ಮಂಗಳೂರು, ಅ. 6: ಬೋಟು ಮಗುಚಿ ಬಿದ್ದ ಪರಿಣಾಮ ಎರಡೂವರೆ ವರ್ಷದ ಮಗು ನೀರುಪಾಲಾಗಿರುವ ಘಟನೆ ಬುಧವಾರ ಸಂಜೆ ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ನಡೆದಿದೆ.
ನೀರುಪಾಲಾಗಿರುವ ಮಗುವನ್ನು ನಾಟೆಕಲ್ ನಿವಾಸಿ ಸನಾಯಿಲ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಹಮ್ಮದ್ ಶಹದನ್ ಎಂದು ಹೆಸರಿಸಲಾಗಿದೆ.
ತಾಂತ್ರಿಕ ದೋಷಕ್ಕೆ ಒಳಗಾದ ಸ್ಪೀಡ್ ಮಗುಚಿ ಬಿದ್ದಿದೆ ಎಂದು ತಿಳಿದು ಬಂದಿದೆ.ಶಹದನ್ ಸೇರಿದಂತೆ ಕುಟುಂಬದ ಏಳು ಮಂದಿ ಪಣಂಬೂರು ಬೀಚ್ಗೆ ಬಂದಿದ್ದು, ಬೀಚ್ನಲ್ಲಿ ಸುತ್ತಾಟ ನಡೆಸಿದ ಸ್ಪೀಡ್ ಬೋಟ್ನಲ್ಲೂ ಸುತ್ತಾಟಕ್ಕೆ ತೆರಳಿದ್ದರು. ಸ್ಪೀಡ್ ಬೋಟ್ ತುಸು ದೂರ ತಲುಪುತ್ತಿದ್ದಂತೆ ಬೋಟ್ನಲ್ಲಿ ತಾಂತ್ರಿಕ ದೋಷ ಉಂಟಾಗಿ ನೀರಿನ ತೆರೆಗೆ ಸಿಲುಕಿ ಬೋಟ್ ಮಗುಚಿ ಬಿದ್ದಿತ್ತು. ಆ ಕೂಡಲೇ ಮಗು ನೀರಿನ ಸೆಳೆತಕ್ಕೆ ಸಿಲುಕಿ ಹೋಗಿದ್ದು ಉಳಿದವರು ಲೈಫ್ ಜಾಕೆಟ್ ಧರಿಸಿದ್ದ ಕಾರಣದಿಂದ ಈಜುವ ಪ್ರಯತ್ನ ನಡೆಸಿದ್ದರು. ಕೂಡಲೇ ಲೈಫ್ಗಾರ್ಡ್ ಸಿಬ್ಬಂದಿ ಐವರನ್ನು ರಕ್ಷಿಸಿದ್ದಾರೆ.
ಬೀಚ್ ರಕ್ಷಣಾ ದಳ, ಮುಳುಗು ತಜ್ಞರು ಸಮುದ್ರದಲ್ಲಿ ಮಗುವಿನ ಪತ್ತೆಗೆ ಹುಡುಕಾಟ ನಡೆಸಿದರೂ ಮಗು ಪತ್ತೆಯಾಗಿಲ್ಲ. ಪಣಂಬೂರು ಎಸಿಪಿ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಲಕ್ಷ: ಆರೋಪ
ತಾಂತ್ರಿಕ ದೋಷದಿಂದ ಬೋಟ್ ಮಗುಚಿ ಬಿದ್ದ ಸಂದರ್ಭದಲ್ಲಿ ಮಗು ನಾಪತ್ತೆಯಾಗಲು ಲೈಫ್ಗಾರ್ಡ್ನವರು ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕುಟುಂಬದ ಸದಸ್ಯರಿಂದ ಕೇಳಿ ಬಂದಿದೆ.
