳನ್ನು ನಗರದ ವಿವಧ ಪ್ರದೇಶಗಳಿಂದ ಬಜಾಲ್‌ಪಡ್ಪು ಪ್ರದೇಶಕ್ಕೆ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು,

ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೊಂದಿದ್ದು ವೈದ್ಯಕೀಯ ಸಹಾಯಕರು ಇಲ್ಲದಿರುವುದರಿಂದ ಆರೋಗ್ಯಕೇಂದ್ರ ಇದ್ದು ಇಲ್ಲದಂತಾಗಿದೆ ಆದುದರಿಂದ ವೈದ್ಯಕೀಯ ಸಹಾಯಕರನ್ನು ನೇಮಿಸಬೇಕು ಮತ್ತು ಸ್ಥಳೀಯ ಸರಕಾರಿ ಶಾಲೆಗೆ ೯ ಹಾಗೂ ೧೦ ನೇ ತರಗತಿಯನ್ನು ಪ್ರಾರಂಭಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದು ಕೂಡಲೇ ಕ್ರಮಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸ್ಥಳೀಯ ಮುಖಂಡರಾದ ರೆಹನ ಟೀಚರ್, ಅಬ್ದುಲ್ ರಜಾಕ್ ಬಜಾಲ್, ಉಸ್ಮಾನ್ ಕಲ್ಲಕಟ್ಟೆ, ರಾಜೇಶ್ ಮುಂತಾದವರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಆನಂದ್ ಅಮೀನ್ ಅಡ್ಯಾರ್ ಪ್ರಾಸ್ತವಿಕ ಭಾಷಣ ಮಾಡಿದರು. ನವಾಜ್ ಬಜಾಲ್ ಸ್ವಾಗತ ಭಾಷಣ ಮಾಡಿದರೆ, ಸಿರಾಜ್ ಅಡ್ಕರೆ ಧನ್ಯವಾದಗೈದರು.

ತುಳುನಾಡ ರಕ್ಷಣಾ ವೇದಿಕೆ ಉಪಾಧ್ಯಕ್ಷರಾದ ಜೆ. ಇಬ್ರಾಹಿಂ, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಬಂಗೇರ ಕುಡುಪು, ಹರೀಶ್ ಶೆಟ್ಟಿ ಶಕ್ತಿನಗರ, ರಿಕ್ಷಾ ಘಟಕದ ರಾಜೇಶ್ ಕುತ್ತಾರ್, ಶ್ರೀಕಾಂತ್ ಸಾಲ್ಯಾನ್, ಜನಾರ್ಧನ ಬೇಂಗ್ರೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.