ಮಂಗಳೂರು: ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೈಮೇಲೆ ಹಾರಿದ ಹೆಬ್ಟಾವಿನೊಂದಿಗೆ ಹೋರಾಡಿ ಪ್ರಾಣಾಪಾಯದಿಂದ ಪಾರಾದ ಬಂಟ್ವಾಳ ತಾಲೂಕು ಸಜೀಪ ಸಮೀಪದ ಕೊಳಕೆಯ ಬಾಲಕ ವೈಶಾಖ್ (11) ಮನೆಯಂಗಳದಲ್ಲಿ ಮತ್ತೆ ಹೆಬ್ಬಾವೊಂದು ಪ್ರತ್ಯಕ್ಷವಾಗಿದೆ.
ಅಂಗಳದಲ್ಲಿ ಕಂಡು ಬಂದ ಹೆಬ್ಟಾವು ಕಳೆದ ಮಂಗಳವಾರ ವೈಶಾಖ್ನನ್ನು ಕಚ್ಚಿದ ಹೆಬ್ಟಾವೇ ಎಂಬುದು ತಿಳಿದುಬಂದಿಲ್ಲ. ಹೆಬ್ಬಾವನ್ನು ನೋಡಲು ಜನ ಸೇರುತ್ತಿದ್ದಂತೆ ಬೆದರಿದ ಹೆಬ್ಟಾವು ಅಲ್ಲಿಂದ ತೆರಳಿದ್ದು, ಪೊದೆಯಲ್ಲಿ ಸೇರಿ ಮರೆಯಾಗಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಹೆಬ್ಬಾವಿನ ಹುಡುಕಾಟ ನಡೆಸಿದ್ದಾರೆ.
ಸಜೀಪ ಗ್ರಾಮದ ಕೊಳಕೆ ಕೂಡೂರಿನ ಸುರೇಶ್ ಮತ್ತು ಹರಿಣಾಕ್ಷಿ ದಂಪತಿಯ ಪುತ್ರ ಸಜೀಪ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ವೈಶಾಖ್ ಮಂಗಳವಾರ ಸಂಜೆ ಶಾಲೆಯಿಂದ ಮನೆಗೆ ಬಂದು ಉಪಾಹಾರ ಸೇವಿಸಿ ಸಮೀಪದಲ್ಲಿ ಇರುವ ಅಜ್ಜನ ಮನೆಗೆ ತೆರಳಿ ತನ್ನ ಮನೆಗೆ ವಾಪಸಾಗುತ್ತಿದ್ದಾಗ ಪೊದೆ ಗಳೆಡೆಯಿಂದ ಬಂದ ಹೆಬ್ಟಾವು ಏಕಾ ಏಕಿ ಆತನ ಮೇಲೆರಗಿತ್ತು.
ಮೈಮೇಲೆ ಹಾರಿದ ಹೆಬ್ಟಾವಿನೊಂದಿಗೆ ಸೆಣಸಿ ದೇಹದ ಮೇಲೆ ಹಲವಾರು ಗಾಯಗಳಾದ ಹಿನ್ನೆಲೆಯಲ್ಲಿ ಆತನನ್ನು ಅದೇ ದಿನ ರಾತ್ರಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಸೇರಿದ್ದ ವೈಶಾಖ್ ಚೇತರಿಸಿಕೊಂಡು ಗುರುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾನೆ. ಆದರೆ ಅಶ್ಚರ್ಯವೆಂಬತೆ ವೈಶಾಖ್ ಮನೆಗೆ ತಲುಪಿದಾಗ ಮನೆಯಂಗಳದಲ್ಲಿ ಹೆಬ್ಟಾವೊಂದು ಮತ್ತೆ ಪ್ರತ್ಯಕ್ಷವಾಗಿತ್ತು.
ಅಲ್ಲೆ ಸಮೀಪದ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆಯ ತ್ಯಾಜ್ಯ ಡಂಪಿಂಗ್ ಯಾರ್ಡ್ ನಿರ್ಮಾಣಗೊಳ್ಳುತ್ತಿದೆ. ಈ ಪ್ರದೇಶ ನಿರ್ಜನವಾಗಿದ್ದು, ವಿವಿಧೆಡೆ ಹೆಬ್ಟಾವು ಮತ್ತು ಇತರ ಹಾವುಗಳು ಮನೆ ಪರಿಸರದಲ್ಲಿ ಕಾಣಿಸಿಕೊಂಡರೆ ಅವುಗಳನ್ನು ಇಲ್ಲಿ ತಂದು ಬಿಟ್ಟು ಹೋಗುತ್ತಾರೆ. ಅವು ಪರಿಸರದಲ್ಲಿ ಕಾಣ ಸಿಗುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Comments are closed.