ಸ್ಪೀಡ್ ಬೋಟ್ ಕೇವಲ ಕೆಲವೇ ಮೀಟರ್ ದೂರ ಹೋಗಿದ್ದು, ಲೈಫ್ಗಾರ್ಡ್ನವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರೆ ಮಗುವನ್ನು ರಕ್ಷಿಸಬಹುದಿತ್ತು. ಆದರೆ, ಅವರು ವಿಳಂಬ ಮಾಡಿದ್ದರಿಂದ ಮಗು ನೀರುಪಾಲಾಗಿದೆ ಎಂದು ಕುಟುಂಬದ ಸದಸ್ಯರು ಆರೋಪ ಮಾಡಿದ್ದಾರೆ.
ಆರು ಮಂದಿ ಸ್ಪೀಡ್ ಬೋಟ್ನಲ್ಲಿ ತೆರಳಿದ್ದ ಸಂದರ್ಭದಲ್ಲಿ ಎಲ್ಲರಿಗೂ ಜಾಕೆಟ್ ಒದಗಿಸಿದ್ದರೆ, ಮಗುವಿನ ಜಾಕೆಟ್ ಲೈಫ್ ಗಾರ್ಡ್ನವರಲ್ಲಿರಲಿಲ್ಲ. ಆದ್ದರಿಂದ ಮಗುವಿಗೆ ದೊಡ್ಡವರದ್ದೇ ಜಾಕೆಟ್ ಧರಿಸಲು ನೀಡಿದ್ದು, ಅದರಂತೆ ಮಗು ಜಾಕೆಟ್ ಧರಿಸಿದೆ. ಆದರೆ, ಬೋಟ್ ಮಗುಚಿ ಬಿದ್ದಾಗ ಮಗುವಿನ ಜಾಕೆಟ್ ಶರೀರದಿಂದ ಜಾರಿದೆ. ಇದರಿಂದಾಗಿ ಮಗು ನೀರು ಪಾಲಾಗಿದೆ. ನೀರಿನಲ್ಲಿ ಮಗು ಮುಳುಗುತ್ತಿರುವುದನ್ನು ಕಂಡ ಲೈಫ್ ಗಾರ್ಡ್ನವರು ತಮ್ಮ ಬೋಟ್ನಲ್ಲಿ ಸಮುದ್ರಕ್ಕೆ ಇಳಿದರೂ ಮಗುವಿನ ಸುತ್ತ ರೈಡ್ ಹೊಡೆಯುವುದನ್ನು ಬಿಟ್ಟು ನೀರಿಗೆ ಇಳಿಯಲು ಹಿಂಜರಿದಿದ್ದಾರೆ ಎಂದು ಆರೋಪಿಸಿಲಾಗಿದೆ.
ಕಾರ್ಯಾಚರಣೆಯನ್ನು ಮುಂದುವರಿಸಲು ಸಚಿವ ಖಾದರ್ ಸೂಚನೆ:
ಸ್ಪೀಡ್ ಬೋಟ್ನಲ್ಲಿ ತೆರಳಿದ್ದ ಏಳು ಮಂದಿಯಲ್ಲಿ ಮಗುವೊಂದು ನೀರುಪಾಲಾಗಿರುವ ಘಟನೆಗೆ ಸಂಬಂಧಿಸಿ ಕಾರ್ಯಾಚರಣೆಯನ್ನು ಮುಂದುವರಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸೂಚಿಸಿದ್ದಾರೆ.
ನಾಟೆಕಲ್ ನಿವಾಸಿ ಸನಾಯಿಲ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಹಮ್ಮದ್ ಶಹದನ್ ನೀರುಪಾಲಾಗಿದ್ದರು. ಆತನ ಹುಡುಕಾಟವನ್ನು ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹುಟುಕಾಟ ಕಾರ್ಯಾಚರಣೆಯನ್ನು ಮುಂದುವರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸಚಿವರು ಸೂಚಿಸಿದ್ದಾರೆ.
Comments are closed.