ಉಡುಪಿ: ಎಲ್ಲೆಲೂ ಭಕ್ತ ಸಾಗರ, ಹುಲಿವೇಷಾಧಾರಿಗಳ ಅಬ್ಬರ, ಗಮನ ಸೆಳೆದ ಕಲಾ ತಂಡಗಳ ಸಡಗರ. ಗೊಲ್ಲರ ವೇಷಾಧಾರಿಗಳು ಮಡಕೆ ಒಡೆದು ಸಂಭ್ರಮಿಸಿ ಕೃಷ್ಣ ಲೀಲೋತ್ಸವಕ್ಕೆ ಚಾಲನೆ ನೀಡಿದರೆ, ಪೇಜಾವರ ಶ್ರೀಗಳು ಕೃಷ್ಣನ ಮೂರ್ತಿ ಜಲಸ್ತಂಭನ ಗೊಳಿಸುವ ಮೂಲಕ ಕೃಷ್ಣ ಜನ್ಮಾಷ್ಟಮಿ ಸಮಾಪನಗೊಳಿಸಿದರು.
ಉಡುಪಿಯ ಪೊಡವಿಗೊಡೆಯ ಶ್ರೀ ಕೃಷ್ಣನ ಕ್ಷೇತ್ರ ಇಂದು ಅಕ್ಷರಶ: ಭಕ್ತರಿಂದಲೇ ತುಂಬಿ ತುಳುಕುತ್ತಿತ್ತು.ಮೂರು ದಿನಗಳ ಸಂಭ್ರಮದ ಕೊನೆಯಲ್ಲಿ ವಿಟ್ಲಪಿಂಡಿ ಉತ್ಸವ ಭಕ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಅನೇಕ ಕಲಾತಂಡಗಳು, ಹುಲಿವೇಷಾಧಾರಿಗಳು ಹಾಗೂ ವಿವಿಧ ವೇಷ ಭೂಷಣ ತೊಟ್ಟ ಕಲಾವಿದರು ತಮ್ಮ ಪ್ರದರ್ಶನ ತೋರಿಸಿ ವಿಟ್ಲಪಿಂಡಿ ಉತ್ಸವಕ್ಕೆ ಮೆರುಗು ತಂದರು. ೩.೩೦ಕ್ಕೆ ಸರಿಯಾಗಿ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಪಲ್ಲಕಿಯಲ್ಲಿ ತರಲಾಯಿತು. ಬಳಿಕ ಪೇಜಾವರ ಶ್ರೀಗಳು ಅದನ್ನ ನವರತ್ನ ರಥದಲ್ಲಿಟ್ಟು ಪೂಜೆ ನಡೆಸಿದರು. ಚಿನ್ನದ ಹಾಗೂ ನವರತ್ನದ ರಥದಲ್ಲಿ ಕೃಷ್ಣನ ರಥೋತ್ಸವ ನಡೆಯಿತು. ಕೃಷ್ಣನ ಜನ್ಮವನ್ನು ಸಾರುವ ಗೊಲ್ಲರ ವೇಷಾಧಾರಿಗಳು ಕೃಷ್ಣ ಮಠದ ಎದುರು ಸಹಿತ ವಿವಿದೆಡೆ ಇಡಲಾಗಿದ್ದ ಮೊಸರು ತುಂಬಿದ ಮಡಕೆಯನ್ನು ಒಡೆದು ಸಂಭ್ರಮಿಸಿದರು.
ಪೇಜಾವರ ಶ್ರೀಗಳ ಜೊತೆ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಅಷ್ಟಮಠಾದೀಶರು ಸಾಥ್ ನೀಡಿದರು. ಹುಲಿವೆಷಾಧಾರಿಗಳ ಕುಣಿತ, ಮುಂಬೈ ಕಲಾತಂಡ ಸೇರಿದಂತೆ ಅನೇಕ ಕಲಾ ತಂಡಗಳು ವಿಟ್ಲಪಿಂಡಿಯ ಮಹೋತ್ಸವಕ್ಕೆ ಮೆರುಗುತಂದರು. ಭಕ್ತರಿಗೆ ಪ್ರಸಾದ ವಿತರಿಸಿದ ಬಳಿಕ ಮದ್ವಸರೋವರದಲ್ಲಿ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೃಷ್ಣನ ಮಣ್ಣಿನ ( ಮೃಣ್ಮಯ) ಮೂರ್ತಿಯನ್ನು ಜಲಸ್ತಂಭ ಮಾಡುವ ಮೂಲಕ ಕೃಷ್ಣ ಜನ್ಮಾಷ್ಟಮಿ ಸಮಾಪನಗೊಂಡಿತು.
Comments are closed.