ಸುಬ್ರಹ್ಮಣ್ಯ, ಸೆ.28: ಪ್ರಯಾಣಿಕ ಯುವತಿಯೊಬ್ಬಳೊಂದಿಗೆ ನಡೆದ ಚಿಲ್ಲರೆ ಹಣದ ವಿಚಾರವಾಗಿ ನಡೆದ ವಿವಾದದ ಬಳಿಕ ನದಿಗೆ ಹಾರಿದ್ದ ಬಸ್ ಚಾಲಕನ ಮೃತದೇಹ ಇಂದು ಪೂರ್ವಾಹ್ನ ಸುಬ್ರಹ್ಮಣ್ಯದಲ್ಲಿ ಪತ್ತೆಯಾಗಿದೆ.
ಸಾರಿಗೆ ಬಸ್ ನಿರ್ವಾಹಕ ಮಂಗಳೂರಿನ ಗುರುಪುರ ಕೈಕಂಬ ನಿವಾಸಿ ದೇವದಾಸ್(48) ರವಿವಾರ ಸುಬ್ರಹ್ಮಣ್ಯದ ಕುಮಾರಧಾರಾ ನದಿಯ ಸೇತುವೆಯ ಮೇಲಿಂದ ಹಾರಿದವರು ಬಳಿಕ ನಾಪತ್ತೆಯಾಗಿದ್ದರು. ಅವರಿಗಾಗಿ ಮೂರು ದಿನಗಳಿಂದ ತೀವ್ರ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಇಂದು ಬೆಳಗ್ಗೆಯಿಂದ ಮತ್ತೆ ಶೋಧ ಮುಂದುವರಿಸಿದಾಗ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟಕ್ಕಿಂತ ಎರಡು ಕಿ.ಮೀ. ದೂರ ಭಟ್ಟಕಯ ಎಂಬಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.
ದೇವದಾಸ್ರ ಪತ್ತೆಗಾಗಿ ಪುತ್ತೂರಿನ ಅಗ್ನಿಶಾಮಕದಳ ಹಾಗೂ ಗುಂಡ್ಯದ 10 ಮಂದಿ ಈಜುಗಾರರು ಮತ್ತು ಪಾಣೆಮಂಗಳೂರಿನ 5ಮಂದಿ ಈಜುಗಾರರನ್ನು ಒಳಗೊಂಡ ಮುಳುಗು ತಜ್ಞರ ತಂಡ ಕುಮಾರಧಾರಾ ನದಿಯಲ್ಲಿ ನಿರಂತರ ಶೋಧ ನಡೆಸಿತ್ತು.
ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಗೋಪಾಲ್ ಮತ್ತು ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.
Comments are closed.