__ಸತೀಶ್ ಕಾಪಿಕಾಡ್
ಮಂಗಳೂರು, ಅ.1: ನವರಾತ್ರಿ ಪ್ರಯುಕ್ತ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಮಂಗಳೂರು ದಸರಾ ಮಹೋತ್ಸವ ಕಾರ್ಯಕ್ರಮಗಳು ಆಕ್ಟೋಬರ್ 1ರಿಂದ ಆರಂಭಗೊಂಡಿದ್ದು, ಇಂದು ಬೆಳಿಗ್ಗೆ ಶಾರದಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯ ಬಳಿಕ ಮಂಗಳೂರೂ ನಗರ ಪೊಲೀಸ್ ಕಮಿಷನರ್ ಶ್ರೀ ಎಮ್. ಚಂದ್ರಶೇಕರ್ ಅವರು ದೀಪ ಬೆಳಗುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು.
ಹಬ್ಬವನ್ನು ಸಂಪ್ರದಾಯ ಪ್ರಕಾರ ಶಿಸ್ತಿನಿಂದ ಆಚರಿಸಬೇಕು. ಮಂಗಳೂರಿನಲ್ಲಿ ನಡೆಯುವ ನವರಾತ್ರಿ ಉತ್ಸವ ಮತ್ತು ದಸರ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಾರ್ಯಕ್ರಮಗಳ ಆಯೋಜಕರು ಮತ್ತು ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸ ಬೇಕು ಎಂದವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್ ಅವರು, ಶ್ರೀ ಕ್ಷೇತ್ರದಲ್ಲಿ ಇಂದಿನಿಂದ 11-10-2016ರವರೆಗೆ ಪ್ರತೀ ದಿನ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ವಿಶೇಷ ಮಹಾ ಪೂಜೆಗಳು ನಡೆಯಲಿರುವುದು. ದಿನಾಂಕ 09-10-2016ರಂದು ಬೆಳಿಗ್ಗೆ ಚಂಡಿಕಾ ಹೋಮ ಹಾಗೂ ಹಗಲೋತ್ಸವವು ಜರಗಲಿರುವುದು. 11-10-2016ರಂದು ಮಧ್ಯಾಹ್ನ 1.00 ಗಂಟೆ ಮಹಾಪೂಜೆಯ ನಂತರ ಮಹಾ ಅನ್ನಸಂತರ್ಪಣೆ ನಡೆಯಲಿರುವುದು. ದಿನಾಂಕ 01-10-2016 ರಿಂದ 10-10-2016ರ ವರೆಗೆ ಕ್ಷೇತ್ರದ ಆವರಣದ ಸಂತೋಷಿ ಕಲಾ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ದೇಶದಲ್ಲಿಯೆ ವಿಶಿಷ್ಟ ವಾಗಿ ಕುದ್ರೋಳಿ ದೇವಸ್ಥಾನದಲ್ಲಿ ನವರಾತ್ರಿ ಮತ್ತು ದಸರ ಆಚರಿಸಲಾಗುತ್ತಿದೆ. ನವರಾತ್ರಿ ಉತ್ಸವ ದಲ್ಲಿ 21 ಲಕ್ಷ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು ಇದರಲ್ಲಿ 11 ಲಕ್ಷ ಎಲ್ ಇ ಡಿ ಬಲ್ಬ್ ಗಳನ್ನು ಹಾಕಲಾಗಿದೆ.ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಚರಿಸಲ್ಪಡುವ ಮಂಗಳೂರು ದಸರಾದ ಅಂಗವಾಗಿ ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ದರ್ಬಾರ್ ಮಂಟಪಕ್ಕೆ ‘ಅಕ್ರೆಲಿಕ್’ ವರ್ಣಾಲಂಕಾರ ಈ ಬಾರಿಯ ವಿಶೇಷತೆಯಾಗಿದೆ.
ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕಳೆದ 26 ವರ್ಷಗಳಿಂದ ವೈಭವದ ದಸರಾ ಆಚರಣೆ ‘ಮಂಗಳೂರು ದಸರಾ’ ಎಂದೇ ಜಗತ್ಪ್ರಸಿದ್ಧಗೊಂಡಿದೆ. ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮಂಗಳೂರು ದಸರಾದ ಅಂಗವಾಗಿ ಈಗಾಗಲೇ ನಗರವು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದೆ. ಸಂಜೆಯಾಗುತ್ತಿದ್ದಂತೆಯೇ ವಿದ್ಯುತ್ ದೀಪಗಳು ಬೆಳಗಿ ಮಂಗಳೂರು ನಗರವೇ ಝಗಮಿಸಲಾರಂಭಿಸಿದೆ. ಇದೇ ವೇಳೆ ಕುದ್ರೋಳಿ ಕ್ಷೇತ್ರವೂ ಸುಣ್ಣ ಬಣ್ಣಗಳೊಂದಿಗೆ ಹೊಸ ಮೆರುಗನ್ನು ಪಡೆದಿದೆ ಎಂದು ಅಧ್ಯಕ್ಷರು ತಿಳಿಸಿದರು.
ನವರಾತ್ರಿ ಉತ್ಸವದ ಮೆರವಣಿಗೆಯು ದಿನಾಂಕ 11-10-2016 ರಂದು ಸಂಜೆ 4.00 ಗಂಟೆಗೆ ಶ್ರೀ ಕ್ಷೇತ್ರದ ಆವರಣದಿಂದ ಹೊರಡಲಿದೆ. ಮೆರವಣಿಗೆಯಲ್ಲಿ ಶಾರದ ಮಾತೆ, ಮಹಾಗಣಪತಿ, ನವದುರ್ಗೆಯರ ಮೂರ್ತಿ ಸಹಿತ ರಾಜ್ಯದ ವಿವಿದೆಡೆಗಳಿಂದ ಬರುವ ಸುಮಾರು 75 ಕ್ಕಿಂತಲೂ ಹೆಚ್ಚಿನ ಸ್ತಬ್ದ ಚಿತ್ರಗಳ ವೈಭವಪೂರ್ಣ ಟ್ಯಾಬ್ಲೋಗಳು ಭಾಗವಹಿಸಲಿವೆ. ಜಿಲ್ಲೆಯ ಹಾಗೂ ರಾಜ್ಯದ ಮತ್ತು ಹೊರ ರಾಜ್ಯಗಳಿಂದ ಆಗಮಿಸುವ ವಿವಿಧ ಜಾನಪದ, ಸಾಂಸ್ಕೃತಿಕ ಹಿನ್ನೆಲೆಯುಳ್ಳ ನೃತ್ಯ ತಂಡಗಳು ಈ ಮೆರವಣಿಗೆಗೆ ವಿಶೇಷ ಸೊಬಗನ್ನು ನೀಡಲಿವೆ ಎಂದು ಎಚ್.ಎಸ್.ಸಾಯಿರಾಂ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರಾಡಳಿತ ಮಂಡಳಿಯ ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್ ಆರ್. (ಆಡ್ವಕೇಟ್), ಮಹಿಳಾ ಘಟಕದ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್,ಮಾಲತಿ ಜನಾರ್ದನ ಪೂಜಾರಿ, ಸಮಿತಿ ಸದಸ್ಯರಾದ ರವಿಶಂಕರ ಮಿಜಾರು, ಬಿ.ಕೆ.ತಾರನಾಥ, ,ಶೇಖರ್ ಪೂಜಾರಿ, ಹರಿಕೃಷ್ಣ ಬಂಟ್ವಾಳ, ಡಾ| ಬಿ.ಜಿ. ಸುವರ್ಣ, ಡಾ| ಅನುಸೂಯ, ಮನಪಾ ಸದಸ್ಯ ರಾಧಾಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
Comments are closed.